'ಕ್ರಾಂತಿ' ಸಿನಿಮಾ ಬೆಂಬಲಿಸಿದ ಅಪ್ಪು ಅಭಿಮಾನಿಗಳು! ಭೇಷ್ ಎಂದ ನೆಟ್ಟಿಗರು
ದರ್ಶನ್ ಹೇಳಿಕೆ ಆ ನಂತರ ನಡೆದ ಚಪ್ಪಲಿ ಎಸೆತ ಪ್ರಕರಣದ ಬಳಿಕ ಅಪ್ಪು ಅಭಿಮಾನಿಗಳು ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಯುದ್ಧವೇ ಆರಂಭವಾಗಿ ಅದು ಸಾಮಾಜಿಕ ಜಾಲತಾಣ ದಾಟಿ ರಸ್ತೆಗೂ ಬಂದಿತ್ತು.
ದರ್ಶನ್ ಹಾಗೂ ಅಪ್ಪು ಅಭಿಮಾನಿಗಳ ನಡುವೆ ವೈಷಮ್ಯ ಇನ್ನೂ ಬೂದಿ ಮುಚ್ಚಿದ ಕೆಂಡದಂತೆ ಜಾರಿಯಲ್ಲಿರುವಾಗ ಗೋಕಾಕ್ನ ಅಪ್ಪು ಅಭಿಮಾನಿಗಳು ಮಾಡಿರುವ ಕಾರ್ಯ ಸಿನಿಮಾ ಪ್ರೇಮಿಗಳ ಮನ ಗೆದ್ದಿದೆ.
ಗೋಕಾಕ್ನ ಅಪ್ಪು ಅಭಿಮಾನಿಗಳು, ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಶತದಿನೋತ್ಸವ ಆಚರಿಸಲೆಂದು ಶುಭ ಹಾರೈಸಿ ದೊಡ್ಡ ಫ್ಲೆಕ್ಸ್ ಅನ್ನು ಹಾಕಿದ್ದಾರೆ. ಫ್ಲೆಕ್ಸ್ನಲ್ಲಿ 'ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ 100 ದಿನ ಆಚರಿಸಲೆಂದು ಹಾರೈಕೆ' ಎಂದು ಬರೆದಿದ್ದಾರೆ. ಕನ್ನಡ ಪರ, ಕರ್ನಾಟಕದ ಪರ ಜಾಗೃತಿ ಮೂಡಿಸುವ ಪೋಸ್ಟ್ಗಳನ್ನು ಹಂಚಿಕೊಳ್ಳುವ 'ಬೆಳಗಾವಿ ರಾಯಣ್ಣ' ಫೇಸ್ಬುಕ್ ಪೇಜ್ನಲ್ಲಿ ಈ ಸುಂದರ ಚಿತ್ರವನ್ನು ಹಂಚಿಕೊಳ್ಳಲಾಗಿದೆ.

ಗೋಕಾಕಿನ ಅಪ್ಪು ಅಭಿಮಾನಿಗಳು ಹಾಕಿರುವ ಫ್ಲೆಕ್ಸ್ನಲ್ಲಿ ಪುನೀತ್ ರಾಜ್ಕುಮಾರ್, ಯುವರಾಜ್ ಕುಮಾರ್ ಚಿತ್ರಗಳ ಜೊತೆಗೆ ನಟ ದರ್ಶನ್ ಅವರ ಚಿತ್ರವನ್ನೂ ಹಾಕಲಾಗಿದೆ. ದೊಡ್ಮನೆಯ ಅಭಿಮಾನಿಗಳ ಸೌಹಾರ್ದಯುತ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಚಂದನವನದ ಸ್ಟಾರ್ ನಟರ ನಡುವೆ ಹಾಗೂ ಅವರ ಅಭಿಮಾನಿಗಳ ನಡುವೆ ಇದೇ ರೀತಿಯ ಒಗ್ಗಟ್ಟನ್ನು ಕರ್ನಾಟಕದ ಜನತೆ ನಿರೀಕ್ಷಿಸುತ್ತಾರೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದರ್ಶನ್ ಹಾಗೂ ಅಪ್ಪು ಅಭಿಮಾನಿಗಳ ನಡುವೆ ನಡೆದಿದ್ದ ವೈಷಮ್ಯಕ್ಕೆ ಅಂತ್ಯ ಹಾಡುವಲ್ಲಿ ಮೊದಲ ಹೆಜ್ಜೆ ಇಟ್ಟ ಅಪ್ಪು ಅಭಿಮಾನಿಗಳ ಕಾರ್ಯಕ್ಕೆ ಹಲವರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಪ್ಪು ಅಭಿಮಾನಿಗಳು ಆರಂಭಿಸಿರುವ ಈ ಸೌಹಾರ್ದಯುತ ಕಾರ್ಯವನ್ನು ದರ್ಶನ್ ಅಭಿಮಾನಿಗಳು ಸ್ವಾಗತಿಸುವ ಮೂಲಕ ವೈಷಮ್ಯಕ್ಕೆ ಅಂತ್ಯ ಹಾಡುವರೇ ಇಲ್ಲವೇ ನೋಡಬೇಕಿದೆ.


Click it and Unblock the Notifications











