ಚಾರುಲತಾ ಬಿಡುಗಡೆ ಮುಂದಕ್ಕೆ; ಯಾಕಿಂಗಾಡ್ತಾರೋ!
ಪ್ರಿಯಾಮಣಿ ಮುಖ್ಯ ಭೂಮಿಕೆಯಲ್ಲಿರುವ ಬಹುಭಾಷಾ ಚಿತ್ರ 'ಚಾರುಲತಾ' ಬಿಡುಗಡೆ ಮತ್ತೆ ಮುಂದಕ್ಕೆ ಹೋಗಿದೆ. ಈ ಮೊದಲು, ಶಿವರಾಜ್ ಕುಮಾರ್-ಓಂ ಪ್ರಕಾಶ ಸಂಗಮದ ಚಿತ್ರ 'ಶಿವ' ದಿನವೇ ಬಿಡುಗಡೆ ಎನ್ನಲಾಗಿದ್ದ 'ಚಾರುಲತಾ' ಚಿತ್ರವನ್ನು ಅನಿವಾರ್ಯ ಕಾರಣ ಹೇಳಿ ಇದೇ 06, ಸೆಪ್ಟೆಂಬರ್ 2012 ಕ್ಕೆ ಬಿಡುಗಡೆ ಘೋಷಿಸಲಾಗಿತ್ತು. ಆದರೀಗ ಬಿಡುಗಡೆ ಮತ್ತೆ ಮುಂದಕ್ಕೆ ಹೋಗಿದೆ.
ಇತ್ತೀಚಿನ ಮಾಹಿತಿ ಪ್ರಕಾರ ಈ ಚಿತ್ರವು ಮುಂದಿನ ವಾರ ಬಿಡುಗಡೆಯಾಗುತ್ತಿಲ್ಲ. ಬದಲಿಗೆ ಇದೇ ತಿಂಗಳು 14 ರಂದು (ಸೆಪ್ಟೆಂಬರ್ 14, 2012) ಎಲ್ಲಾ ನಾಲ್ಕು ಭಾಷೆಗಳಲ್ಲಿ (ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ) ತೆರೆಗೆ ಬರುತ್ತಿದೆ. ಆಡಿಯೋ ಬಿಡುಗಡೆಯಾಗಿದೆ. ಟ್ರೇಲರುಗಳೂ ಟಿವಿಗಳಲ್ಲಿ ಪ್ರಸಾರ ಕಾಣುತ್ತಿದ್ದು ಒಳ್ಳೆಯ ಪ್ರತಿಕ್ರಿಯೆ ಪಡೆದಿವೆ. ಈ ಚಿತ್ರದ ಜೊತೆ ಜೊತೆಯಲ್ಲೇ ತಮಿಳು ಸ್ಟಾರ್ ಸೂರ್ಯ ನಾಯಕತ್ವದ 'ಮಾತರನ್' ಕೂಡ ಪ್ರಚಾರಕಾರ್ಯದಲ್ಲಿ ಬಿಜಿಯಾಗಿದೆ.
ದ್ವಾರಕೀಶ್ ಮಗ ಯೋಗಿ ನಿರ್ಮಾಣದ 'ಚಾರುಲತಾ' ಚಿತ್ರವನ್ನು ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಮೊದಲು ಏಕಕಾಲಕ್ಕೆ ನಿರ್ಮಿಸಲಾಗಿದೆ. ನಂತರ ಈ ಚಿತ್ರವನ್ನು ಕನ್ನಡದಿಂದ ಮಲಯಾಳಂಗೆ ಹಾಗೂ ತಮಿಳಿನಿಂದ ತೆಲುಗಿಗೆ ಹಾಗೂ 'ಡಬ್' ಮಾಡಲಾಗಿದೆ. ಪ್ರಿಯಾಮಣಿ ಎದುರು ನಾಯಕರಾಗಿ ಸ್ಕಂದ ನಟಿಸಿರುವ ಈ ಚಿತ್ರದ ನಿರ್ದೇಶಕರು ಪೊನ್ ಕುಮಾರನ್.
'ಚಾರುಲತಾ' ಚಿತ್ರದಂತೆ ಸಯಾಮಿ ಅವಳಿಗಳ ಕಥೆ ಹೊಂದಿರುವ ತಮಿಳು ಸ್ಟಾರ್ ಸೂರ್ಯ ಚಿತ್ರ 'ಮಾತರನ್', ಅಕ್ಟೋಬರ್ 12, 2012 ರಂದು ತಮಿಳು ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಚಾರುಲತಾ ಒಂದು ತಿಂಗಳು ಮೊದಲೇ ಬಿಡುಗಡೆಯಾಗುತ್ತಿರುವುದು ವಿಶೇಷ ಎನಿಸಿದೆ. ಎರಡರ ಕಥೆಯೂ ಒಂದೇ ರೀತಿ ಇರುವುದರಿಂದ ಈ ಚಿತ್ರಗಳ ಮಧ್ಯೆ ಫೈಟ್ ಆದರೆ ಕಷ್ಟ ಎನ್ನಲಾಗುತ್ತಿತ್ತು. ಈಗ ಆ ಸಮಸ್ಯೆಯಿಲ್ಲ. (ಒನ್ ಇಂಡಿಯಾ ಕನ್ನಡ)


Click it and Unblock the Notifications











