ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಕಿರೀಟಕ್ಕೆ ಇನ್ನೊಂದು ಗರಿ
ರಾಜ್ಯದ ಹೆಮ್ಮೆಯ ನಂದಿನಿ ಉತ್ಪನ್ನ, ಬಿಎಂಟಿಸಿಗಳಿಗೆ ರಾಯಭಾರಿಯಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಕಿರೀಟಕ್ಕೆ ಮತ್ತೊಂದು ಗರಿ ದೊರಕಿದೆ. ಜಿಲ್ಲೆಯೊಂದರ ರಾಯಭಾರಿಯಾಗುವ ಮಹತ್ವದ ಗೌರವ ಅವರಿಗೆ ಲಭಿಸಿದೆ. ಅದೂ ತಮ್ಮ ತಂದೆ ಡಾ. ರಾಜ್ಕುಮಾರ್ ಹುಟ್ಟಿ ಬೆಳೆದ ಜಿಲ್ಲೆಗೆ.
ರಾಜ್ಯದ ಗಡಿ ಭಾಗದಲ್ಲಿರುವ, ಇನ್ನೂ ಅಭಿವೃದ್ಧಿ ಮರೀಚಿಕೆಯಾಗಿರುವ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿ ರಾಯಭಾರಿಯಾಗಲು ಪುನೀತ್ ರಾಜ್ಕುಮಾರ್ ಒಪ್ಪಿಗೆ ಸೂಚಿಸಿದ್ದಾರೆ. ಮೈಸೂರಿಗೆ ಸಮೀಪದಲ್ಲಿಯೇ ಇದ್ದು, ಅನೇಕ ಪ್ರವಾಸಿ ತಾಣಗಳನ್ನು ಹೊಂದಿದ್ದರೂ ಚಾಮರಾಜನಗರ ಮೂಲಸೌಕರ್ಯಗಳ ಅಭಿವೃದ್ಧಿ ವಿಚಾರದಲ್ಲಿ ತೀರಾ ಹಿಂದುಳಿದಿದೆ.
ಅದರ ಅಭಿವೃದ್ಧಿ ಕಾರ್ಯಗಳಿಗೆ ಪುನೀತ್ ಅವರನ್ನು ರಾಯಭಾರಿಯನ್ನಾಗಿ ಮಾಡಿದರೆ ಹೆಚ್ಚಿನ ಉತ್ತೇಜನ ಸಿಗಲಿದೆ ಎಂದು ಚಾಮರಾಜನಗರ ಜಿಲ್ಲಾಡಳಿತ ಉದ್ದೇಶಿಸಿತ್ತು. ಆದಕ್ಕೆ ಪುನೀತ್ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.

ಚಾಮರಾಜನಗರ ನಂಟು
ಪುನೀತ್ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರಾದರೂ ಪುನೀತ್ ಮೂಲ ಇರುವುದು ಚಾಮರಾಜನಗರದಲ್ಲಿ. ರಾಜ್ಕುಮಾರ್ ಅವರು ಹುಟ್ಟಿ ಬೆಳೆದಿದ್ದು ಚಾಮರಾಜನಗರ ಜಿಲ್ಲೆಯ ದೊಡ್ಡ ಗಾಜನೂರಿನಲ್ಲಿ. ರಾಜ್ಕುಮಾರ್ ಅವರ ಮೂಲ ಮನೆ ಹಾಗೂ ಜಮೀನು ಈ ಭಾಗದಲ್ಲಿಯೇ ಇದೆ. ಹೀಗಾಗಿ ಪುನೀತ್ ಅವರಿಗೂ ಚಾಮರಾಜನಗರಕ್ಕೂ ನಂಟು ಇದೆ.

ಪುನೀತ್ ರಾಯಭಾರಿ
ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪ್ರಾಥಮಿಕ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸದಾಶಿವನಗರದಲ್ಲಿರುವ ಪುನೀತ್ ಮನೆಗೆ ಜಿಲ್ಲಾ ಮುಖಂಡರ ಜತೆಗೆ ತೆರಳಿ ರಾಯಭಾರಿಯಾಗಲು ಆಹ್ವಾನ ನೀಡಿದ್ದಾರೆ. ಪುನೀತ್ ರಾಯಭಾರಿಯಾಗುವುದರಿಂದ ಚಾಮರಾಜನಗರದ ಅಭಿವೃದ್ಧಿ ಕಾರ್ಯಗಳಿಗೆ ಹೊಸ ಹುಮ್ಮಸ್ಸು ದೊರಕುವ ನಿರೀಕ್ಷೆಯಿದೆ.

ನಮ್ಮೂರು ಚಾಮರಾಜನಗರ ಎಂದಿದ್ದ ಪುನೀತ್
ಕನ್ನಡ ಕೋಟ್ಯಧಿಪತಿ ಶೋದಲ್ಲಿ ಕೆಲವು ವರ್ಷಗಳ ಹಿಂದೆ ಪುನೀತ್ ತಾವೂ ಚಾಮರಾಜನಗರದವರೇ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಸ್ಪರ್ಧಿಯೊಬ್ಬರು ತಮ್ಮದು ಚಾಮರಾಜನಗರ ಎಂದು ಹೇಳಿದ್ದರು. ಆಗ ಪುನೀತ್, 'ಏ ನಮ್ಮೂರು ಕಣ್ರೀ' ಎಂದು ಹೇಳಿದ್ದರು. ಇದು ಚಾಮರಾಜನಗರದ ಕುರಿತಾದ ಅವರ ಪ್ರೀತಿಯನ್ನು ಬಿಂಬಿಸಿತ್ತು.

ರಾಜ್ಕುಮಾರ್ ಅಪಹರಣ ನಡೆದಿದ್ದು..
ಡಾ. ರಾಜ್ಕುಮಾರ್ ಬೆಳೆದಿದ್ದು ತಮಿಳುನಾಡು ರಾಜ್ಯಕ್ಕೆ ಹೊಂದಿಕೊಂಡಂತೆ ಇರುವ ಗಡಿಭಾಗದ ತಾಳವಾಡಿಯಲ್ಲಿ. ಅವರು ಬೆಳೆದ ಮನೆ ಇನ್ನೂ ಅಲ್ಲಿದೆ. ಚಾಮರಾಜನಗರದಿಂದ ಅಲ್ಲಿಗೆ ತೆರಳುವ ಮುನ್ನ ಇರುವ ತೋಟದ ಮನೆಯಿಂದ ಅವರನ್ನು ವೀರಪ್ಪನ್ ಅಪಹರಿಸಿದ್ದ. ಅದರ ಎದುರೇ ಮತ್ತೊಂದು ಮನೆ ನಿರ್ಮಿಸಲಾಗಿದೆ. ತಮ್ಮ ಕೊನೆಯ ದಿನಗಳನ್ನು ಅಲ್ಲಿಯೇ ಕಳೆಯಬೇಕು ಎಂದು ರಾಜ್ಕುಮಾರ್ ಬಯಸಿದ್ದರು.

ಸಿಎಂಗಳು ಭೇಟಿ ನೀಡುವುದಿಲ್ಲ...
ಚಾಮರಾಜನಗರ ಶೇ 50ರಷ್ಟು ಅರಣ್ಯ ಹಾಗೂ ಅಪರೂಪದ ವನ್ಯಜೀವಿಗಳನ್ನು ಒಳಗೊಂಡಿರುವ ಪ್ರದೇಶ. ಪ್ರಸಿದ್ಧ ಧಾರ್ಮಿಕ ಕೇಂದ್ರಗಳೂ ಇಲ್ಲಿವೆ. ಆದರೆ ಮುಖ್ಯಮಂತ್ರಿಯಾದವರು ಇಲ್ಲಿಗೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಅಪವಾದ ಈ ಜಿಲ್ಲೆಯ ಮೇಲಿದೆ. ಹೀಗಾಗಿ ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದುಳಿದಿದೆ.


Click it and Unblock the Notifications











