ಮೃತ ಸಾಹಸ ಕಲಾವಿದನಿಗೆ ಪರಿಹಾರ ಘೋಷಿಸಿದ ನಿರ್ಮಾಪಕ ಗುರು ದೇಶಪಾಂಡೆ
ನಟ ಅಜಯ್ ರಾವ್, ರಚಿತಾ ರಾಮ್ ನಟಿಸಿರುವ 'ಲವ್ ಯು ರಚ್ಚು' ಸಿನಿಮಾದ ಚಿತ್ರೀಕರಣದ ವೇಳೆ ನಡೆದ ಅವಘಡದಲ್ಲಿ ಫೈಟರ್ ವಿವೇಕ್ ಸಾವನ್ನಪ್ಪಿದ್ದು ಒಬ್ಬ ವ್ಯಕ್ತಿ ಗಾಯಾಳುವಾಗಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ. ಆದರೆ ಸಿನಿಮಾ ನಿರ್ಮಾಪಕ ಗುರು ದೇಶಪಾಂಡೆ ಇನ್ನೂ ಪೊಲೀಸರ ಸಂಪರ್ಕಕ್ಕೆ ಸಿಕ್ಕಿಲ್ಲ ಎನ್ನಲಾಗುತ್ತಿದೆ. ಆದರೆ ಈ ನಡುವೆ ನಿರ್ಮಾಪಕ ಗುರು ದೇಶಪಾಂಡೆ, ಮೃತ ವಿವೇಕ್ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಹೇಳಿದ್ದಾರೆ.
ಅಜ್ಞಾತ ಸ್ಥಳದಲ್ಲಿರುವ ನಿರ್ಮಾಪಕ ಗುರು ದೇಶಪಾಂಡೆ, ಮೃತ ವಿವೇಕ್ ಅವರ ಕುಟುಂಬದವರನ್ನು ಸಂಪರ್ಕಿಸಿದ್ದು ಅವರಿಗೆ ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಆದರೆ ಈ ಮೊತ್ತವನ್ನು ಪರಿಹಾರವಾಗಿ ನೀಡಿದ್ದಾರಾ? ಅಥವಾ ರಾಜಿ ಮಾಡಿಕೊಳ್ಳಲು ನೀಡುತ್ತಿದ್ದಾರಾ ಎಂಬ ಅನುಮಾನ ಕಾಡುತ್ತಿದೆ.

10 ಲಕ್ಷ ಪರಿಹಾರ ಕೊಡುತ್ತೀವೆ ಎಂದಿದ್ದಾರೆ: ಮೃತರ ಸಂಬಂಧಿ
ಅಜ್ಞಾತ ಸ್ಥಳದಿಂದ ಮೃತ ವಿವೇಕ್ ಅವರ ಚಿಕ್ಕಪ್ಪ ಗೋಪಿ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿರುವ ನಿರ್ಮಾಪಕ ಗುರು ದೇಶಪಾಂಡೆ, ವಿವೇಕ್ಗೆ ಪರಿಹಾರವಾಗಿ 10 ಲಕ್ಷ ಹಣ ನೀಡುವುದಾಗಿ ಹೇಳಿದ್ದಾರಂತೆ. ಈ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಗೋಪಿ, ''ಫೈಟ್ ಯೂನಿಯನ್ ನವರು ಕರೆ ಮಾಡಿ ಹತ್ತು ಲಕ್ಷ ಪರಿಹಾರ ಸಿಗುತ್ತದೆ. ಈಗ ಏನು ಕೆಲಸ ಆಗಬೇಕು ಅದು ನೋಡಿ. ಘಟನೆಯಲ್ಲಿ ಯಾರದ್ದೂ ತಪ್ಪಿಲ್ಲ, ಗುರು ಅವರದ್ದೂ ತಪ್ಪಿಲ್ಲ. ಈಗಾಗಲೇ ಪ್ರಕರಣ ದಾಖಲಾಗಿದೆ ತಪ್ಪು ಯಾರದ್ದಿರುತ್ತದೆಯೋ ಅವರಿಗೆ ಶಿಕ್ಷೆ ಆಗಲಿದೆ'' ಎಂದು ಫೈಟ್ ಯೂನಿಯನ್ನವರು ಹೇಳಿದ್ದಾರೆ'' ಎಂದಿದ್ದಾರೆ ಮೃತ ವಿವೇಕ್ ಚಿಕ್ಕಪ್ಪ ಗೋಪಿ.

ಬಿಡದಿ ಪೊಲೀಸರಿಂದ ಮೂವರ ಬಂಧನ
ಪ್ರಕರಣದ ಕುರಿತು ಬಿಡದಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿನಿಮಾದ ಸಾಹಸ ನಿರ್ದೇಶಕ ವಿನೋದ್, ಚಿತ್ರತಂಡದ ಮ್ಯಾನೇಜರ್ ಫರ್ನಾಂಡೀಸ್, ಕ್ರೇನ್ ಆಫರೇಟರ್ ಮಹದೇವ್ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ವಿಧಿಸಲಾಗಿದೆ. ''ಮೃತ ವ್ಯಕ್ತಿಯ ಪರವಾಗಿ ಯಾರೂ ದೂರು ನೀಡದಂತೆ ಸೆಟಲ್ಮೆಂಟ್ ನಡೆಯುವ ಅನುಮಾನವಿದ್ದ ಕಾರಣ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದೇವೆ'' ಎಂದಿದ್ದಾರೆ ರಾಮನಗರ ಎಸ್ಪಿ.

ನಾಯಕ ನಟ ಅಜಯ್ ರಾವ್ ಆರೋಪ
ಇದೇ ಘಟನೆ ಸಂಬಂಧ ನಿನ್ನೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ 'ಲವ್ ಯು ರಚ್ಚು' ಸಿನಿಮಾದ ನಾಯಕ ನಟ ಅಜಯ್ ರಾವ್, ''ಅಜಾರೂಕತೆಯಿಂದಾಗಿಯೇ ಈ ಅಪಘಾತ ನಡೆದಿದೆ. ಮೆಟಲ್ ರೋಪ್ ಬಳಸಿದ್ದರಿಂದ ವಿದ್ಯುತ್ ಪ್ರವಹಿಸಿ ವಿವೇಕ್ ಸಾವು ಆಗಿದೆ. ಈ ಹಿಂದೆಯೇ ನಾನು ಮೆಟಲ್ ರೋಪ್ ಬಳಸುವ ಬಗ್ಗೆ ಪ್ರಶ್ನೆ ಮಾಡಿದ್ದೆ. ಆದರೆ ಇಲ್ಲಿ ಪ್ರಶ್ನೆ ಕೇಳುವವರನ್ನು ಕೆಟ್ಟವರಂತೆ ನೋಡಲಾಗುತ್ತದೆ. ಮೃತ ವಿವೇಕ್ಗೆ ನ್ಯಾಯ ಸಿಗುವ ವರೆಗೆ ನಾನು ಚಿತ್ರೀಕರಣಕ್ಕೆ ಹಾಜರಾಗುವುದಿಲ್ಲ'' ಎಂದು ಶಪಥ ಮಾಡಿದ್ದಾರೆ.

ಘಟನೆ ನಡೆದಿದ್ದು ಹೇಗೆ?
ಬಿಡದಿ ಸಮೀಪದ ಜೋಗರಪಾಳ್ಯ ಹಳ್ಳಿಯಲ್ಲಿ ತೆಂಗಿನ ತೋಟದಲ್ಲಿ ಫೈಟ್ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ವಿವೇಕ್ ಹಾಗೂ ಇತರ ಕೆಲವು ಸಾಹಸ ಕಲಾವಿದರು ತೊಟ್ಟಿಯ ಒಳಕ್ಕೆ ಬೀಳುವ ದೃಶ್ಯದ ಚಿತ್ರೀಕರಣ ಮಾಡಲಾಗುತ್ತಿತ್ತು. ಕ್ರೇನ್ಗೆ ಮೆಟಲ್ ರೋಪ್ ಕಟ್ಟಿ ಬಿಡಲಾಗಿತ್ತು. ಆ ರೋಪ್ ಅನ್ನು ವಿವೇಕ್ ಹಿಡಿದುಕೊಂಡು ನಿಭಾಯಿಸುತ್ತಿದ್ದ. ಚಿತ್ರೀಕರಣ ಮಾಡುತ್ತಿದ್ದ ಸ್ಥಳದಲ್ಲಿ ಮೇಲೆ ವಿದ್ಯುತ್ ತಂತಿ ಹಾದು ಹೋಗಿತ್ತು, ಇದನ್ನು ಗಮನಿಸದ ಕ್ರೇನ್ ಆಪರೇಟರ್ ಕ್ರೇನ್ ಅನ್ನು ಹೆಚ್ಚು ಎತ್ತರಕ್ಕೆ ಏರಿಸಿದ ಕಾರಣ ಮೆಟಲ್ ರೋಪ್ನಲ್ಲಿ ವಿದ್ಯುತ್ ಪ್ರವಹಿಸಿ ವಿವೇಕ್ ಬಲಿಯಾದರು. ರೋಪ್ ಜಾಕೆಟ್ ತೊಟ್ಟಿದ್ದ ರಂಜಿತ್ಗೆ ಸಹ ಗಾಯಗಳಾಗಿವೆ.


Click it and Unblock the Notifications











