ಶ್ರೀಗಳ ಬಗ್ಗೆ ಪರಿಜ್ಞಾನ ಇಟ್ಟುಕೊಂಡು ಮಾತಾಡಬೇಕಿತ್ತು: ಹಂಸಲೇಖ ವಿರುದ್ಧ ಪ್ರತಾಪ್ ಸಿಂಹ ಕಿಡಿ
ಹಂಸಲೇಖ ಅವರು ಪರಿಜ್ಞಾನದಿಂದ ಪೇಜಾವರರ ಶ್ರೀಗಳ ಬಗ್ಗೆ ಮಾತಾಡಬೇಕಿತ್ತು ಸಂಸದ ಪ್ರತಾಪಸಿಂಹ ಹೇಳಿದರು.
ಪೇಜಾವರ ಶ್ರೀಗಳು ಮಾಂಸ ತಿನ್ನುತ್ತಿದ್ದರ ಎಂಬ ಹಂಸಲೇಖರ ಹೇಳಿಕೆ ವಿಚಾರವಾಗಿ ಮೈಸೂರಿನಲ್ಲಿ ಪ್ರತಿಕ್ರಯಿಸಿದ ಅವರು, ಜನಾಭಿಪ್ರಾಯದ ವಿರುದ್ದ ಮಾತಾನಾಡಿದ ನಂತರ ಕ್ಷಮೆಯಾಚಿಸುವ ಛಾಳಿ ಹೆಚ್ಚಾಗಿದೆ. ಪೇಜಾವರ ಶ್ರೀಗಳು ಬೇರೆ ರೀತಿಯ ಜಾತಿ ಸ್ವಾಮೀಜಿ ರೀತಿ ಅಲ್ಲ. ಕರ್ಮಠ ವ್ಯವಸ್ಥೆಯನ್ನು ಮೀರಿ ಸಮಾನತೆ ಸಾರಿದವರು ಎಂದರು.
ಸಾಧು ಸಂತರ ಆಹಾರ ಪದ್ಧತಿ ಸಸ್ಯಹಾರ, ಮನಸ್ಸಿನ ತಾರತಮ್ಯ ತೆಗೆದು ಹಾಕಲು ದಲಿತರ ಮನೆಗೆ ಶ್ರೀಗಳು ಹೋಗಿದ್ದರೆ ಹೊರತು ಆಹಾರ ಪದ್ಧತಿಯ ಸಮಾನತೆಗೆ ಅಲ್ಲ. ನಿಮ್ಮ ಮನೆಗೆ ಮುಸ್ಲಿಂ ಸ್ನೇಹಿತರ ಕರೆಯಿರಿ, ಅವರಿಗೆ ಹಂದಿ ಮಾಂಸದ ಊಟ ಹಾಕಿ, ಅವರು ತಿನ್ನುತ್ತಾರಾ ನೋಡಿ ಎಂದು ಕಿಡಿಕಾರಿದರು.

ಪ್ರಗತಿಪರ ಅನ್ನಿಸಿಕೊಳ್ಳುವ ಗೀಳು: ಪ್ರತಾಪ್ ಸಿಂಹ
ಮುಸ್ಲಿಂ ಧರ್ಮದಲ್ಲಿ ಹಂದಿ ಮಾಂಸ ತಿನ್ನುವುದು ನಿಷೇಧ. ಅದಕ್ಕೆ ಅವರು ತಿನ್ನುವುದಿಲ್ಲ. ಆಗ ಅದನ್ನು ತಪ್ಪು ಎನ್ನುತ್ತೀರಾ? ಪ್ರಗತಿಪರ ಅನ್ನಿಸಿ ಕೊಳ್ಳುವ ಗೀಳಿಗೆ ಬಿದ್ದು, ಪ್ರಚಾರಕ್ಕಾಗಿ ಹೀಗೆ ಮಾತಾಡುತ್ತಿದ್ದಾರೆ ಎಂದರು. ಹಂಸಲೇಖಾರವರು ಬಾಯಿ ತಪ್ಪಿನಿಂದ ಈ ರೀತಿ ಹೇಳಿದ್ದಾರೆ ಎಂದು ಅನ್ನಿಸುವುದಿಲ್ಲ. ಪ್ರಚಾರದ ಗೀಳಿಗೆ ಬಿದ್ದಾಗ ಅಸಂಬದ್ಧ ಮಾತು ಬರುತ್ತದೆ ಎಂದು ಕುಟುಕಿದರು.

''ಮತ್ತೊಬ್ಬ ಸಾಧಕನ ಬಗ್ಗೆ ಲಘುವಾಗಿ ಮಾತನಾಡಬಾರದಿತ್ತು''
''ಹಂಸಲೇಖ ಅವರು ಚಲನಚಿತ್ರರಂಗದಲ್ಲಿ ಸಾಹಿತ್ಯ ರಚನೆ, ಸಂಗೀತ ಕ್ಷೇತ್ರದಲ್ಲಿ ಬಹಳ ದೊಡ್ಡ ಸಾಧನೆ ಮಾಡಿ ನಮ್ಮೆಲ್ಲರ ಹೃದಯದಲ್ಲಿ ಒಂದು ಶಾಶ್ವತ ಸ್ಥಾನ ಪಡೆದುಕೊಂಡಿರುವ ಒಬ್ಬ ಒಳ್ಳೆಯ ವ್ಯಕ್ತಿ. ಆದರೆ ಪ್ರಗತಿಪರರೆಂದು ಗುರುತಿಸಿಕೊಳ್ಳುವ ಸಲುವಾಗಿ ಮತ್ತೊಬ್ಬ ಸಾಧಕನ ಬಗ್ಗೆ ಲಘುವಾಗಿ ಮಾಡಿದ್ದಾರೆ. ಇದು ವೈಯಕ್ತಿಕವಾಗಿ ನನಗೆ ನೋವುಂಟು ಮಾಡಿದೆ ಬೇಸರ ಮಾಡಿದೆ. ಪೇಜಾವರ ಶ್ರೀಗಳ ಕೋಟ್ಯಂತರ ಅಭಿಮಾನಿಗಳಿಗೂ ಸಹ ನೋವು ಮತ್ತು ಸಿಟ್ಟು ಎರಡೂ ತರಿಸಿದೆ'' ಎಂದಿದ್ದಾರೆ ಪ್ರತಾಪ್ ಸಿಂಹ.

ಪೇಜಾವರ ಶ್ರೀಗಳು ಚಿಕನ್ ಕೊಟ್ಟಿದ್ದರೆ ತಿನ್ನುತ್ತಿದ್ದರೆ? ಹಂಸಲೇಖ ಪ್ರಶ್ನೆ
ಮೈಸೂರಿನಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ್ದ ಸಂಗೀತ ನಿರ್ದೇಶಕ ಹಂಸಲೇಖ, ''ಪೇಜಾವರ ಸ್ವಾಮಿಗಳು ದಲಿತರ ಮನೆಗೆ ಹೋದರು ಎಂಬುದು ಬಹಳ ಸುದ್ದಿಯಾಗಿತ್ತು. ದಲಿತರ ಮನೆಗೆ ಹೋಗಿ ಪೇಜಾವರ ಸ್ವಾಮಿಗಳು ಅಲ್ಲಿ ಕುಳಿತಿದ್ದರಷ್ಟೆ ಅವರು ಕೋಳಿ ಕೊಟ್ಟರೆ ತಿನ್ನಲಿಕ್ಕಾಗುತ್ತದೇನು? ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ಅವರು ತಿನ್ನುತ್ತಿದ್ದರೇನು? ಲಿವರ್ ಫ್ರೈ ಕೊಟ್ಟಿದ್ದರೆ ತಿನ್ನುತ್ತಿದ್ದರೇನು?'' ಎಂದು ಹಂಸಲೇಖ ಪ್ರಶ್ನೆ ಮಾಡಿದ್ದರು. ಹಂಸಲೇಖರ ಈ ಮಾತಿಗೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.

ಬಲಿತರು ದಲಿತನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಬೇಕು: ಹಂಸಲೇಖ
ಅಸ್ಪೃಶ್ಯತೆ ಬಗ್ಗೆ ಮಾತನಾಡುತ್ತಾ ಬಿಳಿಗಿರಿ ರಂಗಯ್ಯನ ಉದಾಹರಣೆ ನೀಡಿದ್ದ ಹಂಸಲೇಖ, ''ಬಿಳಿಗಿರಿ ರಂಗಯ್ಯ ಸೋಲಿಗರ ಮನೆಗೆ ಹೋಗಿ ಆ ಹೆಣ್ಣಿನೊಂದಿಗೆ ಸಂಸಾರ ಮಾಡುವುದರಲ್ಲಿ ಯಾವ ದೊಡ್ಡ ವಿಷಯವಿದೆ. ರಂಗಯ್ಯ, ಆ ಸೋಲಿಗರ ಹೆಣ್ಣು ಮಗಳನ್ನು ಕರೆದುಕೊಂಡು ಹೋಗಿ ತನ್ನ ದೇವಸ್ಥಾನದಲ್ಲಿ ಇಟ್ಟು ಗೌರವ ಮಾಡಿದ್ದರೆ ಅದು ರಂಗಯ್ಯನ ತಾಕತ್ತು. ಬೆಳಕು ಇಲ್ಲದಾಗ ಸೋಲಿಗರ ಮನೆಗೆ ಬಂದು ಆ ಹೆಣ್ಣು ಮಗಳೊಂದಿಗೆ ಸಂಸಾರ ನಡೆಸಿ ಬೆಳಕು ಹರಿಯುವುದರೊಳಗೆ ಹೋಗಿ ಕಲ್ಲಾಗುವುದು ಅದೇನು ದೊಡ್ಡ ವಿಷಯ. ಅದು ನಾಟಕ, ಅದು ಬೂಟಾಟಿಕೆ'' ಎಂದ ಹಂಸಲೇಖ, ''ಬಲಿತರು ದಲಿತರ ಮನೆಗೆ ಹೋಗುವುದು ಅದೇನು ದೊಡ್ಡ ವಿಷಯ? ಬಲಿತರು ದಲಿತರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಬೇಕು, ಊಟ ಹಾಕಬೇಕು, ಕುಡಿಯಲು ಲೋಟ ಕೊಡಬೇಕು ಆ ಲೋಟವನ್ನು ನಾವು ತೊಳೆಯುತ್ತೀವಿ ಎಂದು ಅವರು ಹೇಳಬೇಕು'' ಎಂದಿದ್ದರು.


Click it and Unblock the Notifications











