ಸದಾಶಿವನಗರದ ಮನೆಯ ತೋಟದಲ್ಲಿ ಟೆಂಟ್ ಹಾಕಿ ಮಲಗಿದ್ದ ಪುನೀತ್: ಕಾರಣ ಈಗ ರಿವೀಲ್!
ಕನ್ನಡ ಚಿತ್ರರಂಗದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ 'ಗಂಧದ ಗುಡಿ' ರಿಲೀಸ್ ಆಗಿದೆ. ಕೊನೆಯ ಬಾರಿ ಕರ್ನಾಟಕ ರತ್ನನನ್ನು ಕಣ್ತುಂಬಿಕೊಂಡು ಅಭಿಮಾನಿಗಳ ಕಣ್ಣುಗಳು ಒದ್ದೆಯಾಗಿವೆ. 'ಗಂಧದ ಗುಡಿ' ಮೂಲಕ ಅಪ್ಪು ಏನು ಹೇಳುವುದಕ್ಕೆ ಹೊರಟಿದ್ದರು ಅನ್ನೋದು ರಿವೀಲ್ ಆಗಿದೆ.
'ಗಂಧದ ಗುಡಿ' ಕನ್ನಡ ಚಿತ್ರರಂಗದ ಮಟ್ಟಿಗೆ ವಿಶೇಷ ಸಿನಿಮಾ. ಯಾಕೆಂದರೆ, ಸೂಪರ್ಸ್ಟಾರ್ ಒಬ್ಬರು ಇಂತಹದ್ದೊಂದು ಪ್ರಯತ್ನಕ್ಕೆ ಮುಂದಾಗಿರಲಿಲ್ಲ. ಕರ್ನಾಟಕದ ಪ್ರಕೃತಿ ಸೌಂದರ್ಯವನ್ನು ತೆರೆಮೇಲೆ ತೋರಿಸುವ ಅಪ್ಪು ಆಸೆಯೀಗ ಈಡೇರಿದೆ.
'ಗಂಧದ ಗುಡಿ' ಸಿನಿಮಾ ಅಪ್ಪುವಿನ ಒಂದೊಂದೇ ಆಸೆಯನ್ನು ಹೊರ ಹಾಕುತ್ತಿದೆ. ಮನೆಯ ಗಾರ್ಡನ್ನಲ್ಲಿ ಟೆಂಟ್ ಹಾಕಿ ಮಲಗಿದ್ದೇಕೆ ಅನ್ನೋದನ್ನು ಸ್ವತ: ಪುನೀತ್ ರಾಜ್ಕುಮಾರ್ ಅವರೇ ರಿವೀಲ್ ಮಾಡಿದ್ದಾರೆ. ಅಷ್ಟಕ್ಕೂ ಸಿನಿಮಾದಲ್ಲಿ ಅಪ್ಪು ಹೇಳಿದ ಟೆಂಟ್ ಕಥೆಯೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಪುನೀತ್ ಹೇಳಿದ ಟೆಂಟ್ ಕಥೆ
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ರದ್ದು ಮಗುವಿನಂತಹ ಮನಸ್ಸು. ಕಣ್ತುಂದೆ ಕಾಣುವ ಪ್ರತಿಯೊಂದು ಸಂಗತಿಯನ್ನು ಅಚ್ಚರಿಯಿಂದಲೇ ನೋಡುತ್ತಿದ್ದರು. ಹಾಗೇ ಕಾಡು ಮೇಡುಗಳನ್ನು ಸುತ್ತಬೇಕು. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ತೆರೆಮೇಲೆ ತಂದ ಪ್ರತಿಯೊಬ್ಬರಿಗೂ ತೋರಿಸಬೇಕು ಅನ್ನೋ ಆಸೆ. ಸಾಹಸ ವ್ಯಕ್ತಿತ್ವದ ಪುನೀತ್ ಕಾಡು ಇಷ್ಟವಿದ್ದರೂ ಕೆಲವು ವಿಚಾರಕ್ಕೆ ಭಯವಿತ್ತು. ಅದಕ್ಕೆ ಕಾಡಿನಲ್ಲಿ ಟೆಂಟ್ ಹಾಕಿ ಮಲಗಬೇಕು ಅಂತ ಆಸೆ ಇದ್ದರೂ, ಸಾಧ್ಯ ಆಗಿರಲಿಲ್ಲ.

ಮನೆ ಮುಂದೆ ಟೆಂಟ್ ಹಾಕಿದ್ದ ಅಪ್ಪು
ಸೂಪರ್ಸ್ಟಾರ್ ಪಟ್ಟಕ್ಕೆ ಏರಿದ ಬಳಿಕ ಹಾಗೆಲ್ಲಾ ಮುಕ್ತವಾಗಿ ಓಡಾಡೋಕೆ ಆಗಲ್ಲ. ಎಲ್ಲೇ ಹೋದರೂ ಅಭಿಮಾನಿಗಳು ಅವರನ್ನು ಮುತ್ತಿಕೊಳ್ಳುತ್ತಾರೆ. ಹೀಗಾಗಿ ತಾರೆಯರು ಪ್ರೈವಸಿಗಾಗಿ ಕಾಡು-ಮೇಡುಗಳಲ್ಲಿ ಸುತ್ತಾಡಲು ಇಷ್ಟ ಪಡುತ್ತಾರೆ. ಅಪ್ಪುಗೂ ಹೀಗೆ ಸುತ್ತಬೇಕು ಅನ್ನೋ ಆಸೆಯಿತ್ತು. ಆದರೆ, ಕಾಡು ಪ್ರಾಣಿಗಳ ಭಯವಿತ್ತು. ಹೀಗಾಗಿ ಟೆಂಟ್ ಹಾಕಿ ಮಲಗಬೇಕು ಅನ್ನೋ ಆಸೆಯನ್ನು ಮುಂದೂಡುತ್ತಲೇ ಇದ್ದರು. ಅದಕ್ಕೆ ಮಕ್ಕಳಿಗೆ ಅಂತ ತಂದಿದ್ದ ಟೆಂಟ್ ಅನ್ನು ಮನೆ ಮುಂದಿನ ಗಾರ್ಡನ್ನಲ್ಲಿ ಹಾಕೊಂಡು ಮಲಗಿದ್ದರು. ಇದನ್ನು 'ಗಂಧದ ಗುಡಿ'ಯಲ್ಲಿ ಸ್ವತ: ಅಪ್ಪುನೇ ಹೇಳುತ್ತಾರೆ.

ಯುವ ಬಿಚ್ಚಿಟ್ಟ ಟೆಂಟ್ ಕಹಾನಿ ಏನು?
ಪುನೀತ್ ರಾಜ್ಕುಮಾರ್ ಮನೆ ಮುಂದೆನೇ ಟೆಂಟ್ ಹಾಕಿದ್ದರು ಅನ್ನೋದ ಯುವರಾಜ್ಕುಮಾರ್ ಮಾಧ್ಯಮಗಳಿಗೆ ಸ್ವಾರಸ್ಯಕರವಾಗಿ ವಿವರಿಸಿದ್ದಾರೆ. "ಅವರು ಟೆಂಟ್ ಅನ್ನು ಮಕ್ಕಳಿಗೆ ಅಂತ ತಂದಿದ್ದು. ಅದೇ ಟೆಂಟ್ ಹಾಕಿದ್ರೆ ಅನುಭವ ಹೇಗಿರುತ್ತೆ ಅಂತ ಮನೆಯ ಮುಂದಿನ ಗಾರ್ಡನ್ನಲ್ಲಿಯೇ ಹಾಕಿದ್ದರು. ನಾವು ಬಹಳಷ್ಟು ಬಾರಿ ಅವರೊಂದಿಗೆ ಟೆಂಟ್ ಹಾಕಿ ಮಲಗಿದ್ದೆವು." ಎಂದು ಯುವರಾಜ್ಕುಮಾರ್ ಹೇಳಿದ್ದಾರೆ.

ಅಪ್ಪು ಅಡ್ವೆಂಚರ್ ಮ್ಯಾನ್!
"ಅವರು ಸಿಕ್ಕಾಪಟ್ಟೆ ಅಡ್ವೆಂಚರ್. ಅವರು ಎಲ್ಲೇ ಹೋದರೂ, ಏನಾದರೂ ಒಂದು ಅಡ್ವೆಂಚರ್ ಮಾಡಿ ಬರೋರು. ಈ ಸಿನಿಮಾದಲ್ಲೂ ನೋಡುತ್ತೀರ. ಅವರು ನದಿಯಲ್ಲಿ ಈಜುತ್ತಾರೆ. ಯಾವುದೇ ಊರಿಗೆ ಹೋದರೆ ಆ ಹೊಳೆಯಲ್ಲಿ ಇಳಿಯುತ್ತಾರೆ. ಸ್ಕೈ ಡೈವಿಂಗ್ ಮಾಡಿದ್ದಾರೆ. ಸ್ಕೂಬಾ ಡೈವಿಂಗ್ ಮಾಡಿದ್ದಾರೆ. ಎಲ್ಲಾ ತರಹದ ಗಾಡಿಯನ್ನು ಓಡಿಸಿದ್ದಾರೆ. ಅಡ್ವೆಂಚರ್ ಅಂದರೆ, ಅವರಿಗೆ ಸಿಕ್ಕಾಪಟ್ಟೆ ಪ್ರಾಣ." ಅಂತ ಅಪ್ಪು ಅಡ್ವೆಂಚರ್ ಬಗ್ಗೆ ಯುವರಾಜ್ಕುಮಾರ್ ರಿವೀಲ್ ಮಾಡಿದ್ದಾರೆ.


Click it and Unblock the Notifications











