ಸಂಕಷ್ಟದಲ್ಲಿ 'ಯುವರತ್ನ': ಸಿಎಂ ಭೇಟಿಯಾಗಿ ಮನವಿ ಮಾಡಿದ ಪುನೀತ್ ರಾಜ್ಕುಮಾರ್
ಚಿತ್ರಮಂದಿರಗಳ ಮೇಲೆ ವಿಧಿಸಲಾಗಿರುವ ನಿರ್ಬಂಧದಿಂದ ಎರಡು ದಿನದ ಹಿಂದಷ್ಟೆ ಬಿಡಗಡೆ ಆಗಿರುವ ಪುನೀತ್ ರಾಜ್ಕುಮಾರ್ ಅಭಿನಯದ 'ಯುವರತ್ನ' ಸಿನಿಮಾ ತೀವ್ರ ಇಕ್ಕಟ್ಟಿಗೆ ಸಿಲುಕಿದೆ. ಗುರುವಾರ 'ಯುವರತ್ನ' ಬಿಡುಗಡೆ ಆಗಿತ್ತು, ಶುಕ್ರವಾರ ಸರ್ಕಾರವು ಚಿತ್ರಮಂದಿರದ ಮೇಲೆ ನಿರ್ಬಂಧ ಹೇರಿತು.
ಸರ್ಕಾರದ ಹೊಸ ಆದೇಶದ ಬಗ್ಗೆ ಪುನೀತ್ ರಾಜ್ಕುಮಾರ್ ಅವರು ಅಸಮಾಧಾನ ಹೊರಹಾಕಿದ್ದರು. ಇದೀಗ ಪುನೀತ್ ರಾಜ್ಕುಮಾರ್ ಅವರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಚಿತ್ರಮಂದಿರಗಳು ಪುನಃ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವಂತೆ ಆದೇಶ ಹೊರಡಿಸುವಂತೆ ಮನವಿ ಮಾಡಿದ್ದಾರೆ.
ಪುನೀತ್ ರಾಜ್ಕುಮಾರ್, ಯುವರತ್ನ ಸಿನಿಮಾದ ನಿರ್ದೇಶಕ ಸಂತೋಶ್ ಆನಂದ್ ರಾಮ್, ನಿರ್ಮಾಪಕ ವಿಜಯ್ ಕಿರಗಂದೂರ್, ಹೊಂಬಾಳೆ ಫಿಲಮ್ಸ್ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಅವರುಗಳು ಒಟ್ಟಾಗಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಆಗಿದ್ದಾರೆ. ಈ ಸಮಯದಲ್ಲಿ ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ, ಉಪಮುಖ್ಯಮಂತ್ರಿ ಲಕ್ಷ್ಮಣ್ ಸವಧಿ ಸಹ ಇದ್ದರು.

ನಿನ್ನೆ ಸರ್ಕಾರದ ಆದೇಶ ಹೊರಬಿದ್ದಾಗ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದ ಪುನೀತ್ ರಾಜ್ಕುಮಾರ್, 'ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರುವುದಿಲ್ಲ ಎಂದು ಸಿಎಂ ಮಾಡಿದ್ದ ಟ್ವೀಟ್ ಅನ್ನು ಆಧರಿಸಿಯೇ ನಾವು ಸಿನಿಮಾ ಬಿಡುಗಡೆ ಮಾಡಿದ್ದೆವು. ಸಿನಿಮಾ ಬಿಡುಗಡೆಗೆ ಮುನ್ನಾ ನಾವು ಸಿಎಂ ಅವರೊಟ್ಟಿಗೆ ಮಾತನಾಡಿರಲಿಲ್ಲ' ಎಂದಿದ್ದರು.
ಇದೀಗ ಸಿನಿಮಾಕ್ಕೆ ಸಮಸ್ಯೆ ಆಗಿರುವ ಹಿನ್ನೆಲೆಯಲ್ಲಿ ಪುನೀತ್ ಅವರು ಸಿಎಂ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಸಿಎಂ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ. ಆದರೆ ಯಾವಾಗ ಚಿತ್ರಮಂದಿರಗಳು ಪುನರ್ ಪ್ರಾರಂಭ ಆಗುತ್ತವೆ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ.
Recommended Video
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ಅವರು ಸಹ ಇಂದು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಆದೇಶ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ. 'ಆದೇಶವನ್ನು ಕೆಲವೇ ದಿನಗಳಲ್ಲಿ ಪುನರ್ ಪರಿಶೀಲನೆ ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ' ಎಂದು ಜಯರಾಜ್ ಮಾಧ್ಯಮಗಳಿಗೆ ಹೇಳಿದ್ದಾರೆ.


Click it and Unblock the Notifications











