ಫಸ್ಟ್ ಪಂಕ್ತಿಲಿ ಊಟ ಮಾಡ್ಬೇಕು, ಸಿನಿಮಾ ಫಸ್ಟ್ ಶೋ ನೋಡಬೇಕು: ಪ್ರಥಮ್
ಟೈಟಲ್ ನೋಡಿ 'ಬಿಗ್ ಬಾಸ್ ಕನ್ನಡ 4' ವಿನ್ನರ್ ಪ್ರಥಮ್ ಯಾವ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ರಪ್ಪಾ ಅಂತ ನಿಮಗೆಲ್ಲಾ ಕುತೂಹಲ ಹೆಚ್ಚಾಗಬಹುದು. 'ಒಳ್ಳೇ ಹುಡುಗ' ಪ್ರಥಮ್ ಈ ಒಳ್ಳೇ ಮಾತುಗಳನ್ನು ಹೇಳಿರುವುದು ಇತ್ತೀಚೆಗೆ ಬಿಡುಗಡೆ ಆಗಿ ಸ್ಯಾಂಡಲ್ ವುಡ್ ನಲ್ಲಿ ಸಖತ್ ಸದ್ದು ಮಾಡುತ್ತಿರುವ 'ಹೊಂಬಣ್ಣ' ಚಿತ್ರ ನೋಡಿ.
ಹೌದು. ಬಿಗ್ ಬಾಸ್ ಖ್ಯಾತಿಯ ಪ್ರಥಮ್, ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ 'ಹೊಂಬಣ್ಣ' ಚಿತ್ರವನ್ನು ಎರಡನೇ ಬಾರಿ ನೋಡಿ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳುವ ವೇಳೆ ಮೊದಲು ಹೇಳಿದ್ದು ನಾವು ಟೈಟಲ್ ನೀಡಿರುವ ಹಾಗೆಯೇ. ಸಿನಿಮಾನ ಫಸ್ಟ್ ಡೇ ಫಸ್ಟ್ ಶೋ ನೋಡಬೇಕು, ಮದುವೆ ಫಸ್ಟ್ ಪಂಕ್ತಿಯಲ್ಲಿ ಊಟಮಾಡಬೇಕು ಅನ್ನೋ ಮಾತಿದೆ. ಇನ್ನು ಈ ಚಿತ್ರವನ್ನು ಎರಡನೇ ಬಾರಿ ಏಕೆ ನೋಡಿದೆ ಅಂದ್ರೆ ಸಿನಿಮಾ ಬಹಳ ಚೆನ್ನಾಗಿದೆ ಎಂದಿದ್ದಾರೆ.

'ಈ ಸಿನಿಮಾದ ಒಂದು ವಿಶೇಷತೆ ಅಂದ್ರೆ, ವಿಷ್ಣುವರ್ಧನ್ ರವರ 'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರವನ್ನು ನೀವೆಲ್ಲಾ ನೋಡಿರಬಹುದು. ಅಂತಹ ಒಂದು ಕಥಾವಸ್ತುವನ್ನು 'ಹೊಂಬಣ್ಣ' ಸಹ ಹೊಂದಿದೆ. ನೆಕ್ಸಲೈಟ್ ಸಮಾಜದಲ್ಲಿ ಹೇಗೆ ಹುಟ್ಟಿಕೊಳ್ಳುತ್ತಾರೆ ಎಂಬುದನ್ನು ಬಹಳ ರೂಟ್ ಲೆವೆಲ್ ನಿಂದ ರಿಸರ್ಚ್ ಮಾಡಿ ತೋರಿಸಿದ್ದಾರೆ. ಮುಖ್ಯವಾಗಿ ಹೇಳಬೇಕಾದ ಇನ್ನೊಂದು ವಿಷಯ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರು ಈ ಚಿತ್ರವನ್ನು ನೋಡಬೇಕು. ಕಾರಣ ನಿಮಗೆ ತುಂಬಾ ಹತ್ತಿರವಾದದ್ದು ಏನೋ ಒಂದು ಇದೆ. ಆದ್ದರಿಂದ ನೀವು ಈ ಚಿತ್ರ ನೋಡಲೇಬೇಕು ಅಂತ ಕೇಳಿಕೊಳ್ಳುತ್ತೇನೆ' ಎಂದು ಚಿತ್ರದ ಕುರಿತು ಮಾತನಾಡಿದ್ದಾರೆ.
ಅಲ್ಲದೇ 'ಸಿನಿಮಾ ಸಿದ್ಧ ಸೂತ್ರ ಬಿಟ್ಟು ಮರ ಸುತ್ತುವುದು, ಲವ್ ಅದನ್ನೆಲ್ಲಾ ಬಿಟ್ಟು ಬೇರೆ ತರಹದ ಒಂದು ಸಿನಿಮಾನ 'ಹೊಂಬಣ್ಣ' ಚಿತ್ರತಂಡ ಮಾಡಿದೆ. 'ಹೊಂಬಣ್ಣ'ದಲ್ಲಿ ನೂರಾರು ಬಣ್ಣ ನನ್ನ ಕಣ್ಣಿಗೆ ಕಾಣಿಸಿತು. ಕನ್ನಡದ ಮಹಾ ಜನತೆಗಳೇ ನೀವು ಕೂಡ ಈ ಚಿತ್ರ ನೋಡಿ, ನಿಮ್ಮ ಪಕ್ಕದ ಮನೆಯವ್ರಿಗೂ ಹೇಳಿ ಅವರನ್ನು ಕರೆದುಕೊಂಡು ಬನ್ನಿ' ಎಂದಿದ್ದಾರೆ ಪ್ರಥಮ್. ಅವರು ಮಾತನಾಡಿರುವ ವಿಡಿಯೋ ನೋಡಲು ಕ್ಲಿಕ್ ಮಾಡಿ
ಜುಲೈ 7 ರಂದು ತೆರೆಕಂಡಿರುವ 'ಹೊಂಬಣ್ಣ' ಚಿತ್ರವು ಥಿಯೇಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನಗಳನ್ನು ಕಾಣುತ್ತಿದೆ. ಈ ಚಿತ್ರಕ್ಕೆ ರಕ್ಷಿತ್ ತೀರ್ಥಹಳ್ಳಿ ಎಂಬುವರು ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರವನ್ನು ಸಂಚಲನ ಮೂವೀಸ್ ಬ್ಯಾನರ್ ಅಡಿಯಲ್ಲಿ ರಾಮಕೃಷ್ಣ ನಿಗಡೆ ನಿರ್ಮಾಣ ಮಾಡಿದ್ದಾರೆ.


Click it and Unblock the Notifications











