ಅಪ್ಪು ಮೊದಲ ಪುಣ್ಯಸ್ಮರಣೆ ಹಿನ್ನೆಲೆ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಪುತ್ಥಳಿ ಅನಾವರಣ!
2022, ಅಕ್ಟೋಬರ್ 29 ಕರುನಾಡು ಎಂದೂ ಮರೆಯಲಾಗದೆ. ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಪಾರ ಅಭಿಮಾನಿಗಳನ್ನು ದಿಢೀರನೇ ಬಿಟ್ಟು ಹೊರಟು ಹೋದ ದಿನ. ನಾಳೆಗೆ ( ಅಕ್ಟೋಬರ್ 28) ಪುನೀತ್ ಆಪ್ತರನ್ನು ಅಭಿಮಾನಿಗಳನ್ನು ಅಗಲಿ ಸರಿಯಾಗಿ ಒಂದು ವರ್ಷ.
ಸ್ಯಾಂಡಲ್ವುಡ್ನ ನಗು ಮುಖದ ರಾಜಕುಮಾರ ಪುನೀತ್ ರಾಜ್ಕುಮಾರ್ ಮೊದಲನೇ ಪುಣ್ಯಸ್ಮರಣೆಯಂದು ಹಲವು ಜರುಗುತ್ತಿವೆ. ರಾಜ್ಯದ ಮೂಲೆ ಮೂಲೆಯಲ್ಲೂ ಪುನೀತ್ ಸ್ಮರಣೆ ಮಾಡಲಾಗುತ್ತಿದೆ. ಇದೇ ಬೆನ್ನಲ್ಲೇ ಜೀ ಕನ್ನಡ ವಾಹಿನಿ ಕೂಡ ಅಭಿಮಾನದ ಪುತ್ಥಳಿಯನ್ನು ಅನಾವರಣ ಮಾಡಲು ಮುಂದಾಗಿದೆ.
ಪುನೀತ್ ರಾಜ್ ಕುಮಾರ್ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ಕೇವಲ ನಟನೆಯಷ್ಟೇ ಅಲ್ಲ. ಅವರ ನಿಸ್ವಾರ್ಥ ಸಮಾಜಮುಖಿ ಕೆಲಸಗಳು ಜನಮಾನಸದಲ್ಲಿ ಅಚ್ಚಳಿಯದೆ ನೆಲೆಯೂರಿದೆ. ಸದಾ ನಗುಮುಖದ ಈ ರಾಜಕುಮಾರ ಅಪಾರ ಅಭಿಮಾನಿಗಳನ್ನು ಅಗಲಿ ಒಂದು ವರ್ಷವೇ ಆಗಿದೆ. ಇಡೀ ಭಾರತೀಯ ಚಿತ್ರರಂಗಕ್ಕೆ ದೊಡ್ಮನೆ ಕುಡಿಯ ಈ ಅಗಲಿಕೆ ದು:ಖ ತರಿಸಿದೆ.

ಅಪ್ಪು ಪುತ್ಥಳಿ ಅನಾವರಣ
ಜೀ ಕನ್ನಡ ಪುನೀತ್ ರಾಜ್ಕುಮಾರ್ ಅವರ ಮೇಲೆ ವಿಶೇಷ ಅಭಿಮಾನ ಹೊಂದಿದೆ. ಹೀಗಾಗಿ ಸಿನಿಮಾ ಮತ್ತು ಧಾರಾವಾಹಿಗಳ ಚಿತ್ರೀಕರಣಕ್ಕೆಂದೇ ಹೆಸರು ವಾಸಿಯಾಗಿರುವ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಪುನೀತ್ ರಾಜ್ಕುಮಾರ್ ಪುತ್ಥಳಿಯನ್ನು ಅನಾವರಣಗೊಳಿಸುತ್ತಿದೆ. ಅಪ್ಪು ಹೆಜ್ಜೆ ಹಾಕಿದ ಸ್ಥಳವನ್ನು ಅವರ ನೆನಪುಗಳಿಂದ ಪುಣ್ಯಭೂಮಿಯಾಗಿಸುವ ಪ್ರಯತ್ನಕ್ಕೆ ಮುಂದಾಗಿದೆ. ಈ ಮೂಲಕ ಮುಂದಿನ ಪೀಳಿಗೆಯ ಪ್ರತಿಭೆಗಳಿಗೆ ಪುನೀತ್ ರಾಜ್ಕುಮಾರ್ ಆಶೀರ್ವಾದ ಸಿಗಲಿ ಅನ್ನೋ ಬಯಕೆ ಜೀ ಕನ್ನಡದ್ದು.

ಜೀ ಕನ್ನಡ ಜೊತೆ ನಂಟು
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಜೀ ಕನ್ನಡ ವಾಹಿನಿಯೊಂದಿಗೆ ವಿಶೇಷ ನಂಟು ಹೊಂದಿದ್ದರು. ಜೀ ಕನ್ನಡ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಅಪ್ಪು ವಿಶೇಷ ಅತಿಥಿಯಾಗಿ ಆಗಮಿಸಿ, ಬೆಂಬಲ ಸೂಚಿಸಿದ್ದರು. ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಪ್ರತಿಭೆಗಳನ್ನು ಮನಸಾರೆ ಪ್ರೋತ್ಸಾಹಿಸುತ್ತಿದ್ದರು. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಸರಿಗಮಪದಂತಹ ಕಾರ್ಯಕ್ರಮಕ್ಕೆ ಸ್ಪರ್ಧಿಗಳ ಕೋರಿಕೆಯಂತೆ ಖುದ್ದಾಗಿ ವೇದಿಕೆಗೆ ಆಗಮಿಸಿದ್ದರು. ಸ್ಪರ್ಧಿಗಳ ಬೆನ್ನು ತಟ್ಟಿ ಪ್ರೀತಿಯಿಂದ ಪ್ರೋತ್ಸಾಹಿಸಿದ್ದರು.

ಪುನೀತ್ ಅಭಿಮಾನಿಗಳಿಗೆ ಆಹ್ವಾನ
ಪುನೀತ್ ರಾಜ್ಕುಮಾರ್ ತಮ್ಮ ಇಡೀ ಬದುಕನ್ನು ಸಿನಿಮಾಗೆಂದೇ ಮೀಸಲಿಟ್ಟಿದ್ದರು. ಪುನೀತ್ ರಾಜ್ಕುಮಾರ್ ಈ ವಿಶೇಷ ಪುತ್ಥಳಿ ಹಿರಿತೆರೆ ಮತ್ತು ಕಿರುತೆರೆಯ ಅಪೂರ್ವ ಸಂಗಮ. ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಅನಾವರಣಗೊಳಿಸುತ್ತಿರುವ ಈ ಕಾರ್ಯಕ್ರಮಕ್ಕೆ ಅಪ್ಪು ಅಭಿಮಾನಿಗಳಿಗೆ ಜೀ ಕನ್ನಡ ಆಹ್ವಾನ ನೀಡಿದೆ. ಅಷ್ಟೇ ಅಲ್ಲದೆ ಜೀ ಕನ್ನಡ ಇಡೀ ದಿನವನ್ನು ಪುನೀತ್ ರಾಜ್ಕುಮಾರ್ ಅವರಿಗೆ ಅರ್ಪಿಸಿ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರಮಾಡಲು ನಿರ್ಧರಿಸಿದೆ.


Click it and Unblock the Notifications











