ಚಿತ್ರಮಂದಿರಗಳಿಗೆ ಕಡಿವಾಣ ಹಾಕುವಂತೆ ಬಿಬಿಎಂಪಿ ಪ್ರಸ್ತಾವನೆ: ಪವರ್ ಸ್ಟಾರ್ ಗರಂ
ಕೊರೊನಾ ಎರಡನೇ ಅಲೆ ಬೆಂಗಳೂರಿನಲ್ಲಿ ಮತ್ತೆ ಆತಂಕ ತಂದಿದ್ದು. ಪ್ರಕರಣಗಳು ಮತ್ತೆ ಭಾರಿ ಏರಿಕೆ ಕಂಡಿವೆ. ಹಾಗಾಗಿ ಬಿಬಿಎಂಪಿಯು ತಜ್ಞರ ಸಮಿತಿ ರಚಿಸಿ ಕರೊನಾ ತಡೆಯಲು ಕೈಗೊಳ್ಳಬೇಕಾದ ಅಂಶಗಳ ಪಟ್ಟಿ ಮಾಡಿದ್ದು. ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ.
ಬಿಬಿಎಂಪಿಯು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು ಅರ್ಧಕ್ಕೆ ಇಳಿಸಬೇಕು ಎಂಬುದು ಸಹ ಒಂದಾಗಿದ್ದು, ಬಿಬಿಎಂಪಿಯ ಈ ಪ್ರಸ್ತಾವನೆ ಚಿತ್ರರಂಗದವರಿಗೆ ತೀವ್ರ ಆತಂಕ ತಂದಿದೆ.
ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಲು ಚಿತ್ರಮಂದಿರಗಳು ಪೂರ್ಣ ತೆರಯಲೆಂದು ಕಾದಿದ್ದು ಈಗ ಒಟ್ಟಿಗೆ ಹಲವು ಸ್ಟಾರ್ ನಟರ ಸಿನಿಮಾಗಳು ತೆರೆಗೆ ಬರಲಿರುವ ದಿನಾಂಕವನ್ನು ಘೋಷಿಸಿಯಾಗಿದೆ. ಈ ಸಮಯದಲ್ಲಿ ಸೀಟು ಸಾಮರ್ಥ್ಯದ 50% ಪ್ರೇಕ್ಷಕರಿಗೆ ಮಾತ್ರವೇ ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಅವಕಾಶ ಕೊಟ್ಟರೆ ಸಿನಿಮಾಗಳಿಗೆ ಭಾರಿ ನಷ್ಟವಾಗುತ್ತದೆ ಎಂಬುದು ನಿರ್ಮಾಪಕ ಹಾಗೂ ಸ್ಟಾರ್ ನಟರ ಅಂಬೋಣ.

'100% ಸೀಟು ಭರ್ತಿಗೆ ನೀಡಿರುವ ಅವಕಾಶ ಮುಂದುವರೆಯಬೇಕು'
ಈ ಬಗ್ಗೆ ಮಾಧ್ಯಮಗಳ ಬಳಿ ಮಾತನಾಡಿರುವ ಪುನೀತ್ ರಾಜ್ಕುಮಾರ್, ಬಿಬಿಎಂಪಿಯು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪುನೀತ್ ರಾಜ್ಕುಮಾರ್ ನಟನೆಯ 'ಯುವರತ್ನ' ಸಿನಿಮಾ ಏಪ್ರಿಲ್ 1 ರಂದು ಬಿಡುಗಡೆ ಆಗಲು ತಯಾರಾಗಿದೆ. ಈ ನಡುವೆ ಬಿಬಿಎಂಪಿ ಹೀಗೊಂದು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸಿದೆ.

ಈಗಷ್ಟೆ ಚಿತ್ರೋದ್ಯಮ ಚಟುವಟಿಕೆ ಆರಂಭಿಸಿದೆ: ಪುನೀತ್
'ಈಗ ತಾನೇ ಚಿತ್ರರಂಗ ಓಪನ್ ಆಗಿದೆ, ಈಗ ಚಿತ್ರರಂಗ ಚೇತರಿಸಿಕೊಳ್ಳುವ ಹಾದಿಯಲ್ಲಿದೆ. ಈ ಸಂದರ್ಭದಲ್ಲಿ ಚಿತ್ರಮಂದಿರದ ಮೇಲೆ ನಿಯಮ ಹೇರುವುದು ಸರಿಯಲ್ಲ. ದಯವಿಟ್ಟು 100% ಸೀಟು ಭರ್ತಿಗೆ ನೀಡಿರುವ ಅವಕಾಶ ಮುಂದುವರೆಯಬೇಕು' ಎಂದಿದ್ದಾರೆ ಪುನೀತ್.

'ನಿಯಂತ್ರಣ ಬೇಡ, ಸ್ವಯಂ ಜಾಗೃತಿ ಇರಲಿ ಎಂದು ಮೋದಿ ಹೇಳಿದ್ದಾರೆ'
'ಪ್ರಧಾನಿ ನರೇಂದ್ರ ಮೋದಿ ಅವರೇ ತಮ್ಮ ಭಾಷಣದಲ್ಲಿ ಹೇಳಿರುವಂತೆ, ''ಇನ್ನು ಮುಂದೆ ಯಾವುದನ್ನೂ ನಿಯಂತ್ರಿಸುವುದು ಸರಿಯಲ್ಲ. ಬದಲಿಗೆ ಸ್ವಯಂ ಜಾಗೃತೆ ಹೆಚ್ಚಿಸಬೇಕು. ಮಾಸ್ಕ್ ಬಳಕೆ ಕಡ್ಡಾಯ ಆಗಬೇಕು'' ಎಂದು ಮೋದಿಯವರು ಹೇಳಿದ್ದಾರೆ' ಎಂದು ಮೋದಿ ಮಾತು ಉಲ್ಲೇಖಿಸಿದ್ದಾರೆ ಪುನೀತ್.

ಮಾಸ್ಕ್ ಕಡ್ಡಾಯಗೊಳಿಸಬೇಕು, ಸ್ಯಾನಿಟೈಸ್ ಮಾಡಬೇಕು: ಪುನೀತ್
'ಮಾಸ್ಕ್ ಕಡ್ಡಾಯವಾಗಿ ಧರಿಸುವುದು, ಸ್ಯಾನಿಟೈಸ್ ಮಾಡುವುದು ಇದು ಮುಖ್ಯ ಆದ್ಯತೆ ಆಗಬೇಕು. ಇದರ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಬೇಕು. ಹೊರ ರಾಜ್ಯಗಳಿಂದ ಬರುವವರನ್ನು ತಪಾಸಣೆಗೆ ಒಳಪಡಿಸಬೇಕು. Rallyಗಳು, ಮದುವೆಗಳಲ್ಲಿ ಹೆಚ್ಚು ಜನ ಸೇರದಂತೆ ನೋಡಿಕೊಳ್ಳಬೇಕು. ಆದರೆ ವಾಣಿಜ್ಯ ಚಟುವಟಿಕೆಗಳನ್ನು ತಡೆಯುವುದು ಸೂಕ್ತವಲ್ಲ' ಎಂದರು ಪುನೀತ್.

ಚಿತ್ರೋದ್ಯಮ ನಂಬಿಕೊಂಡು ಸಾವಿರಾರು ಕುಟುಂಬಗಳಿವೆ: ಪುನೀತ್
'ಚಿತ್ರೋದ್ಯಮವನ್ನು ನಂಬಿಕೊಂಡು ಸಾವಿರಾರು ಕುಟುಂಬಗಳಿವೆ. ಒಂದು ವರ್ಷ ಏನೂ ಚಟುವಟಿಕೆ ಇಲ್ಲದೆ ಚಿತ್ರೋದ್ಯಮ ಕಷ್ಟ ಅನುಭವಿಸಿದೆ. ಸಿನಿಮಾಗಳು ಸರಿಯಾಗಿ ಕಲೆಕ್ಷನ್ ಮಾಡಲಿಲ್ಲವೆಂದರೆ ಸಿನಿಮಾವನ್ನು ನಂಬಿಕೊಂಡ ಕುಟುಂಬಗಳಿಗೆ ಕಷ್ಟವಾಗುತ್ತದೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ನಿರ್ಣಯ ತೆಗೆದುಕೊಳ್ಳಬೇಕು. ಚಿತ್ರಮಂದಿರ ಪೂರ್ಣ ಭರ್ತಿ ಆದೇಶವನ್ನು ಮುಂದುವರೆಸಬೇಕು' ಎಂದರು ಪುನೀತ್.


Click it and Unblock the Notifications











