ಅಪ್ಪು ಬಾಸ್.. ಅಪ್ಪು ಬಾಸ್.. ಅಪ್ಪು ಬಾಸ್..: ಅಬ್ಬಾ ಈ ಯುವತಿಯ ಅಪ್ಪು ಅಭಿಮಾನ
ಪುನೀತ್ ರಾಜ್ಕುಮಾರ್ ನಿಧನದ ಹಿನ್ನೆಲೆಯಲ್ಲಿ ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಅಪ್ಪು ಅಭಿನಯದ 'ರಾಜಕುಮಾರ' ಸಿನಿಮಾ ಮರುಬಿಡುಗಡೆ ಆಗಿದೆ. ಹಲವೆಡೆ ಉಚಿತ ಪ್ರದರ್ಶನ ಆಯೋಜಿಸಲಾಗಿದೆ. ಸಿನಿಮಾ ನೋಡಿದ ಅಭಿಮಾನಿಗಳು ಕಣ್ಣೀರು ತುಂಬಿಕೊಂಡು ಚಿತ್ರಮಂದಿರದಿಂದ ಹೊರಗೆ ಬರುತ್ತಿದ್ದಾರೆ.
ಹೀಗೆಯೇ ಚಿತ್ರಮಂದಿರ ಒಂದರ ಬಳಿ ಪುನೀತ್ ಅವರ ಅಪ್ಪಟ ಅಭಿಮಾನಿ ಪ್ರಜ್ಞಾ ಎಂಬ ಯುವತಿ 'ಫಿಲ್ಮಿಬೀಟ್ ಕನ್ನಡ'ದ ಜೊತೆ ಮಾತಿಗೆ ಸಿಕ್ಕಿ ಅಪ್ಪು ಅವರ ಬಗ್ಗೆ ಆಡಿರುವ ಮಾತುಗಳು ಚೇತೋಹಾರಿಯಾಗಿವೆ. ಪುನೀತ್ ಅವರನ್ನು ಮಹಿಳೆಯರು, ಮಕ್ಕಳು ಏಕಿಷ್ಟು ಹಚ್ಚಿಕೊಂಡಿದ್ದರು ಎಂಬುದಕ್ಕೆ ಅವರ ಮಾತುಗಳು ಸಾಕ್ಷಿಯಾಗಿವೆ.
''ನಾನು ಅಳುವುದಿಲ್ಲ. ಬಹುಷಃ ಅವರು ಮೇಲೆನಿಂತು ನೋಡುತ್ತಿರುತ್ತಾರೆ, ಇಲ್ಲೇ ಪಕ್ಕದಲ್ಲಿ ನಿಂತು ಹೇಳುತ್ತಿದ್ದಾರೆ. ಪ್ರಜ್ಞಾ ಅಳಬೇಡ, ನಾನು ನಿನ್ನ ಜೊತೆ ಇರುತ್ತೀನಿ ಅಳಬೇಡ, ಏನೇ ಒಳ್ಳೆ ಕೆಲಸ ಮಾಡಿದರೂ ನನ್ನನ್ನು ನೆನಪಿಸಿಕೊ ಎನ್ನುತ್ತಿದ್ದಾರೆ ಎನಿಸುತ್ತಿದೆ. ಹಾಗಾಗಿ ನಾನು ಇಂದು ಅಳುವುದಿಲ್ಲ. 'ರಾಜಕುಮಾರ' ಮೊದಲು ಬಿಡುಗಡೆ ಆದಾಗ ನಾನು ಏಳು ಬಾರಿ ಸಿನಿಮಾ ನೋಡಿದ್ದೆ, ಈಗ ಮತ್ತೆ ಸಿನಿಮಾ ನೋಡಲು ಬಂದಿದ್ದೇನೆ. ಎರಡು ಗಂಟೆ ಮುಂಚೆ ಬಂದು ಕಾಯುತ್ತಿದ್ದೆ. ಅವರು ನಮ್ಮನ್ನು ಬಿಟ್ಟು ಹೋಗಬಾರದಿತ್ತು. 46 ವರ್ಷ ಬಿಟ್ಟು ಹೋಗುವ ವಯಸ್ಸಾ ಹೇಳಿ'' ಎಂದಿದ್ದಾರೆ ಅಭಿಮಾನಿ ಪ್ರಜ್ಞಾ.

''ಅವರಿಗೆ ಎಷ್ಟು ದುಃಖ ಇದ್ದರೂ, ದ್ವೇಷಿಸುವವರು ಇದ್ದರೂ ಅವರ ನಗುವಿನಿಂದ ಎಲ್ಲರನ್ನೂ ಗೆದ್ದುಬಿಡುತ್ತಿದ್ದರು. ಅವರ ನಗುವಿಗೆ ಕೋಟಿ, ಚಿನ್ನ, ವಜ್ರ ಸುರಿದರೂ ಸಾಲದು. ಅವರ ನಗುವಿಗೆ ಬೆಲೆ ಕಟ್ಟಲಾಗದು. ಅಪ್ಪು ಬಾಸ್ ಫ್ಯಾನ್ ಆಗಿರುವುದಕ್ಕೆ ನಾನು ಹೆಮ್ಮೆ ಪಡುತ್ತೀನಿ. ದೇವರಿಗೆ ಕೈ ಮುಗಿಯುವುದೇ ಬಿಟ್ಟು ಬಿಟ್ಟೆ. ನೀವೇ ಇನ್ನಮೇಲೆ ನನಗೆ ದೇವರು, ನೀವು ನನಗೆ ಆಶೀರ್ವಾದ ಮಾಡಿ. ನಮ್ಮ ದೇವರು ನಮ್ಮನ್ನು ಇಷ್ಟು ಬೇಗ ಬಿಟ್ಟು ಹೋಗಬಾರದಿತ್ತು. ಮೊನ್ನೆಯಷ್ಟೆ ಓದಿದೆ ಮಹಾತ್ಮಾ ಗಾಂಧಿ ಆದ ಮೇಲೆ 20 ಲಕ್ಷ ಜನ ಅಂತಿಮ ದರ್ಶನ ಪಡೆದಿರುವುದು ಪುನೀತ್ ಅವರೊಬ್ಬರಿಗೆ ಮಾತ್ರ ಅಂತೆ. ಇದೇ ತೋರಿಸುತ್ತದೆ ಅವರದ್ದು ಎಂಥಹಾ ವ್ಯಕ್ತಿತ್ವ ಎಂಬುದನ್ನು. ಬಿಲ್ಡಪ್ ಎಂದೂ ಕೊಟ್ಟವರಲ್ಲ ಅವರ ನಗುವೊಂದೇ ಸಾಕು'' ಎಂದು ಅಪ್ಪು ಅವರ ವ್ಯಕ್ತಿತ್ವ ಕೊಂಡಾಡಿದ್ದಾರೆ ಪ್ರಜ್ಞಾ.
''ಅಪ್ಪು ಬಾಸ್, ಬಹಳ ಥ್ಯಾಂಕ್ಸ್ ನನ್ನ ಬಾಲ್ಯವನ್ನು ವರ್ಣರಂಜಿತಗೊಳಿಸಿದ್ದಕ್ಕೆ. ಅವರ ಸಿನಿಮಾಗಳನ್ನು ನೋಡಿ ನಾನು ಬೆಳೆದೆ. ನಾನು ಇಷ್ಟು ಚೆನ್ನಾಗಿ ಮಾತನಾಡೋಕೆ ನೀವು ಸಹ ಸ್ಪೂರ್ತಿ. ಅಪ್ಪು ಬಾಸ್ ಎಲ್ಲೇ ಇರಿ, ಹೇಗೆ ಇರಿ ನಗು ನಗುತ್ತಾ ಇರಿ. ಮತ್ತೆ ನಮಗಾಗಿ ಹುಟ್ಟಿಬನ್ನಿ. ಅಪ್ಪು ಅವರು ಹೋದಮೇಲೆ ಶಿವರಾಜ್ ಕುಮಾರ್ ಅವರು ಆದ ಮೇಲೆ ನಮ್ಮ ಯುವರಾಜ್ ಕುಮಾರ್. ಅವರ ಸಿನಿಮಾ ಬಿಡುಗಡೆ ಆಗಲಿದೆ. ನಾನು ಮಾತ್ರ ಅಲ್ಲ ಅಪ್ಪು ಅಭಿಮಾನಿಗಳು ಎಷ್ಟು ಜನ ಇದ್ದಾರೋ ಅವರೆಲ್ಲ ಅವರಿಗೆ ಬೆಂಬಲವಾಗಿ ಇರುತ್ತಾರೆ. ಯುವರಾಜ್ ಅವರೇ ನಮ್ಮ ಮುಂದಿನ ಪವರ್ ಸ್ಟಾರ್. ಅಪ್ಪು ಫ್ಯಾನ್ಸ್ ಎಲ್ಲ ಯುವರಾಜ್ಗೆ ಬೆಂಬಲ ನೀಡುತ್ತಾರೆ. ಅವರು ದೊಡ್ಡ ಮಟ್ಟದಲ್ಲಿ ಬೆಳೆಯಬೇಕು, ರಾಜ್ ವಂಶ ಯಾವತ್ತೂ ನಿಲ್ಲಬಾರದು. ಆದರೆ ಪುನೀತ್ ಅವರನ್ನು ಯಾರೂ ರೀಪ್ಲೇಸ್ ಮಾಡಲು ಸಾಧ್ಯವಿಲ್ಲ'' ಎಂದು ಯುವರಾಜ್ ಮೇಲಿನ ಅಭಿಮಾನ ವ್ಯಕ್ತಪಡಿಸಿದ್ದಾರೆ.
''ಅಪ್ಪು ಇಲ್ಲ ಎಂಬ ಸುದ್ದಿ ಕೇಳಿದಾಗ ನನಗೆ ಏನೋ ಆಗಿಬಿಟ್ಟಿತ್ತು, ಮನೆಯಲ್ಲಿ ಕಿರುಚಾಡಿ ಬಿಟ್ಟಿದ್ದೆ. ಅಪ್ಪ ನನ್ನನ್ನು ಹಿಡಿದು ಸಮಾಧಾನ ಮಾಡಿದರು. ಅಪ್ಪು ಅವರ ಅಂತಿಮ ದರ್ಶನವನ್ನು ಹತ್ತಿರದಿಂದ ಪಡೆದೆ. ಅಷ್ಟು ಜನರ ಮಧ್ಯೆ ಅವರ ಪಾರ್ಥಿವ ಶರೀರವನ್ನು ಮುಟ್ಟಿ ನಾನು ಆಶೀರ್ವಾದ ಪಡೆದೆ. ಈಗ 'ರಾಜಕುಮಾರ' ಸಿನಿಮಾ ಬಿಡುಗಡೆ ಮಾಡಿರುವಂತೆ ಅವರ ಎಲ್ಲ ಸಿನಿಮಾ ಬಿಡುಗಡೆ ಮಾಡಬೇಕು. ಆಗಲೂ ನಾವು ಹೀಗೆಯೇ ಬಂದು ಸಿನಿಮಾ ನೋಡುತ್ತೀವಿ. ನಾನು ಸಾಯುವ ವರೆಗೆ ಅಪ್ಪು ಅವರ ಅಭಿಮಾನಿಗಳೇ'' ಎಂದು ಭಾವುಕರಾಗಿದ್ದಾರೆ ಪ್ರಜ್ಞಾ.


Click it and Unblock the Notifications











