ವಿರೋಧಿಗಳ ನಡುವೆ ಕೂತು ಕನ್ನಡ ಸಿನಿಮಾಗಳ ಪರ ದನಿ ಎತ್ತಿದ ಪುನೀತ್ ರಾಜ್ಕುಮಾರ್
ಅವಕಾಶ ಸಿಕ್ಕಾಗೆಲ್ಲಾ ಮತ್ತು ಅವಶ್ಯಕತೆ ಬಿದ್ದಾಗೆಲ್ಲಾ ಕನ್ನಡ ಭಾಷೆ ಮತ್ತು ಕನ್ನಡ ಸಿನಿಮಾಗಳ ಪರವಾಗಿ ದನಿ ಎತ್ತುವ ಪುನೀತ್ ರಾಜ್ ಕುಮಾರ್ ಮಾಡುತ್ತಲೇ ಬಂದಿದ್ದಾರೆ. ಇಂದು ಸಹ ಅವರು ಮತ್ತೆ ಕನ್ನಡ ಸಿನಿಮಾಗಳ ಪರವಾಗಿ ದನಿ ಎತ್ತಿದ್ದಾರೆ.
ಪಿವಿಆರ್ ಗಳು ಕನ್ನಡ ಸಿನಿಮಾಗಳೊಂದಿಗೆ ತೋರುತ್ತಿರುವ ತಾರತಮ್ಯ ಬಹುತೇಕರಿಗೆ ಗೊತ್ತಿರುವಂತಹುದೆ. ಕ್ನನಡ ಸಿನಿಮಾಗಳಿಗೆ ಹೆಚ್ಚಿನ ಸ್ಕ್ರೀನ್ ಕೊಡದಿರುವುದು. ಲಾಭಾಂಶ ಹಂಚಿಕೆಯಲ್ಲಿ ತಾರತಮ್ಯ, ರೇಟಿಂಗ್ಸ್ ಕೊಡದೆ ಇರುವುದು ಹೀಗೆ ಹಲವು ವಿಧಗಳಲ್ಲಿ ಕನ್ನಡ ಸಿನಿಮಾಗಳಿಗೆ ಪಿವಿಆರ್ ಅನ್ಯಾಯ ಮಾಡುತ್ತಿದೆಯೆಂಬುದು ಹಳೆಯ ದೂರು.
ಇದರ ವಿರುದ್ಧ ಪುನೀತ್ ರಾಜ್ ಕುಮಾರ್ ಇಂದು ದನಿ ಎತ್ತಿದ್ದಾರೆ. ಪುನೀತ್ ರಾಜ್ಕುಮಾರ್ ಅವರು ಇಂದು ಪಿವಿಆರ್ ನ ನೂರನೇ ಸ್ಕ್ರೀನ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದೇ ಕಾರ್ಯಕ್ರಮದಲ್ಲಿ ಕನ್ನಡ ಸಿನಿಮಾ ಬಗ್ಗೆ ದನಿ ಎತ್ತಿದ್ದಾರೆ ಅವರು.

ಕನ್ನಡ ಸಿನಿಮಾಗಳ ಬಗ್ಗೆ ಪುನೀತ್ ದನಿ
ಕೆ.ಆರ್.ಪುರಂ ನ ಒರಾಯನ್ ಅಪ್ ಟೌನ್ ಮಾಲ್ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಿವಿಆರ್ನ ಉನ್ನತ ಅಧಿಕಾರಿಗಳು ಇದ್ದರು. ಇದೇ ಕಾರ್ಯಕ್ರಮದಲ್ಲಿ ಪಿವಿಆರ್ ಗಳು ಕನ್ನಡ ಸಿನಿಮಾಗಳ ಬಗ್ಗೆ ತೋರುತ್ತಿರುವ ಅಸಡ್ಡೆ ಬಗ್ಗೆ ಉಲ್ಲೇಖಿಸಿದ ಪುನೀತ್ ರಾಜ್ಕುಮಾರ್, 'ಪಿವಿಆರ್ ಗಳು ಕನ್ನಡ ಸಿನಿಮಾಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು' ಎಂದು ನೇರವಾಗಿ ಹೇಳಿದರು.

ಪಿವಿಆರ್ ನಲ್ಲಿ ಕೂತು ಸಿಂಗಲ್ ಥಿಯೇಟರ್ ಹೊಗಳಿದ ಪುನೀತ್
ಅಷ್ಟೆ ಅಲ್ಲದೆ, ಪಿವಿಆರ್ಗಳು, ಚಿತ್ರಮಂದಿರ ಸಂಸ್ಕೃತಿಯನ್ನು, ಸಿಂಗಲ್ ಥಿಯೇಟರ್ ಗಳನ್ನು ಕೊಲ್ಲುತ್ತಿರುವ ಬಗ್ಗೆ ಪರೋಕ್ಷವಾಗಿ ಮಾತನಾಡಿದ ಪುನೀತ್ ರಾಜ್ಕುಮಾರ್, 'ನನಗೆ ವೈಯಕ್ತಿಕವಾಗಿ ಈಗಲೂ ಚಿತ್ರಮಂದಿರ (ಸಿಂಗಲ್ ಥಿಯೇಟರ್) ನಲ್ಲಿ ಜನರ ಜೊತೆ ಕುಳಿತು ಚಿತ್ರ ನೋಡುವುದೇ ಖುಷಿ ಕೊಡುತ್ತದೆ, ಅದೊಂದು ಅದ್ಭುತ ಅನುಭವ' ಎಂದು ಮಲ್ಟಿಫ್ಲೆಕ್ಸ್ ಮಾಲೀಕರ ಮುಂದೆಯೇ ಸಿಂಗಲ್ ಥಿಯೇಟರ್ಗಳನ್ನು ಹೊಗಳಿದರು.

ಪಿವಿಆರ್ ನಲ್ಲಿ ಮೊದಲ ಚಿತ್ರ ವೀಕ್ಷಿಸಿದ ನೆನಪು
ಪಿವಿಆರ್ ನಲ್ಲಿ ಮೊದಲ ಚಿತ್ರ ವೀಕ್ಷಿಸಿದ್ದನ್ನು ನೆನಪಿಸಿಕೊಂಡಿರುವ ಪುನೀತ್ ರಾಜ್ಕುಮಾರ್, ''ಅಪ್ಪಾಜಿ, ರಜನೀಕಾಂತ್ ಸರ್, ಶಿವಣ್ಣ ಅವರೊಂದಿಗೆ ಜೋಗಿ ಚಿತ್ರವನ್ನು ಮೊದಲ ಬಾರಿಗೆ ಪಿವಿಆರ್ ನಲ್ಲಿ ನೋಡಿದ್ದೆ'' ಎಂದು ಹೇಳಿದ್ದಾರೆ.

ಕಾರ್ಪೊರೇಟ್ ಕುಳಗಳ ನಡುವೆ ಸಾಮಾನ್ಯನ ಮಾತು
ಕಾರ್ಪೊರೇಟ್ ಕುಳಗಳ ನಡುವೆ ಕೂತು ಸಾಮಾನ್ಯ ಜನ ನೋಡುವ ಸಿಂಗಲ್ ಥಿಯೇಟರ್ಗಳನ್ನು ಹೊಗಳಿದ್ದು ಮತ್ತು ಪಿವಿಆರ್ಗಳಲ್ಲಿ ಕನ್ನಡ ಸಿನಿಮಾಕ್ಕೆ ಆದ್ಯತೆ ಕೊಡಬೇಕು ಎಂದು ಪುನೀತ್ ಅವರು ಹೇಳಿದ್ದು, ಬಹುಜನರ ಮೆಚ್ಚುಗೆಗೆ ಪಾತ್ರವಾಗಲಿದೆ.


Click it and Unblock the Notifications











