ಪುನೀತ್ ಸ್ಮರಣಾರ್ಥ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ ನಟಿ
ನಟ ಪುನೀತ್ ರಾಜ್ಕುಮಾರ್ ಅಗಲಿಕೆಯಿಂದ ಇಡೀಯ ಚಿತ್ರರಂಗ ಆಘಾತಕ್ಕೆ ಒಳಗಾಗಿದೆ. ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ಅಪ್ಪುವನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಅಪ್ಪುವಿನ ಆತ್ಮೀಯತೆ, ಅಪ್ಪುವಿನ ಡ್ಯಾನ್ಸ್ ನಟನೆ, ಅಪ್ಪುವಿನ ಸಿನಿಮಾ ಪ್ರೀತಿ, ಅಪ್ಪುವಿನ ಸಿನಿಮಾಗಳು, ಹೀಗೆ ಒಬ್ಬೊಬ್ಬರಿಗೂ ಅಪ್ಪುವನ್ನು ನೆನಪು ಮಾಡಿಕೊಳ್ಳಲು ಒಂದೊಂದು ಕಾರಣ.
ಅಪ್ಪುವನ್ನು ನೆನಪು ಮಾಡಿಕೊಳ್ಳುವುದು ಮಾತ್ರವಲ್ಲ ಅವರ ನೆನಪನ್ನು ಜೀವಂತ ಇಡಬೇಕು ಎಂದು ಹಲವು ನಟ-ನಟಿಯರು ಈಗಾಗಲೇ ಹೇಳಿದ್ದಾರೆ. ಅಪ್ಪುವಿನ ಗೆಳತಿ ನಟಿ ರಮ್ಯಾ ಈ ಬಗ್ಗೆ ಉದ್ದನೆಯ ಪತ್ರವೊಂದನ್ನು ಸಹ ಬರೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಇದೀಗ ನಟಿ ಪ್ರಣಿತಾ ಸುಭಾಷ್ ಅಪ್ಪುವಿನ ನೆನಪಲ್ಲಿ ಸಮಾಜ ಕಾರ್ಯಕ್ಕೆ ಮುಂದಾಗಿದ್ದಾರೆ. ಸ್ವತಃ ಉತ್ತಮ ಪೌರರಾಗಿದ್ದ, ಸಮಾಜಮುಖಿ ವ್ಯಕ್ತಿಯಾಗಿದ್ದ ಪುನೀತ್ ಅವರ ಆಶಯಕ್ಕೆ ಇಂಬು ನೀಡುವಂತೆ ಬಡವರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಟಿ ಆಯೋಜನೆ ಮಾಡಿದ್ದಾರೆ.

ಜಯನಗರ 9ನೇ ಬ್ಲಾಕ್ನ, ಇಂದಿರಾ ನಗರ ಕಾಲೊನಿಯ ಅಂಬೇಡ್ಕರ್ ಭವನದಲ್ಲಿ ನಾಳೆ (ನವೆಂಬರ್ 03)ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಪುನೀತ್ ರಾಜ್ಕುಮಾರ್ಗಾಗಿ ಈ ಆರೋಗ್ಯ ತಪಾಸಣಾ ಶಿಬಿರ ನಡೆಯುತ್ತಿದ್ದು, ಪ್ರಣಿತಾ ಫೌಂಡೇಶನ್ ಹಾಗೂ ಆಸ್ಟರ್ ಆಸ್ಪತ್ರೆ ಜಂಟಿಯಾಗಿ ಈ ಶಿಬಿರ ಆಯೋಜಿಸಿದೆ.
ಪ್ರಣಿತಾ ಸುಭಾಶ್ ಈ ಹಿಂದೆಯೂ ಹಲವು ಬಾರಿ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಿಗಿಸಿಕೊಂಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಉಚಿತ ಆಹಾರ ವಿತರಣೆ, ಪಿಪಿಇ ಕಿಟ್ ವಿತರಣೆ, ರಕ್ತದಾನ ಶಿಬಿರ, ಸ್ವಚ್ಛತಾ ಕರ್ಮಿಗಳಿಗೆ ಆರೋಗ್ಯ ತಪಾಸಣೆಯಂಥಹಾ ಹಲವು ಕಾರ್ಯಗಳನ್ನು ಮಾಡಿದ್ದಾರೆ. ಇದೀಗ ತಮ್ಮದೇ ವೃತ್ತಿಯ ಎತ್ತರದ ನಟನೊಬ್ಬನ ನೆನಪಿಗಾಗಿ ಸಮಾಜ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಪ್ರಣಿತಾರ ಈ ನಡೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಕಾರಣವಾಗಿದೆ.

ಪುನೀತ್ ರಾಜ್ಕುಮಾರ್ ಅಕ್ಟೊಬರ್ 29ರಂದು ಹೃದಯಾಘಾತದಿಂದ ನಿಧನಹೊಂದಿದ್ದಾರೆ. ಅವರನ್ನು ಅಕ್ಟೋಬರ್ 31 ರಂದು ಮುಂಜಾನೆ ಕಂಠೀರವ ಸ್ಟುಡಿಯೋದಲ್ಲಿ ಮಣ್ಣು ಮಾಡಲಾಯ್ತು. ಇಂದು (ನವೆಂಬರ್ 02) ಕುಟುಂಬಸ್ಥರು ಹಾಲು-ತುಪ್ಪ ಕಾರ್ಯ ನೆರವೇರಿಸಿದರು.


Click it and Unblock the Notifications











