ಜನ್ಮದಿನದ ಮುನ್ನ ಅಭಿಮಾನಿಗಳಿಗೆ ಸಂದೇಶ ನೀಡಿದ ಪವರ್ ಸ್ಟಾರ್ ಪುನೀತ್
'ರಾಜರತ್ನೋತ್ಸವ'ಕ್ಕೆ ದಿನಗಣನೆ ಶುರುವಾಗಿದೆ. ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಒಂದೊಂದೇ ದಿನ ಕಳೆದಂತೆಯೂ ಇಷ್ಟೇ ದಿನ ಬಾಕಿ ಇದೆ ಎಂಬ ಕಾತರವನ್ನು ಹಂಚಿಕೊಳ್ಳುತ್ತಿದ್ದಾರೆ. 'ರಾಜರತ್ನೋತ್ಸವ' ಎಂದರೆ ಪುನೀತ್ ರಾಜ್ಕುಮಾರ್ ಜನ್ಮದಿನದ ಸಂಭ್ರಮ. ಮಾರ್ಚ್ 17ರಂದು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ಸಂಭ್ರಮವನ್ನು ಆಚರಣೆ ಮಾಡಲು ಕಾದಿದ್ದರು.
ಆದರೆ, ಪುನೀತ್ ಅಭಿಮಾನಿಗಳಿಗೆ ನಿರಾಸೆ ಮಾಡಿಸುವ ಸುದ್ದಿ ಸಿಕ್ಕಿದೆ. ಮಾರ್ಚ್ 17ರಂದು ಪುನೀತ್ ರಾಜ್ಕುಮಾರ್ ಅವರ ಬರ್ಥಡೇ ಸಂಭ್ರಮದಲ್ಲಿ ಪಾಲ್ಗೊಳ್ಳುವ ಉತ್ಸಾಹದಲ್ಲಿದ್ದ ಅಭಿಮಾನಿಗಳಿಗೆ ಸ್ವತಃ ಪುನೀತ್, ಅಂದು ಯಾವುದೇ ಆಚರಣೆ ಬೇಡ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಕಾರಣ ಕೊರೊನಾ ವೈರಸ್ ಭೀತಿ. ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಇಂತಹ ಸಂದರ್ಭದಲ್ಲಿ ಜನರು ಹೀಗೆ ಸೇರುವುದು ಬೇಡ ಎಂದು ಪುನೀತ್ ಕಳಕಳಿಯ ಮನವಿ ಮಾಡಿದ್ದಾರೆ.

ಜನ್ಮದಿನ ಆಚರಣೆ ಮಾಡೊಲ್ಲ
ಟ್ವಿಟ್ಟರ್ನಲ್ಲಿ ಸಣ್ಣ ವಿಡಿಯೋವನ್ನು ಹಂಚಿಕೊಂಡಿರುವ ಪುನೀತ್ ರಾಜ್ಕುಮಾರ್ ತಮ್ಮ ಜನ್ಮದಿನದ ಆಚರಣೆಗೆ ಯಾರು ಮನೆಯ ಬಳಿ ಬರಬೇಡಿ. ಅಂದು ಆಚರಣೆ ಮಾಡುವುದಿಲ್ಲ. ನೀವು ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತವಾಗಿರುವುದೇ ನೀವು ನನಗೆ ನೀಡುವ ದೊಡ್ಡ ಉಡುಗೊರೆ ಎಂದು ಹೇಳಿದ್ದಾರೆ.
ನಾನು ಮನೆಯಲ್ಲಿ ಇರೊಲ್ಲ
ಎಲ್ಲ ಸಮಸ್ತ ಅಭಿಮಾನಿ ದೇವರುಗಳಿಗೆ ನನ್ನ ಕಡೆಯಿಂದ ನಮಸ್ಕಾರ. ನಾನು ಈ ವರ್ಷ ಹುಟ್ಟುಹಬ್ಬವನ್ನು ಆಚರಿಸುತ್ತಿಲ್ಲ. ಯಾರೂ ತಮ್ಮ ತಮ್ಮ ಊರುಗಳಿಂದ ಮಾರ್ಚ್ 17ರಂದು ನನ್ನ ಮನೆಗೆ ಬರಬೇಡಿ. ಅಂದು ನಾನು ಮನೆಯಲ್ಲಿಯೂ ಇರುವುದಿಲ್ಲ ಎಂದು ಪುನೀತ್ ತಿಳಿಸಿದ್ದಾರೆ.

ನಾವು ಕೈಜೋಡಿಸಬೇಕು
ನಮ್ಮ ಇಡೀ ದೇಶದಲ್ಲಿ, ಜಗತ್ತಿನಲ್ಲಿ ಈಗ ತೊಂದರೆ ಇದೆ. ಸರ್ಕಾರ ಏನು ನಿರ್ಧಾರ ತೆಗೆದುಕೊಂಡಿದೆ, ಅದಕ್ಕೆ ನಾವೆಲ್ಲರೂ ಕೈ ಜೋಡಿಸಬೇಕು ಎಂದು ಪುನೀತ್, ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಸರ್ಕಾರದ ಕ್ರಮಗಳಿಗೆ ಸಹಕಾರ ನೀಡಬೇಕು ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ಪ್ರೀತಿ ವಿಶ್ವಾಸ ಹೀಗೆ ಇರಲಿ
ನನ್ನ ಜನ್ಮದಿನ ಆಚರಣೆಗೆ ಇದುವರೆಗೆ ಬೇರೆ ಬೇರೆ ಊರುಗಳಿಂದ ಬರುತ್ತಿದ್ದಿರಿ, ಪ್ರೀತಿ ವಿಶ್ವಾಸ ತೋರಿಸುತ್ತಿದ್ದಿರಿ. ಖಂಡಿತವಾಗಿಯೂ ನಮ್ಮ ಪ್ರೀತಿ ವಿಶ್ವಾಸ ನನ್ನ ಮೇಲೆ ಹೀಗೆ ಯಾವಾಗಲೂ ನನ್ನ ಮೇಲೆ ಇರುತ್ತದೆ ಎಂದು ಭಾವಿಸುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ, ಹುಷಾರಾಗಿರಿ ಎಂದು ಪುನೀತ್ ಕಿವಿಮಾತು ಹೇಳಿದ್ದಾರೆ.


Click it and Unblock the Notifications











