Don't Miss!
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುನೀತ್ ಅಭಿನಯದ 'ಗಂಧದಗುಡಿ': 'ನೀರಿನಂತೆ ಸರಳವಾದ ಜೀವ'
'ರೀ ಅಮೋಘ್, ಹಾವು ಅಂದ್ರೆ ನನಗೆ ತುಂಬಾ ಭಯ ಕಣ್ರೀ.. ಎರಡ್ಮೂರು ಶೂಟಿಂಗ್ ಬಾಕಿಯಿದೆ. ಬೆಂಗಳೂರಿಗೆ ಸೇಫ್ ಆಗಿ ವಾಪಸ್ ಹೋಗ್ತೀವಲ್ಲಾ.. ಹೆಂಡತಿ, ಮಕ್ಕಳು ಕಾಯುತ್ತಾ ಇರುತ್ತಾರೆ' ಎನ್ನುವ ಡೈಲಾಗ್ ಪುನೀತ್ ಆಡಿದಾಗ ಅದೇನೋ ಮನಸ್ಸಿಗೆ ನೋವು..
ಒಂದೂವರೆ ಗಂಟೆಯ ಸಿನಿಮಾ ಅಥವಾ ಡಾಕ್ಯುಮೆಂಟರಿ ಚಿತ್ರದಲ್ಲಿ ವಿವಿಧತೆಯಲ್ಲಿ ವೈವಿಧ್ಯತೆ ಎನ್ನುವ ಹಾಗೇ, ನಿರ್ದೇಶಕ ಅಮೋಘವರ್ಷ ರಾಜ್ಯದ ಹಲವು ಇದೂವರೆಗೆ ಅಷ್ಟಾಗಿ ಮುನ್ನಲೆಗೆ ಬಾರದ ಅರಣ್ಯ, ಜಲಚರ, ನದಿ, ಸಮುದ್ರ, ಆಚಾರ ವಿಚಾರದ ಬಗೆಗೆ ಒಂದು ಸುಂದರ ಪ್ರವಾಸವನ್ನು ಕಟ್ಟಿ ಕೊಟ್ಟಿದ್ದಾರೆ.
ಅಪ್ಪುಗೆ ಬೆಂಗಳೂರು ತಂಡಗಳ ನಮನ; ಸೂರ್ಯನೊಬ್ಬ ಚಂದ್ರನೊಬ್ಬ ರಾಜನೂ ಒಬ್ಬ ಎಂದ ಆರ್ಸಿಬಿ
ಸರಿಯಾಗಿ ಒಂದು ವರ್ಷದ ಹಿಂದೆ (ಅಕ್ಟೋಬರ್ 29) ಪುನೀತ್ ರಾಜಕುಮಾರ್ ನಮ್ಮನ್ನು ಭೌತಿಕವಾಗಿ ಅಗಲಿದ ದಿನ. ಆ ದಿನ, ಅಯ್ಯೋ ದೇವರೇ.. ಎಂದು ಕರ್ನಾಟಕದಲ್ಲಿ ಕಣ್ಣೀರು ಹಾಕದ ಮನೆಯಿಲ್ಲ. ಅವರ ನೆನಪಿಗಾಗಿ ಅವರು ಇಷ್ಟ ಪಡುವ ಪ್ರಕೃತಿಯ ಬಗ್ಗೆ ಒಂದು ಸುಂದರವಾದ ಅರ್ಪಣೆಯನ್ನು ಚಿತ್ರತಂಡ ಕನ್ನಡಿಗರ ಮುಂದೆ ಇಟ್ಟಿದೆ.
ಅಶ್ವಿನಿ ಪುನೀತ್ ಅವರ ಪೀಠಿಕೆಯೊಂದಿಗೆ ಆರಂಭವಾಗುವ 'ಗಂಧದಗುಡಿ' ಸಿನಿಮಾ ಎನ್ನುವ ಒಂದು ಸುಂದರ ಅನುಭವ ನೀಡುವ ಪ್ರವಾಸ, ಎಲ್ಲೂ ಬಾಯಿ ಆಕಳಿಸಿದಂತೆ ಸಾಗುತ್ತದೆ. ಮಲೆನಾಡು, ಕರಾವಳಿ, ಬಯಲುಸೀಮೆ ಸೇರಿದಂತೆ ರಾಜ್ಯದ ಹಲವು ಭಾಗಗಳ ಸುಂದರ ಚಿತ್ರಣವನ್ನು ನಿರ್ದೇಶಕರು ತೆರೆಯ ಮೇಲೆ ತಂದಿದ್ದಾರೆ.
ಚಾಮರಾಜ ನಗರ, ಸತ್ಯಮಂಗಲ, ಬಿಳಿಗಿರಿರಂಗನ ಅರಣ್ಯ ಪ್ರದೇಶ ಸೇರಿದಂತೆ ಡಾ.ರಾಜ್ ಅವರ ಹುಟ್ಟೂರು ಚಾಮರಾಜನಗರದ ಗಾಜನೂರಿನ ಮನೆಯ ಭಾಗ ಮತ್ತವರ ಅವರು ಕಳೆದ ದಿನದ ಬಗ್ಗೆ ತಮ್ಮ ಅನುಭವವನ್ನು ಪುನೀತ್ ಸುಂದರವಾಗಿ ತಮ್ಮ ಮಾತಿನ ಮೂಲಕ ಕಟ್ಟಿಕೊಟ್ಟಿದ್ದಾರೆ.
'ಮನುಷ್ಯರಾಗಿರಲಿ, ಪ್ರಾಣಿಯಾಗಿರಲಿ ಫಿಮೇಲ್ ಬೇಕೆಂದರೆ ಡ್ಯಾನ್ಸ್ ಮಾಡಲೇ ಬೇಕು' ಎನ್ನುವ ಕಚಗುಳಿ ಇಡುವ ಡೈಲಾಗ್ ಅಲ್ಲಲ್ಲಿ ಇವೆ. ಕಾಡಿನೊಳಗೆ ನಡೆಯುತ್ತಿರಬೇಕಾದರೆ, ಪುನೀತ್ ಮುಖದಲ್ಲಿ ಕಾಣುವ ಭಯವನ್ನೂ ಸುಂದರವಾಗಿ ಸೆರೆ ಹಿಡಿಯಲಾಗಿದೆ.
ಅರಣ್ಯ ಇಲಾಖೆಯ ಸಿಬ್ಬಂದಿಗಳ ಕೆಲಸದ ವೈಖರಿ, ಮದವೇರಿದ ಆನೆಯನ್ನು ಪಳಗಿಸುವ ರೀತಿ, ಕಾಳಿಂಗ ಸರ್ಪವನ್ನು ಸೆರೆ ಹಿಡಿಯುವುದು ಹೇಗೆ, ಇದುವರೆಗೆ ನೋಡದ ತುಂಗಭದ್ರಾ ನದಿ ಭಾಗದ ಸುಂದರ ಚಿತ್ರಣ, ಕಾಳಿ ನದಿಯ ಮೂಲ, ಸ್ಕೂಬಾ ಡೈವಿಂಗ್, ಸಮುದ್ರದೊಳಗಿನ ಜಲಚರಗಳನ್ನು ಸುಂದರವಾಗಿ ತೆರೆಯ ಮುಂದಿಡಲಾಗಿದೆ.
ಚಿತ್ರದಲ್ಲಿ ನಿರ್ದೇಶಕರು ಹೇಳುವಂತೆ ಪ್ರಾಣಿಪಕ್ಷಿಗಳ ಚಲನವಲನವನ್ನು ಸೆರೆ ಹಿಡಿಯಲು ದಿನಗಟ್ಟಲೇ ಕಾಯುತ್ತಿರಬೇಕು. ಹಾಗಾಗಿ, ತೊಂಬತ್ತೆಂಟು ನಿಮಿಷದ ಸಿನಿಮಾವನ್ನು ಪರದೆಯ ಮೇಲೆ ತರಲು ವರ್ಷಗಳೇ ಸಂದಿವೆ ಮತ್ತು ಅದಕ್ಕೆ ನ್ಯಾಯವನ್ನು ಚಿತ್ರತಂಡ ನೀಡಿದೆ.
ಚಿತ್ರದ ಪ್ಲಸ್ ಪಾಯಿಂಟ್ ಎಂದರೆ ಅದ್ಭುತ ಎನ್ನಬಹುದಾದ ಪ್ರತೀಕ್ ಶೆಟ್ಟಿಯವರ ಸಿನಿಮಾಟೋಗ್ರಾಫಿ ಮತ್ತು ಹಿನ್ನಲೆ ಸಂಗೀತ ನೀಡಿದ ಅಜನೀಶ್ ಲೋಕನಾಥ್. ರಾಜ್ಯದ ಒಂದೊಂದು ಭಾಗದ ಪ್ರಾಕೃತಿಕ ಸೌಂದರ್ಯ, ಅಲ್ಲಿನ ಸಂಸ್ಕೃತಿ, ಇದಾದ ನಂತರ ಪ್ರತೀ ಒಂದು ಊರಿನ ಪ್ರವಾಸದ ನಂತರ ಪುನೀತ್ ನೀಡುವ ಸಂದೇಶ ಎಲ್ಲರಿಗೂ ಪಾಠವಾಗಬಹುದು.
ಪುನೀತ್ ಅವರು ನಟಿಸಿ, ಖುದ್ದಾಗಿ ವಾಯ್ಸ್ ಓವರ್ ನೀಡಿದ ಕೊನೆಯ ಸಿನಿಮಾ ಎನ್ನುವುದು ಒಂದು ಕಡೆಯಾದರೆ, ಪ್ರವಾಸವನ್ನು ಆಸ್ವಾದಿಸುವವರಿಗೂ, ಅರಣ್ಯದ ಬಗ್ಗೆ ಆಸಕ್ತಿ ಇರುವವರೆಗೂ ಇದೊಂದು ಒಳ್ಳೆಯ ಚಾಯ್ಸ್ ಆಗಬಹುದು. 'ನೀರಿನಂತೇ ಸರಳವಾದ ಜೀವ, ಹೀರೋ ಹೇಗಿರಬೇಕೆಂದು ಈಗ ಗೊತ್ತಾಯಿತು'ಎಂದು ನಿರ್ದೇಶಕರು ಪುನೀತ್ ಬಗ್ಗೆ ಕೊನೆಯಲ್ಲಿ ಹೇಳಿದಾಗ, ಮನಸ್ಸು ಭಾರ.. ಇನ್ನೂ ಅಪ್ಪುವನ್ನು ನೋಡುತ್ತಿರೋಣ ಎನ್ನುವ ತವಕ.. ಇನ್ಮುಂದೆ ಅವರ ಸಿನಿಮಾ ಇಲ್ಲವಲ್ಲ ಎನ್ನುವ ನೋವು..