ಸ್ಟಾರ್ ನಟರು ಯಾರಿಗೆ ಬೇಕು, ನನಗೆ ಕಥೆ ಮುಖ್ಯ

ಆ ಚಿತ್ರ ಬಿಡುಗಡೆಯಾದ ನಂತರ ಹಲವಾರು ಆಫರ್ ಗಳು ಇಬ್ಬರನ್ನೂ ಹುಡುಕಿಕೊಂಡು ಬಂದಿದ್ದು ಈಗ ಇತಿಹಾಸ. ಸದ್ಯಕ್ಕೆ ಪಾರುಲ್ ಯಾದವ್ ಕೋಮಲ್ ಅಭಿನಯದ ನಂದೀಶ' ಹಾಗೂ ಸುದೀಪ್ ಜೊತೆ ಬಚ್ಚನ್' ಚಿತ್ರದಲ್ಲಿ ಬ್ಯೂಸಿಯಾಗಿದ್ದಾರೆ.
ಪಾರುಲ್ ಇದುವರೆಗೂ ಮಾತಿಗೆ ಸಿಕ್ಕಿದ್ದು ಬಹಳ ಕಡಿಮೆ. ಇದೀಗ ಒಂದಷ್ಟು ವಿಷಯದ ಬಗ್ಗೆ ಪಾರುಲ್ ಮನಬಿಚ್ಚಿ ಮಾತನಾಡಿದ್ದಾರೆ. ಗೋವಿಂದಾಯ ನಮಃ ಚಿತ್ರ ಹಿಟ್ ಆದ ಮೇಲೆ ನನಗೆ ಆಫರ್ ಗಳ ಮೇಲೆ ಆಫರ್ ಬಂತು.
ದರ್ಶನ್, ಗಣೇಶ್, ವಿಜಿ... ಹೀಗೆ ಸ್ಟಾರ್ ನಟರೊಂದಿಗೆ ನಟಿಸಲು ಆಫರ್ ಬಂದಿತ್ತು. ನಂಬಿದರೆ ನಂಬಿ ಬಿಟ್ರೆ ಬಿಡಿ... ಎಲ್ಲವನ್ನೂ ಸಾರಾಸಗಾಟವಾಗಿ ತಿರಸ್ಕರಿಸಿಬಿಟ್ಟೆ. ಸ್ಟಾರ್ ನಟರು ಯಾರಿಗೆ ಬೇಕು, ನನಗೆ ಬೇಡ. ನನಗೆ ಸ್ಟಾರ್ ನಟರೊಂದಿಗೆ ನಟಿಸೋದಕ್ಕಿಂತ ಕಥೆ ಮುಖ್ಯ. ಅದರಲ್ಲಿ ನನ್ನ ಪಾತ್ರಕ್ಕೆ ಎಷ್ಟರ ಮಟ್ಟಿಗೆ ಪ್ರಾಮುಖ್ಯತೆ ಇದೆ ಅನ್ನೋದು ಮೊದಲು ನೋಡುತ್ತೇನೆ, ನಂತರ ಹೀರೋ ಮಾತು ಎಂದು ಒಂದೇ ಉಸಿರಿಗೆ ಹೇಳಿದರು ಪಾರುಲ್.
ಬಚ್ಚನ್ ಚಿತ್ರದಲ್ಲಿ ನಟಿಸೋಕೂ ಮುನ್ನ ನನ್ನ ಪಾತ್ರದ ಕಥೆ ಕೇಳಿಯೇ ಕಾಲ್ಶೀಟ್ ನೀಡಿದ್ದು. ಇದರಲ್ಲಿ ಸುದೀಪ್, ಶಶಾಂಕ್ ಅವರ ಸಹಕಾರ ತುಂಬಾ ಇದೆ. ತುಂಬಾ ದೊಡ್ಡ ಕಾಲ್ಶೀಟ್ ನೀಡಿರುವ ಸಿನಿಮಾವದು. ಒಟ್ಟು ಮೂರು ರೀತಿಯ ಪಾತ್ರವಿದೆ.
ಐದೈದು ನಿಮಿಷಕ್ಕೂ ಬದಲಾಗ್ತಾ ಇರುತ್ತೆ. ನೋಡುಗರಿಗೆ ಫುಲ್ ಕನ್ಫ್ಯೂಸ್ ಆಗೋದು ಗ್ಯಾರಂಟಿ. ಸುಮಾರು 100 ದಿನಗಳ ಶೆಡ್ಯೂಲ್ ಇರುವ ಚಿತ್ರ. ಅದರಲ್ಲಿ ನನ್ನ ಕಾಲ್ಶೀಟ್ 50 ದಿನ ಇದೆ. ಅಂದಮೇಲೆ ನೀವೇ ಊಹಿಸಿ ನನ್ನ ಪಾತ್ರ ಎಂಥದ್ದು ಅಂತ ಎಂದು ಹೇಳಿ ಮಾತನ್ನು ನಂದೀಶ ಚಿತ್ರದ ಕಡೆ ಹೊರಳಿಸಿದರು.
ನಂದೀಶ ಚಿತ್ರದ ಪ್ರೆಸ್ ಮೀಟ್ ನಲ್ಲಿ ಮಾತನಾಡುತ್ತಿದ್ದ ಪರೋಲ್, ಎಷ್ಟೋ ಜನ ಕೋಮಲ್ ಜೊತೆ ಪಾರುಲ್ ಮತ್ತೆ ಆ್ಯಕ್ಟ್ ಮಾಡೋಲ್ಲ, ಗೆಸ್ಟ್ ರೋಲ್ ಅಷ್ಟೇ ಅಂತ ಗಾಸಿಪ್ ಹರಡಿಸಿದ್ರು. ಬಚ್ಚನ್ ಚಿತ್ರಕ್ಕೆ ಹೇರಳವಾಗಿ ಡೇಟ್ಸ್ ಕೊಟ್ಟಿದ್ದೆ ಅದಕ್ಕಾಗಿ ಸ್ವಲ್ಪ ಏರುಪೇರಾಯಿತು.
ನಂದೀಶ ಕೂಡ ಕಥೆ ಮತ್ತು ನಟನೆಗೆ ಪ್ರಾಮುಖ್ಯತೆವಿರುವ ಸಿನಿಮಾ. ಎರಡು ಹಾಡು ಹಾಗೂ ಅರ್ಧ ಚಿತ್ರದಷ್ಟು ನಾನೇ ಇರುತ್ತೇನೆ. ಸೋ... ಅದನ್ನು ಯಾರೂ ಗೆಸ್ಟ್ ರೋಲ್ ಅನ್ನಲಾಗುವುದಿಲ್ಲ ಎಂದು ಪಾರುಲ್ ಯಾದವ್ ಮಾತು ಮುಗಿಸಿದರು.
ಪಾರುಲ್ ಜೊತೆ ಇದ್ದ ಕೋಮಲ್ ಮಾತನಾಡುತ್ತಾ, ಸಾಮಾನ್ಯವಾಗಿ ಎಲ್ಲರೂ ಊಟಿಗೆ ಹಾಡಿನ ಚಿತ್ರೀಕರಣಕ್ಕೆಂದು ತೆರಳುತ್ತಾರೆ. ಆದರೆ ನಾನು ಒಂದಷ್ಟು ಟಾಕಿ ಭಾಗದ ಶೂಟಿಂಗ್ಗಾಗಿ ಹೋಗಿದ್ದೆ. ಬಹುಶಃ ನೀ ಬರೆದ ಕಾದಂಬರಿ' ಚಿತ್ರದ ನಂತರ ಸುದೀರ್ಘವಾಗಿ ಚಿತ್ರೀಕರಣ ನಡೆಸಿದ ಚಿತ್ರ ನಂದೀಶ' ಎನ್ನಬಹುದು.
ಇಡೀ ಚಿತ್ರದಲ್ಲಿ ಎರಡೆರಡು ಕ್ಯಾಮೆರಾ ಬಳಸಲಾಗಿದೆ. ನನ್ನ ನಿರ್ಮಾಣದ ಚಿತ್ರವಾದ್ದರಿಂದ ಇಂಥ ಪ್ರಯೋಗಗಳನ್ನೆಲ್ಲಾ ಮಾಡುತ್ತೇನೆ. ಪಾರುಲ್ ಹಾಗೂ ನನ್ನ ಕೆಮಿಸ್ಟ್ರಿ ಮತ್ತೊಮ್ಮೆ ವರ್ಕೌಟ್ ಆಗುವ ಎಲ್ಲಾ ಸಾಧ್ಯತೆಗಳಿದೆ ಎಂದಿದ್ದಾರೆ ಕೋಮಲ್.
ನಂದೀಶ ಚಿತ್ರದಲ್ಲಿ ಒಟ್ಟು ಐದು ಹಾಡಿದೆ. ಅದರಲ್ಲಿ ಒಂದು ಹಾಡನ್ನು ತಲಕಾಡಿನಲ್ಲಿ ಮತ್ತು ಮೂರು ಹಾಡನ್ನು ಫಿನ್ಲ್ಯಾಂಡ್ನಲ್ಲಿ ಚಿತ್ರೀಕರಿಸುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ. ಫಿನ್ಲ್ಯಾಂಡ್ನಲ್ಲಿ ಶೂಟಿಂಗ್ ಮಾಡಿದರೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ನಂದೀಶ' ಚಿತ್ರತಂಡವೇ ಮೊದಲ ಬಾರಿ ಹೋಗಿ ಚಿತ್ರೀಕರಣ ನಡೆಸಿದ ಹೆಗ್ಗಳಿಕೆಗೆ ಪಾತ್ರವಾಗುತ್ತದೆ ಎನ್ನುತ್ತಾರೆ ಕೋಮಲ್.
ಯಾವುದೇ ಅಡೆತಡೆ ಆಗದಿದ್ದಲ್ಲಿ ನವೆಂಬರ್ 30ಕ್ಕೆ ನಂದೀಶ'ನ ಎಂಟ್ರಿ ಪಕ್ಕಾ..!


Click it and Unblock the Notifications











