ತಿರುಪತಿಯಲ್ಲಿ ಕನ್ನಡ, ಪುನೀತ್ ಭಾವಚಿತ್ರ ತೆರವು: ಬೆಂಗಳೂರಿನ TTDಗೆ ಅಪ್ಪು ಫ್ಯಾನ್ಸ್ ಮುತ್ತಿಗೆ
ಕೆಲವು ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ತಿರುಪತಿಯ ವಿಡಿಯೋವೊಂದು ಹರಿದಾಡುತ್ತಿತ್ತು. ಕರ್ನಾಟಕದಿಂದ ತೆರಳಿದ ಕಾರೊಂದರ ಹಿಂದೆ ಕರ್ನಾಟಕದ ಬಾವುಟ ಹಾಗೂ ಪುನೀತ್ ರಾಜ್ಕುಮಾರ್ ಫೋಟೊವನ್ನು ಕಿತ್ತುಹಾಕಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕರ್ನಾಟಕದಲ್ಲಿ ಕನ್ನಡ ಪರ ಸಂಘಟನೆಗಳು ಹಾಗೂ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಕಿಡಿಕಾರಿದ್ದರು.
Recommended Video

ಅಪ್ಪು ಫೋಟೊ ಹಾಗೂ ಕನ್ನಡದ ಬಾವುಟ ತೆರವುಗೊಳಿಸಿದ ಟಿಟಿಡಿ ನಡೆಯ ವಿರುದ್ಧ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಕಿಡಿಕಾರಿದ್ದರು. ಇನ್ನೊಂದು ಕಡೆ ಕನ್ನಡ ಪರ ಸಂಘಟನೆಗಳು ಕೂಡ ಕಿಡಿಕಾರಿದ್ದು, ಬೆಂಗಳೂರಿನ ಟಿಟಿಡಿ ದೇವಸ್ಥಾನದ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ದೇವಸ್ಥಾನದ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.

ಅಪ್ಪು ಫೋಟೊ ತೆಗೆದಿದ್ದಕ್ಕೆ ಆಕ್ರೋಶ
ಕಾರಿನ ಮೇಲಿದ್ದ ಅಪ್ಪು ಫೋಟೊ ಹಾಗೂ ಕನ್ನಡ ಬಾವುಟವನ್ನು ತೆರವುಗೊಳಿಸುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶಗಳು ಎದ್ದಿತ್ತು. ತಿರುಪತಿಯ ಆಡಳಿತ ಮಂಡಳಿ ವಿರುದ್ಧ ಅಪ್ಪು ಅಭಿಮಾನಿಗಳು ಹಾಗೂ ಕನ್ನಡ ಹೋರಾಟಗಾರರು ಆಕ್ರೋಶ ಹೊರ ಹಾಕಿದ್ದು, ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ತಿರುಪತಿ ತಿರುಮಲ ದೇವಸ್ಥಾನದ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಫೋಟೊವನ್ನು ಹಿಡಿದು ಬೆಂಗಳೂರಿನ ಟಿಟಿಡಿಯ ಮುಂದೆ ಧಿಕ್ಕಾರ ಕೂಗಿದ್ದಾರೆ. ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ಗೆ ಅವಮಾನ ಮಾಡಿದ್ದು, ಇದಕ್ಕೆ ಆಡಳಿತ ವರ್ಗ ಉತ್ತರ ನಡಬೇಕು ಎಂದು ಅಭಿಮಾನಿಗಳು ಪಟ್ಟು ಹಿಡಿದ್ದಾರೆ.

ಟಿಟಿಡಿಗೆ ಒಂದು ವಾರ ಗಡುವು
ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಟಿಟಿಡಿ ಮುಖ್ಯಸ್ಥೆಗೆ ಎಚ್ಚರಿಕೆ ಪತ್ರವನ್ನು ನೀಡಿದ್ದು, ಒಂದು ವಾರಗಳ ಗಡುವನ್ನು ನೀಡಿದ್ದಾರೆ. "ಒಂದು ವಾರದೊಳಗೆ ನಮಗೆ ಈ ಪ್ರಕರಣದ ಬಗ್ಗೆ ಉತ್ತರ ಕೊಡಬೇಕು. ಒಂದು ವಾರ ಬಿಟ್ಟು ಮತ್ತೆ ಬರುತ್ತೇವೆ. ಆಗಲೂ ಒಂದು ವೇಳೆ ಉತ್ತರ ನೀಡದೇ ಹೋದರೆ, ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತೇವೆ. ಅಷ್ಟರಲ್ಲಿ ನಮಗೆ ಉತ್ತರ ನೀಡಬೇಕು ಎಂದು ಎಚ್ಚರಿಕೆ ಪತ್ರ ಕೊಟ್ಟಿದ್ದೇವೆ." ಎಂದು ಪುನೀತ್ ಅಭಿಮಾನಿ ಮನು ತಿಳಿಸಿದ್ದಾರೆ.

ತೆಲುಗು ನಟರು ಪ್ರತಿಕ್ರಿಯೆ ನೀಡಬೇಕು
ತಿರುಪತಿಯಲ್ಲಿ ಕನ್ನಡದ ಬಾವುಟ ಹಾಗೂ ಅಪ್ಪು ಫೋಟೊವನ್ನು ತೆರವುಗೊಳಿಸಿದ ಬಗ್ಗೆ ಸಿ ಎಂ ಬಸವರಾಜ ಬೊಮ್ಮಾಯಿ ಹಾಗೂ ತೆಲುಗು ಚಿತ್ರರಂಗದ ನಟರು ಪ್ರತಿಕ್ರಿಯೆ ನೀಡಬೇಕು. ಕರ್ನಾಟಕದಲ್ಲಿ ತೆಲುಗು ಸಿನಿಮಾಗಳು ಕೋಟಿ ಕೋಟಿ ಹಣವನ್ನು ಲೂಟಿ ಮಾಡುತ್ತಿದೆ. ಉತ್ತಮ ವ್ಯಾಪಾರ ಮಾಡುತ್ತಿವೆ. ಇಂತಹದ್ರಲ್ಲಿ ಆಂಧ್ರದಲ್ಲಿ ಕನ್ನಡದ ನಟನಿಗೆ ಅವಮಾನ ಆದಾಗ, ಅವರು ಪ್ರತಿಕ್ರಿಯೆ ನೀಡಬೇಕು. ಇದರೊಂದಿಗೆ ನಮ್ಮ ಸಿ ಎಂ ಕೂಡ ತಿರುಪತಿಯಿಂದ ಕಾರಣ ತೆಗೆದುಕೊಳ್ಳಬೇಕು" ಎಂದು ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಸೇವಾ ಟ್ರಸ್ಟ್ನ ಮನು ತಿಳಿಸಿದ್ದಾರೆ.
TTDಯಿಂದ ಉತ್ತರ ಬೇಕು
ಕನ್ನಡ ಬಾವುಟಕ್ಕೆ ಹಾಗೂ ಅಪ್ಪುಗೆ ಅವಮಾನ ಮಾಡಿದ್ದಕ್ಕೆ ಸಂಕ್ಷಿಪ್ತ ಉತ್ತರ ನೀಡಬೇಕೆಂದು ಅಪ್ಪು ಅಭಿಮಾನಿಗಳು ಹಾಗೂ ಕನ್ನಡದ ಹೋರಾಟಗಾರರು ಮನವಿ ಪತ್ರ ಸಲ್ಲಿಸಿದ್ದಾರೆ. ಟಿಟಿಡಿ ಮುಖ್ಯಸ್ಥೆಗೆ ಅಪ್ಪು ಅಭಿಮಾನಿಗಳು ಎಚ್ಚರಿಕೆ ಪತ್ರವನ್ನು ನೀಡಿದ್ದು, ಯಾವ ರೀತಿ ಪ್ರತಿಕ್ರಿಯೆ ನೀಡುತ್ತೆ ಎಂದು ಅಭಿಮಾನಿಗಳು ಕಾದು ನೋಡುತ್ತಿದ್ದಾರೆ.


Click it and Unblock the Notifications











