ಮನೆ ನೋಡಿ ತುಂಬಾ ತಿಂಗಳಾಗಿತ್ತು, ಅಪ್ಪು ಸರ್ ಮನೆಗೆ ಕರೆಸಿ ಇಷ್ಟದ ಊಟ ಹಾಕಿಸಿದ್ರು: ರಾಜ್ ಬಿ ಶೆಟ್ಟಿ
ಪುನೀತ್ ರಾಜ್ಕುಮಾರ್ ಅವರ ಜತೆ ನೀವು ಕಳೆದ ಕ್ಷಣಗಳ ಬಗ್ಗೆ ಹೇಳಿ ಎಂದ್ರೆ ಚಂದನವನದ ಬಹುತೇಕ ಎಲ್ಲಾ ಕಲಾವಿದರೂ ಸಹ ತಾವು ಅಪ್ಪು ಅವರನ್ನು ಭೇಟಿ ಮಾಡಿದ್ದೆವು ಎಂದೇ ಉತ್ತರಿಸುತ್ತಾರೆ. ಅಷ್ಟರ ಮಟ್ಟಿಗೆ ಅಪ್ಪು ಚಿತ್ರರಂಗದ ಎಲ್ಲಾ ಕಲಾವಿದರ ಸ್ನೇಹದಿಂದ, ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದರು. ಹೀಗಾಗಿಯೇ ಅಪ್ಪು ನಿಧನ ಹೊಂದಿದಾಗ ಪ್ರತಿಯೊಬ್ಬರೂ ತೀವ್ರವಾಗಿ ಭಾವುಕರಾಗಿದ್ದರು.
ಇಂದಿಗೂ ಸಹ ಹಲವಾರು ಕಲಾವಿದರು ಸಂದರ್ಶನಗಳಲ್ಲಿ ಪುನೀತ್ ರಾಜ್ಕುಮಾರ್ ಕುರಿತು ಮಾತನಾಡದೇ ಸುಮ್ಮನಿರಲಾಗದಷ್ಟು ನೆನಪುಗಳನ್ನು ಅಪ್ಪು ಬಿಟ್ಟು ಹೋಗಿದ್ದಾರೆ. ಇನ್ನು ಚಿತ್ರರಂಗಕ್ಕೆ ಕಾಲಿಡುವ ಹೊಸ ಪ್ರತಿಭೆಗಳಿಗೆ ಸದಾ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದ ಪುನೀತ್ ರಾಜ್ಕುಮಾರ್ ಅವರು ಈಗ ಕನ್ನಡ ಚಿತ್ರರಂಗದಲ್ಲಿ ಸಖತ್ ಸದ್ದು ಮಾಡುತ್ತಿರುವ ರಾಜ್ ಬಿ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಅವರನ್ನೂ ಸಹ ತಮ್ಮ ಮನೆಗೆ ಕರೆಸಿ ಉಪಚರಿಸಿದ್ದರು.
ಈ ವಿಷಯವನ್ನೂ ಸ್ವತಃ ನಟರೇ ಬಿಚ್ಚಿಟ್ಟಿದ್ದು, ಸದ್ಯ ಪುನೀತ್ ರಾಜ್ಕುಮಾರ್ ಅವರ ಮುಂದಿನ ಸಿನಿಮಾ ಗಂಧದಗುಡಿ ಅಂಗವಾಗಿ ನಡೆಯುತ್ತಿರುವ ಅಪ್ಪು ಫುಡ್ ಫೆಸ್ಟಿವಲ್ 'ಫ್ಲೇವರ್ಸ್ ಆಫ್ ಗಂಧದಗುಡಿ' ಕಾರ್ಯಕ್ರಮದಲ್ಲಿ ರಾಜ್ ಬಿ ಶೆಟ್ಟಿ ಭಾಗವಹಿಸಿದ್ದಾರೆ. ಬೆಂಗಳೂರಿನ ರಾಜ್ ಬಿರಿಯಾನಿ ಎಂಬ ಹೊಟೇಲ್ನಲ್ಲಿ ಅಪ್ಪು ನೆಚ್ಚಿನ ಊಟ ಮಾಡಿ ಅಪ್ಪು ಅವರನ್ನು ಸಂಭ್ರಮಿಸಲು ಬಂದಿದ್ದ ರಾಜ್ ಬಿ ಶೆಟ್ಟಿ ಅಪ್ಪು ಫುಡ್ ಫೆಸ್ಟಿವಲ್ನ ಉದ್ದೇಶ ಹಾಗೂ ಅಪ್ಪು ಅವರ ಜತೆಗಿನ ತಮ್ಮ ಅಮೂಲ್ಯ ಕ್ಷಣವೊಂದರ ಬಗ್ಗೆ ಮಾತನಾಡಿದರು.

ಫುಡ್ ಎಂಜಾಯ್ ಮಾಡುವವ ಒಳ್ಳೆ ಮನುಷ್ಯ
ಅಪ್ಪು ಫುಡ್ ಫೆಸ್ಟಿವಲ್ ಕುರಿತು ಮಾಹಿತಿ ನೀಡಲು ಆರಂಭಿಸಿದ ರಾಜ್ ಬಿ ಶೆಟ್ಟಿ 'ಅಪ್ಪು ಸರ್ ತುಂಬಾ ಇಷ್ಟ ಪಡ್ತಿದ್ದ ವಿಷಯಗಳಲ್ಲಿ ಫುಡ್ ಒಂದು. ಒಬ್ಬ ವ್ಯಕ್ತಿ ಊಟವನ್ನು ಎಷ್ಟು ಎಂಜಾಯ್ ಮಾಡ್ತಾನೋ ಆತ ಅಷ್ಟು ಒಳ್ಳೆಯವನು ಅನ್ನೋದು ಗೊತ್ತಾಗುತ್ತೆ, ಯಾಕಂದ್ರೆ ದಿನ ನಿತ್ಯ ಸೇವಿಸೋ ವಸ್ತುವನ್ನು ಸಂಭ್ರಮಿಸೋರು ಮಾತ್ರ ಬದುಕನ್ನು ಸಂಭ್ರಮಿಸೋಕೆ ಸಾಧ್ಯ. ಹೀಗಾಗಿ ಅವರ ಹೆಸರಲ್ಲಿ ಕರ್ನಾಟಕದ ಬೇರೆ ಬೇರೆ ಹೊಟೇಲ್ಗಳಲ್ಲಿ ಅವರು ಇಷ್ಟ ಪಡುತ್ತಿದ್ದ ತಿನಿಸುಗಳನ್ನು ಬರುವಂತ ಗ್ರಾಹಕರಿಗೆ ಕೊಡ್ತಾರೆ. ಈ ಮೂಲಕ ಅವರು ಇಷ್ಟ ಪಡುತ್ತಿದ್ದ ತಿನಿಸುಗಳನ್ನು ಸಂಭ್ರಮಿಸುವ ಕೆಲಸ ನಡೆಯಲಿದೆ' ಎಂದು ತಿಳಿಸಿದರು.

ಅಪ್ಪು ಸರ್ ಮನೆಗೆ ಕರೆಸಿ ಊಟ ಹಾಕಿದ್ರು
ಇನ್ನು ಇದೇ ಸಂದರ್ಭದಲ್ಲಿ ಪುನೀತ್ ರಾಜ್ಕುಮಾರ್ ತಮ್ಮನ್ನು ಮನೆಗೆ ಆಹ್ವಾನಿಸಿದ್ದ ಸಂದರ್ಭವನ್ನೂ ಸಹ ರಾಜ್ ಬಿ ಶೆಟ್ಟಿ ನೆನೆದರು. 'ಅಪ್ಪು ಸರ್ ಮನೆಗೆ ಕರೆದಾಗ, ನಾನು ಮಂಗಳೂರಿನವನು ಅನ್ನೋದನ್ನ ನೆನಪು ಮಾಡಿಕೊಂಡು ಹತ್ತಿರದ ಹೊಟೇಲ್ನಿಂದ ಒಳ್ಳೊಳ್ಳೆ ಮೀನುಗಳನ್ನು ತರಿಸಿದ್ರು. ಯಾಕಂದ್ರೆ ನಾನು ಮನೆಗೆ ಹೋಗಿ ತುಂಬಾ ದಿನಗಳಾಗಿತ್ತು. ಒಬ್ಬ ವ್ಯಕ್ತಿ ಮನೆಗೆ ಹೋಗದೇ ಇದ್ದಾಗ ಆತ ತನ್ನ ನೆಲದ ತಿನಿಸುಗಳನ್ನು ಎಷ್ಟು ಮಿಸ್ ಮಾಡಿಕೊಳ್ತಾನೆ ಹಾಗೂ ಆ ಫುಡ್ ಆತನ ಮನಸ್ಸಿಗೆ ಎಷ್ಟು ಹತ್ತಿರ ಎಂಬುದನ್ನು ಅವರು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ರು. ಹೀಗಾಗಿ ಅವರನ್ನು ಹಾಗೂ ಅವರ ನೆಚ್ಚಿನ ತಿನಿಸುಗಳನ್ನು ನಾವು ಇಂದು ಸಂಭ್ರಮಿಸುತ್ತಿದ್ದೇವೆ ಮತ್ತು ಇದು ನಾವು ಅವರಿಗೆ ಕೊಡುವ ಗೌರವ' ಎಂದು ರಾಜ್ ಬಿ ಶೆಟ್ಟಿ ತಿಳಿಸಿದರು.

ಅಪ್ಪುಗೆ ಊಟವೆಂದರೆ ಬಲು ಇಷ್ಟ
ಇನ್ನು ಪುನೀತ್ ರಾಜ್ಕುಮಾರ್ ಅವರಿಗೆ ಊಟವೆಂದರೆ ಬಲು ಇಷ್ಟ. ಅದರಲ್ಲೂ ನಾನ್ವೆಜ್ ಎಂದರೆ ಪಂಚಪ್ರಾಣ ಎಂಬುದನ್ನು ಅಪ್ಪು ಹಲವಾರು ಬಾರಿ ಹೇಳಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ನಟನೆ ಮಾಡಬೇಕೆಂದರೆ ತನ್ನ ನೆಚ್ಚಿನ ತಿನಿಸುಗಳನ್ನು ತರಿಸಲೇಬೇಕಿತ್ತು ಎಂದೂ ಸಹ ಅಪ್ಪು ಬಿಚ್ಚಿಟ್ಟಿದ್ದರು. ಇನ್ನು ಪುನೀತ್ ರಾಜ್ಕುಮಾರ್ ಐಶಾರಾಮಿ ಹೊಟೇಲ್ ತಿಂಡಿಗಳ ಪ್ರೇಮಿಯಲ್ಲ, ಹಳ್ಳಿ ಹೊಟೇಲ್ಗಳಲ್ಲೂ ಹಾಗೂ ನೆಲದ ಮೇಲೂ ಕುಳಿತು ಊಟ ಸೇವನೆ ಮಾಡುತ್ತಿದ್ದಂತಹ ಅಪ್ಪಟ ಊಟ ಪ್ರೇಮಿ.


Click it and Unblock the Notifications











