'ಪುನೀತ್ ನಮನ' ಬಳಿಕ ಅಭಿಮಾನಿಗಳಿಗೆ 'ಪುನೀತ್ ನೆನಪು': ಎಲ್ಲಿ, ಯಾವಾಗ?
ಇಂದು(ನವೆಂಬರ್ 16) ಪುನೀತ್ ರಾಜ್ಕುಮಾರ್ ಅಗಲಿಕೆ ನೋವಿನಲ್ಲಿ ಅಪ್ಪು ಆತ್ಮಕ್ಕೆ ಫಿಲ್ಮ್ ಚೇಂಬರ್ ವತಿಯಿಂದ ನಮನ ಸಲ್ಲಿಸಲಾಗುತ್ತಿದೆ. ಈಗಾಗಲೇ ಪುನೀತ್ ನಮನ ಕಾರ್ಯಕ್ರಮಕ್ಕೆ ಟಾಲಿವುಡ್ ಸ್ಟಾರ್ ನಟರು ಆಗಮಿಸಿದ್ದಾರೆ. ಪ್ರಕಾಶ್ ರೈ, ಶ್ರೀಕಾಂತ್, ಸಂಪತ್ ರಾಜ್ ಈ ಕಾರ್ಯಕ್ರಮದಲ್ಲಿ ಪವರ್ಸ್ಟಾರ್ ಬಗ್ಗೆ ತನ್ನ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಕನ್ನಡದ ಸ್ಟಾರ್ ನಟರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಆದರೆ, ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಪ್ರವೇಶ ನೀಡಲಾಗಿಲ್ಲ. ಹೀಗಾಗಿ ಅಪ್ಪು ಅಭಿಮಾನಿಗಳಿಂದ ಬೇಸರ ವ್ಯಕ್ತವಾಗಿತ್ತು.
ಪುನೀತ್ ಅಭಿಮಾನಿಗಳು ಹಾಗೂ ಸಾರ್ವಜನಿಕರಿಗಾಗಿಯೇ ಮತ್ತೊಂದು ಅದ್ಧೂರಿ ಕಾರ್ಯಕ್ರಮ ಮಾಡಲು ಮುಂದಾಗಿದೆ. ಪುನೀತ್ ನಮನ ಚಿತ್ರರಂಗದ ಗಣ್ಯರಿಗಾಗಿ ಮಾತ್ರ ಆಯೋಜಿಸಿದ್ದ ಕಾರ್ಯಕ್ರಮ ಆಗಿತ್ತು. ಅಲ್ಲದೆ ಸಮಯ ಕಡಿಮೆ ಇದ್ದಿದ್ದರಿಂದ ಸ್ವಲ್ಪ ಮಟ್ಟಿಗೆ ಗೊಂದಲ ಆಗಿದೆ. ಆದರೆ, ಮುಂದೆ ದೊಡ್ಡ ಕಾರ್ಯಕ್ರಮವನ್ನು ಅಭಿಮಾನಿಗಳಿಗೆ ಸಾರ್ವಜನಿಕರಿಗಾಗಿ ನಡೆಸಲಾಗುತ್ತೆ ಎಂದು ನಿರ್ಮಾಪಕ ಸಾರಾ ಗೋವಿಂದು ಹೇಳಿದ್ದಾರೆ.

ಅಪ್ಪು ಅಭಿಮಾನಿಗಳಿಗೆ 'ಪುನೀತ್ ನೆನಪು'
ಪುನೀತ್ ನಮನ ಬಳಿಕ ಮತ್ತೊಂದು ಕಾರ್ಯಕ್ರಮ ಜರುಗಲಿದೆ. ಇದು ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಹಾಗೂ ಸಾರ್ವಜನಿಕರಿಗಾಗಿ ಹಮ್ಮಿಕೊಳ್ಳಲಾಗುತ್ತೆ. ಪುನೀತ್ ನಮನಕ್ಕೆ ಅವಕಾಶ ನೀಡಿಲ್ಲವೆಂದು ಯಾರೂ ಬೇಸರ ಪಟ್ಟುಕೊಳ್ಳುವುದು ಬೇಡ. ಇದು 'ಪುನೀತ್ ನಮನ' ಅಭಿಮಾನಿಗಳಿಗಾಗಿ ಪುನೀತ್ ನೆನಪು ಅಂತ ಕಾರ್ಯಕ್ರಮ ಮಾಡುತ್ತೇವೆ. ಶಿವರಾಜ್ಕುಮಾರ್ ಅವರೊಂದಿಗೆ ಮಾಡಿದ್ದೇನೆ. ಅವರು ಅಭಿಮಾನಿಗಳಿಗಾಗಿ ಮಾಡೋಣ ಅಂತ ಹೇಳಿದ್ದಾರೆ. ಈ ಕಾರ್ಯಕ್ರಮ ಮುಗಿದ ಕೂಡಲೇ ಮಾಹಿತಿ ನೀಡಲಾಗುತ್ತೆ." ಎಂದು ನಿರ್ಮಾಪಕ ಸಾರಾಅ ಗೋವಿಂದು ತಿಳಿಸಿದ್ದಾರೆ.

2 ಲಕ್ಷ ಜನರಿಗಾಗಿ 'ಪುನೀತ್ ನೆನೆಪು'
ಪುನೀತ್ ನಿಧನದಿಂದ ಶಾಕ್ಗೆ ಒಳಗಾಗಿರುವ ಜನರು ನೆಚ್ಚಿನ ನಟನನ್ನು ನೆನೆದು ಕಣ್ಣೀರಿಡುತ್ತಿದ್ದಾರೆ. ಅಪ್ಪು ಅಂದ್ರೆ ಜನರಿಗೆ ಎಷ್ಟು ಇಷ್ಟ ಅನ್ನುವುದು ಪ್ರತಿದಿನ ಸಮಾಧಿ ಮುಂದೆ ಸೇರುತ್ತಿರುವ ಅಭಿಮಾನಿಗಳನ್ನು ನೋಡಿದರೆ ಗೊತ್ತಾಗುತ್ತೆ. ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಅಭಿಮಾನಿಗಳಿಗೆ ಕಾರ್ಯಕ್ರಮ ಯಾಕಿಲ್ಲ ಅನ್ನುವ ಪ್ರಶ್ನೆ ಎದ್ದಿತ್ತು. ಇದಕ್ಕಾಗಿ ಪುನೀತ್ ನೆನಪು ಕಾರ್ಯಕ್ರಮ ನಡೆಸಲು ಮುಂದಾಗಿದ್ದಾರೆ. " ಸಾರ್ವಜನಿಕರಿಗಾಗಿ ದೊಡ್ಡ ಕಾರ್ಯಕ್ರಮ ಮಾಡುತ್ತೇವೆ. ಸುಮಾರು 2 ಲಕ್ಷ ಅಭಿಮಾನಿಗಳು ಸೇರಿಸುವ ಆಲೋಚನೆ ಇದೆ. ಒಮ್ಮೆ ಫಿಲ್ಮ್ ಚೇಂಬರ್ ಜೊತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಾನೀಗ ಮಾಜಿ, ಹಾಲಿ ಅಧ್ಯಕ್ಷರ ಜೊತೆ ಚರ್ಚೆ ಮಾಡಬೇಕಿದೆ. ಆ ಬಳಿಕ ಹೇಳಲಾಗುತ್ತೆ." ಎಂದು ನಿರ್ಮಾಪಕ ಸಾರಾ ಗೋವಿಂದು ಮಾಹಿತಿ ನೀಡಿದ್ದಾರೆ.

'ಪುನೀತ್ ನೆನಪು' ಎಲ್ಲಿ? ಯಾವಾಗ?
'ಪುನೀತ್ ನೆನಪು' ಕಾರ್ಯಕ್ರಮ ಎಲ್ಲಿ ನಡೆಸಬೇಕು ಅನ್ನುವ ಬಗ್ಗೆನೂ ಚರ್ಚೆ ನಡೆಯುತ್ತಿದೆ. " ಹುಬ್ಬಳ್ಳಿ, ದಾವಣಗೆರೆ ಅಥವಾ ಬೆಂಗಳೂರಿನಲ್ಲಿ ಸಾರ್ವಜನಿಕರಿಗಾಗಿ ಕಾರ್ಯಕ್ರಮ ನಡೆಸಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ನನಗೆ ಬೆಂಗಳೂರಿನಲ್ಲಿ ಪುನೀತ್ ನೆನಪು ಕಾರ್ಯಕ್ರಮ ನಡೆದರೆ ಸೂಕ್ತ ಅಂತ ಅನಿಸುತ್ತೆ. ಎಲ್ಲವೂ ಹತ್ತಿರದಲ್ಲಿ ಸಿಗುತ್ತದೆ. ಈ ತಿಂಗಳು ಪುನೀತ್ ನೆನಪು ಕಾರ್ಯಕ್ರಮ ನಡೆಸಲು ಸಾಧ್ಯವಿಲ್ಲ. ತುಂಬಾ ದೊಡ್ಡ ಕಾರ್ಯಕ್ರಮ ಆಗಿದ್ದರಿಂದ ತಯಾರಿಗೆ ಹೆಚ್ಚು ಸಮಯ ಬೇಕು. ಅಲ್ಲದೆ ಪುನೀತ್ ನೆನಪಿನಲ್ಲಿ ಅಭಿಮಾನಿಗಳಿಗಾಗಿ ಮನೋರಂಜನೆ ಕಾರ್ಯಕ್ರಮ ಕೂಡ ನಡೆಯಲಿದೆ." ಎಂದು ಸಾರಾ ಗೋವಿಂದು ಮಾಹಿತಿ ನೀಡಿದ್ದಾರೆ.
ಇಂದಿನ(ನವೆಂಬರ್ 16) 'ಪುನೀತ್ ನಮನ' ಕಾರ್ಯಕ್ರಮಕ್ಕೆ ಪಾಸ್ ಸಿಗದೆ ಬರಲಾರದೆ ಬೇಸರಗೊಂಡವರಿಗೆ ಪುನೀತ್ ನೆನಪು ಕಾರ್ಯಕ್ರಮದ ಮೂಲಕ ಸಂತೈಸುವ ಪ್ರಯತ್ನ ನಡೆಯುತ್ತಿದೆ. ಜೊತೆಗೆ ಅಪ್ಪು ಅಭಿಮಾನಿಗಳು ಈ ಕಾರ್ಯಕ್ರಮವನ್ನು ಎದುರು ನೋಡುತ್ತಿದ್ದಾರೆ. ಆದರೆ, ಅದ್ಯಾವಾಗ ನಡೆಯುತ್ತೆ? ಹೇಗೆ ನಡೆಯುತ್ತೆ? ಅನ್ನುವ ಕುತೂಹಲವಿದೆ.


Click it and Unblock the Notifications











