ಯೋಜನೆಯಂತೆ 'ಕಾಂತಾರ'ದಲ್ಲಿ ಪುನೀತ್ ನಟಿಸಿದ್ದರೆ ಲುಕ್ ಹೀಗಿರುತ್ತಿತ್ತು
ಕಾಂತಾರ ಚಿತ್ರ ಸದ್ಯ ಬಾಕ್ಸ್ ಆಫೀಸ್ನಲ್ಲಿ ಚಿನ್ನದ ಬೆಳೆ ತೆಗೆದಿದೆ. ಹದಿನಾರು ಕೋಟಿ ಬಜೆಟ್ನಲ್ಲಿ ತಯಾರಾದ ಈ ಚಿತ್ರ ಇದೀಗ 400 ಕೋಟಿ ಕ್ಲಬ್ ಸೇರುವತ್ತ ದಾಪುಗಾಲು ಇಟ್ಟಿದೆ. ಚಿತ್ರ ಐವತ್ತು ದಿನಗಳ ಸನಿಹದಲ್ಲಿದ್ದರೂ ಸಹ ಇನ್ನೂ ಹಲವೆಡೆ ಹೌಸ್ಫುಲ್ ಪ್ರದರ್ಶನಗಳನ್ನು ಕಾಣುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶನದ ಜತೆಗೆ ನಟನೆಯ ಮೂಲಕವೂ ಪ್ರೇಕ್ಷಕನ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು ರಜನಿಕಾಂತ್ ರೀತಿಯ ಶ್ರೇಷ್ಠ ನಟರಿಂದ ಆಹ್ವಾನ ಪಡೆದುಕೊಂಡು ಶಹಬ್ಬಾಷ್ಗಿರಿ ಗಿಟ್ಟಿಸಿಕೊಂಡಿದ್ದಾರೆ.
ಹೀಗೆ ರಿಷಬ್ ಶೆಟ್ಟಿ ಕಾಂತಾರ ಚಿತ್ರದಲ್ಲಿ ನಿರ್ವಹಿಸಿರುವ ಕಾಡುಬೆಟ್ಟು ಶಿವನ ಪಾತ್ರದಲ್ಲಿ ನಟ ಪುನೀತ್ ರಾಜ್ಕುಮಾರ್ ನಟಿಸಬೇಕಿತ್ತು ಎನ್ನುವ ವಿಷಯವನ್ನು ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಮೊದಲಿಗೆ ಬಹಿರಂಗಪಡಿಸಿದ್ದರು ಹಾಗೂ ಸ್ವತಃ ನಿರ್ದೇಶಕ ರಿಷಬ್ ಶೆಟ್ಟಿ ಅವರೇ ಹಲವು ಸಂದರ್ಶನಗಳಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದರು.
ಇನ್ನು ಈ ವಿಷಯ ತಿಳಿಯುತ್ತಿದ್ದಂತೆ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಇಂಥ ಒಳ್ಳೆ ಪಾತ್ರದಲ್ಲಿ ನಟಿಸಿಬಿಡಬೇಕಿತ್ತು ಎಂದು ಬೇಸರಗೊಂಡರು. ಹೀಗೆ ಮೊದಲಿನ ಯೋಜನೆಯಂತೆ ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿ ಬದಲಾಗಿ ಒಂದುವೇಳೆ ಪುನೀತ್ ರಾಜ್ಕುಮಾರ್ ನಟಿಸಿದ್ದರೆ ಹೇಗಿರುತ್ತಿತ್ತು ಎಂಬುದನ್ನು ಕಲೆಗಾರರೊಬ್ಬರು ರಚಿಸಿದ್ದಾರೆ. ಸದ್ಯ ಆ ಆರ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪುನೀತ್ ದೈವನರ್ತಕ ಲುಕ್ ವೈರಲ್
ಕುಶಾಲ್ ಹಿರೇಮಠ್ ಎಂಬ ಆರ್ಟಿಸ್ಟ್ ನಟ ಪುನೀತ್ ರಾಜ್ಕುಮಾರ್ ಅವರ ಸಾಮಾನ್ಯ ಫೋಟೊವೊಂದನ್ನು ಎಡಿಟ್ ಮಾಡಿದ್ದು ಅದಕ್ಕೆ ದೈವನರ್ತಕರ ಟಚ್ ನೀಡಿದ್ದಾರೆ. ಅಪ್ಪು ಮುಖವನ್ನು ದೈವನರ್ತಕರ ಹಾಗೆ ಸಿಂಗರಿಸಲಾಗಿದ್ದು ಸದ್ಯ ನೆಟ್ಟಿಗರು ಈ ಫೋಟೊ ಕಂಡು ಛೇ ಅಪ್ಪು ಈ ಪಾತ್ರ ಮಾಡಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಅಪ್ಪು ಮಾತ್ರ ಈ ಪಾತ್ರ ಮಾಡೋಕೆ ಆಗ್ತಾ ಇತ್ತು
ಇನ್ನು ಕಾಂತಾರ ಚಿತ್ರದ ಕತೆಯನ್ನು ಕೇಳಿದ ಹೊಂಬಾಳೆ ಫಿಲ್ಮ್ಸ್ ಮಾಲೀಕ ವಿಜಯ್ ಕಿರಗಂದೂರು ಈ ಚಿತ್ರವನ್ನು ಸ್ಟಾರ್ ನಟರು ಮಾಡುವುದಾದರೆ ಯಾರು ಮಾಡಬಹುದು ಎಂಬ ಪ್ರಶ್ನೆಯನ್ನು ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ರಿಷಬ್ ಶೆಟ್ಟಿ ಚಿತ್ರದಲ್ಲಿ ಕಂಬಳ ಓಡಿಸುವ ದೃಶ್ಯ ಹಾಗೂ ಹಲವಾರು ಸಾಹಸ ದೃಶ್ಯಗಳಿರುವ ಕಾರಣ ಫಿಟ್ನೆಸ್ ಹೊಂದಿರುವ ಪುನೀತ್ ರಾಜ್ಕುಮಾರ್ ಮಾತ್ರ ಮಾಡಲು ಸಾಧ್ಯ ಎಂದು ಹೇಳಿಕೆ ನೀಡಿದ್ದರು.

ಅಪ್ಪು ನಟಿಸದಿರಲು ಕಾರಣ?
ಇನ್ನು ಇಷ್ಟೆಲ್ಲಾ ಮಾತುಕತೆ ಆದ ನಂತರ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಪುನೀತ್ ರಾಜ್ಕುಮಾರ್ ಅವರನ್ನು ಕರೆಸಿದ್ದರು ಹಾಗೂ ರಿಷಬ್ ಶೆಟ್ಟಿ ಕಾಂತಾರ ಕತೆಯನ್ನು ಅಪ್ಪುಗೆ ಹೇಳಿದ್ದರು. ಹೀಗೆ ಕತೆ ಕೇಳಿದ್ದ ಪುನೀತ್ ರಾಜ್ಕುಮಾರ್ ಖುಷಿಯಿಂದ ಮೆಚ್ಚಿಕೊಂಡಿದ್ದರು. ಆದರೆ ಜೇಮ್ಸ್ ಹಾಗೂ ಗಂಧದಗುಡಿ ಚಿತ್ರಗಳಲ್ಲಿ ನಟಿಸುತ್ತಿದ್ದ ಅಪ್ಪು ದ್ವಿತ್ವ ಚಿತ್ರವನ್ನು ಒಪ್ಪಿಕೊಂಡಿದ್ದ ಕಾರಣ ಡೇಟ್ಸ್ ಸಮಸ್ಯೆಯಿಂದ ಈ ಚಿತ್ರ ಮಾಡಲಾಗಲಿಲ್ಲ. ಇನ್ನು ಈ ಚಿತ್ರದಲ್ಲಿ ನೀವೇ ನಟಿಸಿ ಮುಂದೊಮ್ಮೆ ಒಟ್ಟಿಗೆ ಬೇರೆ ಪ್ರಾಜೆಕ್ಟ್ ಮಾಡೋಣ ಎಂದು ಅಪ್ಪು ರಿಷಬ್ ಶೆಟ್ಟಿ ಬಳಿ ಹೇಳಿದ್ದರು.

ಕಾಂತಾರ ಮಾತ್ರವಲ್ಲ ಹಲವು ಚಿತ್ರ ಕೈಬಿಟ್ಟಿದ್ದರು ಅಪ್ಪು
ಇನ್ನು ಕಾಂತಾರ ಮಾತ್ರವಲ್ಲದೇ ಈ ಹಿಂದಿನ ಹಲವಾರು ಹಿಟ್ ಚಿತ್ರಗಳನ್ನು ಪುನೀತ್ ರಾಜ್ಕುಮಾರ್ ಕೈ ಬಿಟ್ಟಿದ್ದರು. ಅದರಲ್ಲಿ ಪ್ರಮುಖವಾಗಿ ಯೋಗರಾಜ್ ಭಟ್ ನಿರ್ದೇಶನದ ಮುಂಗಾರು ಮಳೆ ಹಾಗೂ ಗಾಳಿಪಟ ಚಿತ್ರಗಳನ್ನು ಅಪ್ಪು ನಟಿಸದೇ ಯುವ ನಟರಿಗೆ ಮಾಡಿ ಎಂಬ ಸಲಹೆಯನ್ನು ನೀಡಿದ್ದರು. ಈ ಚಿತ್ರಗಳೂ ಸಹ ಅಂದಿಗೆ ದೊಡ್ಡ ಮಟ್ಟದ ಸಕ್ಸಸ್ ಕಂಡಿದ್ದವು.


Click it and Unblock the Notifications











