ಭಟ್ಟರ ಡ್ರಾಮಾ ಚಿತ್ರದಿಂದ ಪ್ರಕಾಶ್ ರೈ ಔಟ್
ಯೋಗರಾಜ್ ಭಟ್ ನಿರ್ದೇಶನದ 'ಡ್ರಾಮಾ'ದಲ್ಲಿ ನಟಿಸಬೇಕಾಗಿದ್ದ ಕನ್ನಡ ಮೂಲದ ದಕ್ಷಿಣ ಭಾರತದ ಪ್ರಸಿದ್ಧಿಯ ಪ್ರಕಾಶ್ ರಾಜ್ (ಪ್ರಕಾಶ್ ರೈ), ಈ ಚಿತ್ರದಿಂದ ಹೊರನಡೆದಿದ್ದಾರೆ.
ಅವರ ತಾಯಿಯ ಅನಾರೋಗ್ಯ ನಿಮಿತ್ತ ಪ್ರಕಾಶ್ ರಾಜ್ ಅನಿವಾರ್ಯವಾಗಿ ಈ ನಿರ್ಧಾರ ಕೈಗೊಂಡಿದ್ದಾರೆ. ಅವರ ತಾಯಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಅವರಿಗೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ.
ಈ ವಿಷಯವನ್ನು ಯೋಗರಾಜ್ ಭಟ್ ಕೂಡ ಖಚಿತಪಡಿಸಿದ್ದಾರೆ. "ಪ್ರಕಾಶ್ ರಾಜ್ ತಾಯಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಈ ಸಮಯದಲ್ಲಿ ಅವರು ತಾಯಿಯ ಯೋಗಕ್ಷೇಮ ನೋಡಿಕೊಳ್ಳಲೇಬೇಕಾಗಿದೆ. ಇಂಥಹ ವೇಳೆಯಲ್ಲಿ ಮರುಮಾತನಾಡುವ ಪ್ರಶ್ನೆಯೇ ಇಲ್ಲ.
ನಾನೀಗ ಶರತ್ ಕುಮಾರ್ ಮತ್ತು ಅತುಲ್ ಕುಲಕರ್ಣಿ ಜೊತೆ ಮಾತುಕತೆ ನಡೆಸಲಿದ್ದೇನೆ. ಯಾರಿಗೆ ಡೇಟ್ಸ್ ಕೊಡಲು ಸಾಧ್ಯವೋ ಅವರನ್ನು ಕರೆತಂದು ಚಿತ್ರೀಕರಣ ಮುಂದುವರಿಸಲಿದ್ದೇನೆ" ಎಂದಿದ್ದಾರೆ ಡ್ರಾಮಾ ಚಿತ್ರದ ನಿರ್ದೇಶಕ ಭಟ್ಟರು
ಭಟ್ಟರ ಡ್ರಾಮಾ ಚಿತ್ರೀಕರಣ ಸತತವಾಗಿ ನಡೆಯುತ್ತಿದೆ. ಇತ್ತೀಚಿಗೆ ರೆಬೆಲ್ ಸ್ಟಾರ್ ಅಂಬರೀಷ್ ಅವರ ಭಾಗದ ಶೂಟಿಂಗ್ ಮುಗಿದಿದೆ. ನಾಯಕ್ ಯಶ್ ಹಾಗೂ ನಾಯಕಿ ರಾಧಿಕಾ ಪಂಡಿತ್ ಅಲ್ಲದೇ ಇನ್ನೊಬ್ಬ ಪ್ರಮುಖ ಪಾತ್ರಧಾರಿ ನೀನಾಸಂ ಸತೀಶ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.
ಸತೀಶ್ ಜೋಡಿಯಾಗಿ ಸಿಂಧು ಲೋಕನಾಥ್ ನಟಿಸಿದ್ದಾರೆ. ಇದೀಗ ಪ್ರಕಾಶ್ ರಾಜ್ ಔಟ್ ಆಗಿದ್ದರಿಂದ ಆ ಜಾಗಕ್ಕೆ ಬರಲಿರುವವರ ಚಿತ್ರೀಕರಣ ನಡೆಯಬೇಕಿದೆ ಅಷ್ಟೇ. ಒಟ್ಟಿನಲ್ಲಿ, ಎಲ್ಲವನ್ನೂ ಮುಗಿಸಿ ಜುಲೈನಲ್ಲಿ ಡ್ರಾಮಾ ತೆರೆಗೆ ಬರಲಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











