'KD' ಸ್ಟೋರಿಗೂ ಶಿವಣ್ಣನಿಗೂ ಏನ್ ಸಂಬಂಧ? ಪ್ರೇಮ್ ಬಿಚ್ಚಿಟ್ಟ ರಹಸ್ಯವೇನು?
ಜೋಗಿ ಪ್ರೇಮ್ ಮತ್ತೊಂದು ಬಿಗ್ ಬಜೆಟ್ ಸಿನಿಮಾಗೆ ಕೈ ಹಾಕಿದ್ದಾರೆ. 'ಕೆಜಿಎಫ್' ಸಿನಿಮಾಗೂ ಮುನ್ನ ಬಿಗ್ ಬಜೆಟ್ ಸಿನಿಮಾಗಳನ್ನು ಮತ್ತೆ ಇಂಟ್ರುಡ್ಯೂಸ್ ಮಾಡಿದ ನಿರ್ದೇಶಕ ಇವರೇ. ಈಗ ಪ್ರೇಮ್ ಪ್ಯಾನ್ ಇಂಡಿಯಾ ಕನಸಿಗೆ ಕೆವಿನ್ ಸಂಸ್ಥೆ ಕೈ ಜೋಡಿಸುತ್ತಿದೆ.
ಕಳೆದ ಎರಡು ತಿಂಗಳಿನಿಂದ 'ಕೆಡಿ' ಸಿನಿಮಾದ ಟೈಟಲ್ ಟೀಸರ್ ಲಾಂಚ್ ಮಾಡುವುದಕ್ಕಾಗಿಯೇ ತೆರೆಮರೆಯಲ್ಲಿ ಕೆಲಸ ಮಾಡಿದ್ದರು. ಕೊನೆಗೂ ಕ್ಯೂರಿಯಾಸಿಟಿಯಿಂದ ಕಾದು ಕೂತಿದ್ದ ಸಿನಿಪ್ರಿಯರಿಗೆ ಪ್ರೇಮ್ ಟೈಟಲ್ ಟೀಸರ್ ತೋರಿಸಿದ್ದಾರೆ.
ಇದೇ ಟೈಟಲ್ ಟೀಸರ್ ಕಾರ್ಯಕ್ರಮದ ವೇಳೆ ಪ್ರೇಮ್ ಸಿನಿಮಾ ಬಗ್ಗೆ ಕೆಲವು ಗುಟ್ಟುಗಳನ್ನು ಬಿಟ್ಟುಕೊಟ್ಟಿದ್ದಾರೆ. ಈ ಸಿನಿಮಾಗೂ ಶಿವಣ್ಣನಿಗೂ ಏನು ಸಂಬಂಧ ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಅಷ್ಟಕ್ಕೂ ಪ್ರೇಮ್ 'ಕೆಡಿ' ಟೈಟಲ್ ಟೀಸರ್ ವೇಳೆ ಶಿವಣ್ಣನ ಬಗ್ಗೆ ಹೇಳಿದ್ದೇನು? ಅಂತ ತಿಳಿಯಲು ಮುಂದೆ ಓದಿ.

ಶಿವಣ್ಣ ತಲೆಯಲ್ಲಿಟ್ಕೊಂಡು ಚಿತ್ರಕಥೆ
'ಕೆಡಿ' ಜೋಗಿ ಪ್ರೇಮ್ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್ನಲ್ಲಿ ಬರ್ತಿರೋ ಮೊದಲ ಸಿನಿಮಾ. ಆದರೂ, ಈ ಸಿನಿಮಾಗೂ ಶಿವಣ್ಣನಿಗೂ ಒಂದು ಲಿಂಕ್ ಇದೆ. "ನಾನು ಧ್ರುವನನ್ನು ಇಟ್ಕೊಂಡು ಕಥೆ ಮಾಡಿದೆ. ಅದೇ ಸ್ಕ್ರೀನ್ ಪ್ಲೇ ಮಾಡಬೇಕಾದರೆ, ಶಿವಣ್ಣನನ್ನು ಗಮನದಲ್ಲಿಟ್ಟುಕೊಂಡು ಮಾಡಿದ್ದು. ಶಿವಣ್ಣ ನಟನೆ ಮಾಡೋದು ಹೇಗಿರುತ್ತೆ ಅಂತ ನೋಡಿದ್ದೀರಾ. ಆ ಸ್ಟೇಜ್ನಲ್ಲಿ ಧ್ರುವ ಬಂದು ಆಕ್ಟ್ ಮಾಡಿದ್ರೆ ಹೆಂಗೆ ಕಾಣಿಸ್ತಾರೆ? ಎಲ್ಲೋ ನಮ್ಮ ಮನೆ ಹುಡುಗ. ಪಕ್ಕದ ಮನೆ ಹುಡುಗ. ನನ್ನ ತಮ್ಮ, ನಮ್ಮ ಅಣ್ಣ, ಈತರ ಅನಿಸಬೇಕು. ಹಾಗೆ ಮಾಡಿದ್ದೇನೆ. ಅದ್ಭುತವಾಗಿ ಮಾಡುತ್ತಾನೆ." ನಿರ್ದೇಶಕ ಜೋಗಿ ಪ್ರೇಮ್.

'ಸಿನಿಮಾ ಅಳುತ್ತಾ ಹೋಗುತ್ತಾರೆ'
"ಇದು 70ರ ದಶಕದ ಕಥೆಯನ್ನು ಆಧರಿಸಿದ ಸಿನಿಮಾ. ಯಾಕಂದರೆ, ಆಗ ತುಂಬಾನೇ ಚರಿತ್ರೆಗಳಿವೆ. ಉಪೇಂದ್ರ ಸರ್ 'ಓಂ' ಮಾಡಿದ್ದಾರೆ. ನಾನೇ 'ಕರಿಯಾ' ಮಾಡಿದ್ದೇನೆ ದರ್ಶನ್ ಇಟ್ಟು. ಶಿವಣ್ಣ 'ಜೋಗಿ' ಮಾಡಿದ್ದಾರೆ. ಈಗ ಧ್ರುವ ಮಾಡುತ್ತಿದ್ದಾರೆ. ಥಿಯೇಟರ್ಗೆ ಬಂದ್ಮೇಲೆ ಅಳುತ್ತಾ ಹೋಗಬೇಕು ಹಾಗೇ ಮಾಡೇ ಮಾಡುತ್ತೇನೆ. 'ಜೋಗಿ' ನೋಡಿದ ಮೇಲೆ ಮಕ್ಕಳು ತಾಯಿಯಂದಿರು ಒಂದಾಗಿದ್ದಾರೆ. ಈ ಸಿನಿಮಾ ನೋಡಿ ಏನೆಲ್ಲಾ ಆಗಬಹುದು ಅಂತ ಎದುರು ನೋಡುತ್ತಿದ್ದೇನೆ." ಎಂದು ಜೋಗಿ ಪ್ರೇಮ್.

'ಕಾಂತಾರ' ಒಳ್ಳೆ ಸಿನಿಮಾ
"ನಾನು ಪ್ರೊಡಕ್ಷನ್ ಹೌಸ್ಗಳೇ ಇಲ್ಲಿ ಹೀರೊ. ನಿರ್ದೇಶಕರೂ ಅಲ್ಲ. ಹೀರೊನೂ ಅಲ್ಲ. ಇಷ್ಟು ದೊಡ್ಡ ಬಜೆಟ್ ಸಿನಿಮಾ ಮಾಡಬೇಕು ಅಂತ ಅವರು ಧೈರ್ಯ ಮಾಡಿದ್ದಕ್ಕೆ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಆಗಿದೆ. 'ಕಾಂತಾರ' ಒಳ್ಳೆ ಸಿನಿಮಾ ಅದಕ್ಕೆ ಪ್ಯಾನ್ ಇಂಡಿಯಾ ಲೆವೆಲ್ಗೆ ರೀಚ್ ಆಗುತ್ತಿದೆ. ಹೀಗಾಗಿಯೇ ಹೊಂಬಾಳೆ ಸಂಸ್ಥೆಗೆ ಥ್ಯಾಂಕ್ಸ್ ಹೇಳುತ್ತೇನೆ. ಹಾಗೇ 'ಕೆಡಿ' ಸಿನಿಮಾವನ್ನೂ ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಅದಕ್ಕೆ ನಿರ್ಮಾಣ ಸಂಸ್ಥೆಗಳೇ ಹೀರೊ." ಎಂದಿದ್ದಾರೆ ಪ್ರೇಮ್.

ಮೋಹನ್ ಲಾಲ್ ಇರುತ್ತಾರಾ?
ಪ್ರೇಮ್ ಈಗಾಗಲೇ ಮೋಹನ್ ಲಾಲ್ರನ್ನು ಭೇಟಿ ಮಾಡಿದ್ದಾರೆ. ಹೀಗಾಗಿ ಅವರೂ ಈ ಸಿನಿಮಾದಲ್ಲಿ ಇರುತ್ತಾರಾ? ಅನ್ನೋ ಪ್ರಶ್ನೆ ಎದುರಾಗಿತ್ತು. ಅದಕ್ಕೆ ಕೆವಿಎನ್ ಸಂಸ್ಥೆಯ ಸುಪ್ರಿತ್ ಪ್ರತಿಕ್ರಿಯಿಸಿದ್ದಾರೆ. "ಮುಂದಿನ ದಿನಗಳಲ್ಲಿ ನಾವು ಈ ಬಗ್ಗೆ ಮಾತಾಡುತ್ತೇವೆ. ಸದ್ಯಕ್ಕೆ ನಾವೇನು ಕನ್ಫರ್ಮ್ ಮಾಡುವುದಿಲ್ಲ. ಒಮ್ಮೆ ಶೂಟಿಂಗ್ ಶುರುವಾಗುತ್ತಿದ್ದಂತೆ, ಒಂದೊಂದಾಗಿಯೇ ಅನೌನ್ಸ್ ಮಾಡುತ್ತೇವೆ. ಸದ್ಯಕ್ಕೆ ನಾವೇನೂ ಕನ್ಫರ್ಮ್ ಮಾಡುವುದಿಲ್ಲ." ಎಂದು ಸುಪ್ರಿತ್ ಗುಟ್ಟನ್ನು ಗುಟ್ಟಾಗಿಯೇ ಇಟ್ಟಿದ್ದಾರೆ.


Click it and Unblock the Notifications











