ಅಪ್ಪುಗೆ ಹಾಲು-ತುಪ್ಪ: ನೆಚ್ಚಿನ ಭಕ್ಷ ಭೋಜನ ನೈವೇದ್ಯ
ಕಳೆದ ಶುಕ್ರವಾರ ನಿಧನರಾದ ನಟ ಪುನೀತ್ ರಾಜ್ಕುಮಾರ್ ಅವರಿಗೆ ಇಂದು ಕುಟುಂಬಸ್ಥರು ಹಾಲು-ತುಪ್ಪ ಕಾರ್ಯ ನೆರವೇರಿಸಿದರು.
ಕಂಠೀರವ ಸ್ಟುಡಿಯೋನ ಅಪ್ಪುವಿನ ಸಮಾಧಿಗೆ ತೆರಳಿದ ಪುನೀತ್ ರಾಜ್ಕುಮಾರ್ ಕುಟುಂಬಸ್ಥರು, ಆಪ್ತೇಷ್ಟರು, ಗೆಳೆಯರು ಪುನೀತ್ ಸಮಾಧಿಗೆ ಹಾಲು-ತುಪ್ಪ ಹೊಯ್ದರು.
ಪುನೀತ್ ಮಾವ ಗೋವಿಂದ ರಾಜು ಮುಂದಾಳತ್ವದಲ್ಲಿ ಇಂದು ಅಪ್ಪು ಕುಟುಂಬಸ್ಥರು ಹಾಲು-ತುಪ್ಪ ಕಾರ್ಯ ನೆರವೇರಿಸಿದ್ದಾರೆ. ಪುನೀತ್ ಪತ್ನಿ ಅಶ್ವಿನಿ, ಮಕ್ಕಳು, ಶಿವಣ್ಣ, ರಾಘವೇಂದ್ರ ರಾಜ್ಕುಮಾರ್, ಅವರ ಮಕ್ಕಳು, ಪಾರ್ವತಮ್ಮ ರಾಜ್ಕುಮಾರ್ ತಮ್ಮ ಚಿನ್ನೇಗೌಡ ಅವರ ಮಕ್ಕಳಾದ ಶ್ರೀಮುರಳಿ, ವಿಜಯ ರಾಘವೇಂದ್ರ, ಗಣ್ಯರಾದ ಸಚಿವ ಗೋಪಾಲಯ್ಯ, ಚಿತ್ರರಂಗದ ಮುಖಂಡ ಸಾ.ರಾ.ಗೋವಿಂದು, ಪುನೀತ್ ರಾಜ್ಕುಮಾರ್ ಗೆಳೆಯರು ಇನ್ನೂ ಕೆಲವು ಚಿತ್ರರಂಗದ ಸೆಲೆಬ್ರಿಟಿಗಳು ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗಾಜನೂರಿನಿಂದಲೂ ಹಲವು ಸಂಬಂಧಿಗಳು ಆಗಮಿಸಿ ಇಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಅಪ್ಪು ಸಮಾಧಿ ಮೇಲೆ ಮಣ್ಣಿನ ಹಣತೆ ಹಚ್ಚಿ ಬಾಳೆ ಎಲೆಯಲ್ಲಿ ಅಪ್ಪುಗೆ ಇಷ್ಟವಾದ ಆಹಾರಗಳನ್ನು ಇಡಲಾಗಿತ್ತು. ಮುದ್ದೆ, ನಾಟಿ ಕೋಳಿ ಸಾರು, ಬಿರಿಯಾನಿ, ಕಬಾಬು, ಇಡ್ಲಿ, ಕಡ್ಲೆಕಾಳು, ಗೊಜ್ಜು, ಮೊಟ್ಟೆ ಬಿರಿಯಾನಿ, ಬಜ್ಜಿ ಇನ್ನಿತರೆ ತಿನಿಸುಗಳು ಹಾಗೂ ಕೆಲವು ಮಾದರಿಯ ಸಿಹಿ ತಿನಿಸುಗಳನ್ನು ಕುಟುಂಬಸ್ಥರು ಮಾಡಿಕೊಂಡು ಬಂದಿದ್ದರು, ಬಾಳೆ ಎಲೆಯಲ್ಲಿ ನೈವೇದ್ಯ ಇಟ್ಟರು.
ಅಪ್ಪು ಸಮಾಧಿಯನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. ಇಂದೂ ಸಹ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರು ಸ್ಥಳದಲ್ಲಿ ಹಾಜರಿದ್ದರು. ಅಪ್ಪು ಸಮಾಧಿ ಸುತ್ತ 144 ಸೆಕ್ಷನ್ ಇನ್ನೂ ಜಾರಿಯಲ್ಲಿದ್ದು, ಕುಟುಂಬಸ್ಥರ ಹೊರತಾಗಿ ಇನ್ನಾರಿಗೂ ಪ್ರವೇಶವಿಲ್ಲ. ಆದರೆ ಇಂದಿನ ಬಳಿಕ 144 ಸೆಕ್ಷನ್ ತೆಗೆದು ಹಾಕುವ ಸಂಭವ ಇವೆ.
ಅಪ್ಪು ಸಮಾಧಿ ಮೇಲೆ ಸಿಮೆಂಟ್ ಅಥವಾ ಗ್ರಾನೈಟ್ ರಚನೆ ಇನ್ನೂ ಮಾಡಿಲ್ಲವಾದ್ದರಿಂದ ಅದೆಲ್ಲ ಆದ ಬಳಿಕ ಅಪ್ಪು ಸಮಾಧಿಗೆ ಸಾರ್ವಜನಿಕ ದರ್ಶನ ವ್ಯವಸ್ಥೆ ಮಾಡಲಾಗುತ್ತದೆ ಎನ್ನಲಾಗುತ್ತಿದೆ. ಆದರೆ ಅದು ಒಂದೇ ದಿನದಲ್ಲಿ ಆಗುವ ಕಾರ್ಯವಲ್ಲವಾದ್ದರಿಂದ ಸಾರ್ವಜನಿಕರಿಗೆ ಈಗಲೇ ದರ್ಶನ ಅವಕಾಶ ಸಿಗುತ್ತದೆಯೋ ಇಲ್ಲವೋ ಕಾದು ನೋಡಬೇಕಿದೆ.
ಪುನೀತ್ ರಾಜ್ಕುಮಾರ್ ಶುಕ್ರವಾರ (ಅಕ್ಟೋಬರ್ 29) ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಮೂರು ದಿನಗಳ ಕಾಲ ಅವರ ಅಂತಿಮ ದರ್ಶನ ವ್ಯವಸ್ಥೆ ಬಳಿಕ ಭಾನುವಾರ ಬೆಳಿಗ್ಗೆ ಕಂಠೀರವ ಸ್ಟುಡಿಯೋದಲ್ಲಿ ಅಪ್ಪುವಿನ ಅಂತಿಮ ಕಾರ್ಯ ನೆರವೇರಿಸಲಾಯಿತು. ಇಂದು ಕುಟುಂಬಸ್ಥರು ಐದನೇ ದಿನ ಹಾಲು-ತುಪ್ಪು ಕಾರ್ಯ ನೆರವೇರಿಸಿದರು.


Click it and Unblock the Notifications











