ಬೆಂಗಳೂರು: ಸಿನಿಮಾದಲ್ಲಿ ನಷ್ಟ, ಅಪಹರಣಕಾರನಾದ ನಿರ್ಮಾಪಕ!
ಸಿನಿಮಾ ರಂಗ ಕೆಲವರು ಜೂಜಿಗೆ ಹೋಲಿಸುವುದೂ ಇದೆ. ಒಂದೊಳ್ಳೆಯ ಸಿನಿಮಾ ಹಲವರನ್ನು ಒಮ್ಮೆಲೇ ಸ್ಟಾರ್ ಮಾಡಿ ಬಿಡುತ್ತದೆ. ಅದೇ ಒಂದು ಕೆಟ್ಟ ಸಿನಿಮಾ ಹಲವರನ್ನು ಬೀದಿಗೆ ಎಳೆದು ತರುತ್ತದೆ. ಗಳಿಸಿದ್ದೆನ್ನವನ್ನೂ ಕೇವಲ ಒಂದು ಸಿನಿಮಾದಿಂದ ಕಳೆದು ಕೊಂಡ ಹಲವರು ಚಿತ್ರರಂಗದಲ್ಲಿದ್ದಾರೆ. ದೊಡ್ಡ ಪಂಟರ್ಗಳು ಸಹ ಸಿನಿಮಾದ ಹೊಡೆತಕ್ಕೆ ಸಿಲುಕಿ ತರಗೆಲೆಗಳಾಗಿದ್ದಾರೆ.
ಇಲ್ಲೊಬ್ಬ ವ್ಯಕ್ತಿ ಹೀಗೆ ಸಿನಿಮಾದ ಸೆಳೆತಕ್ಕೆ ಸಿಲುಕಿ, ಸಿನಿಮಾ ನಿರ್ಮಾಣ ಮಾಡಿ ಇರುವುದೆಲ್ಲವನ್ನೂ ಕಳೆದುಕೊಂಡು ಈಗ ಸಾಲ ತೀರಿಸಲು ಅಪಹರಣಕಾರನಾಗಿ ಬದಲಾಗಿದ್ದಾನೆ.
ಕನ್ನಡದಲ್ಲಿ 'ಹಾಫ್ ಮೆಂಟಲ್' ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದ ಶಶಿಕುಮಾರ್ ಎಂಬಾತನಿಗೆ ಆ ಸಿನಿಮಾದಿಂದ ದೊಡ್ಡ ನಷ್ಟ ಉಂಟಾಯಿತು. ಸಿನಿಮಾಕ್ಕೆ ಹಾಕಿದ ಬಂಡವಾಳ ವಾಪಸ್ಸಾಗಲಿಲ್ಲ. ಸಾಲಗಳು ದಿನೇ-ದಿನೇ ಹೆಚ್ಚಾಗುತ್ತಾ ಸಾಗಿದವು.

ಸಿನಿಮಾ ಮಾಡಿ ನಷ್ಟ ಅನುಭವಿಸಿದ್ದ ಶಶಿಕುಮಾರ್ ಮತ್ತೆ ಹಣಗಳಿಸಲು, ಸಾಲಗಳಿಂದ ದೂರಾಗಲು ಅಪಹರಣಕಾರನಾಗಿ ಬದಲಾಗಿದ್ದಾನೆ. ಸಿನಿಮೀಯ ಶೈಲಿಯಲ್ಲಿ ಹಾಡುಹಗಲೆ ಉದ್ಯಮಿಯೊಬ್ಬನನ್ನು ಅಪಹರಿಸಿ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾನೆ.
ನಗರದ ಈರುಳ್ಳಿ ವ್ಯಾಪಾರಿ ಶ್ರೀನಿವಾಸ್ ಎಂಬುವರನ್ನು ಹಾಡುಹಗಲೆ ಅಪಹರಣ ಮಾಡಿದ ಶಶಿಕುಮಾರ್ ಮತ್ತು ತಂಡ, ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದು, 'ನಾವು ಆದಾಯ ತೆರಿಗೆ ಇಲಾಖೆಯವರು ನೀವು ತೆರಿಗೆ ವಂಚನೆ ಮಾಡಿದ್ದೀರಿ, 50 ಲಕ್ಷ ದಂಡ ಕಟ್ಟಿ ಎಂದು ಒತ್ತಾಯಿಸಿದ್ದಾರೆ. ಕೊನೆಗೆ 20 ಲಕ್ಷ ಕೊಡುವುದಾಗಿ ಹೇಳಿ ಆತ ಅವರಿಂದ ಬಿಡಿಸಿಕೊಂಡು ಬಂದಿದ್ದಾನೆ.
ಆ ನಂತರ ಆ ಈರುಳ್ಳಿ ವ್ಯಾಪಾರಿಯನ್ನು ಸಂಪರ್ಕಿಸಿ ಮತ್ತೆ ಹೆಚ್ಚುವರಿ ಐದು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಅನುಮಾನಗೊಂಡ ಉದ್ಯಮಿ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಶಶಿಕುಮಾರ್ ಹಾಗೂ ಇತರರನ್ನು ಬಂಧಿಸಿದ್ದಾರೆ.
ಸಿನಿಮಾ ನಿರ್ಮಾಪಕನಾದ ಶಶಿಕುಮಾರ್ ಸಿನಿಮೀಯ ಮಾದರಿಯಲ್ಲಿಯೇ ಅಪಹರಣಕ್ಕೆ ಯೋಜನೆ ರೂಪಿಸಿದ್ದಾನೆ. ಈರುಳ್ಳಿ ವ್ಯಾಪಾರಿಯ ಕುಟುಂಬ, ಖಾತೆ ಹೊಂದಿರುವ ಬ್ಯಾಂಕ್, ವ್ಯಾಪಾರ, ವಹಿವಾಟು, ಆಸ್ತಿ ಇನ್ನಿತರೆ ವಿಷಯಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಕಿಡ್ನ್ಯಾಪ್ ಮಾಡುವ ದಿನವೂ ಸುಮಾರು 4 ಕಿ.ಮೀಟರ್ ವರೆಗೆ ಉದ್ಯಮಿಯ ಕಾರನ್ನು ಹಿಂಬಾಲಿಸಿ ಅಪಹರಣ ಮಾಡಿದ್ದಾನೆ.


Click it and Unblock the Notifications











