ಪುನೀತ್ ಜೊತೆ ಗೌತಮ್ ಮೆನನ್ ಮಾಡ್ತಾರಾ ಮೋಡಿ.?
'ವಿನ್ನೈತಾಂಡಿ ವರುವಾಯ'ದಂತಹ ಅದ್ಭುತ ಪ್ರೇಮಕಥೆಯುಳ್ಳ ಸಿನಿಮಾಗಳನ್ನು ಕೊಟ್ಟ ತಮಿಳಿನ ಖ್ಯಾತ ನಿರ್ದೇಶಕ ಗೌತಮ್ ವಾಸುದೇವ ಮೆನನ್ ಅವರು ನಾಲ್ಕು ಭಾಷೆಯಲ್ಲಿ ಸ್ಟಾರ್ ನಟರನ್ನು ಹಾಕಿಕೊಂಡು ಸಿನಿಮಾ ಮಾಡುತ್ತಾರೆ ಅಂತ ಇದೇ ಫಿಲ್ಮಿಬೀಟಲ್ಲಿ ನಾವು ನಿಮಗೆ ಸುಮಾರು 6 ತಿಂಗಳುಗಳ ಹಿಂದೆ ತಿಳಿಸಿದ್ವಿ.
ಇದೀಗ ಮತ್ತೆ ಆ ಸಿನಿಮಾ ಸುದ್ದಿ ಚಾಲ್ತಿಯಲ್ಲಿದ್ದು, ತಮಿಳು ನಿರ್ದೇಶಕ ಗೌತಮ್ ಮೆನನ್ ಅವರು ಕನ್ನಡದಿಂದ ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡುತ್ತಿರೋದು ಪಕ್ಕಾ ಆಗಿದೆ.[ಪುನೀತ್-ಗೌತಮ್ ಮೆನನ್ ಕಾಂಬಿನೇಷನ್ ನಲ್ಲಿ ಹೊಸ ಮ್ಯಾಜಿಕ್!]
ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಹೀಗೆ ನಾಲ್ಕು ಭಾಷೆಯಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದ್ದು, ಎಲ್ಲಾ ಭಾಷೆಗಳಿಂದ ಸ್ಟಾರ್ ನಟರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಜೊತೆಗೆ ಇಬ್ಬರು ನಾಯಕಿಯರನ್ನು ಕೂಡ ಆಯ್ಕೆ ಮಾಡಲಾಗಿದ್ದು, ಎಲ್ಲಾ ಭಾಷೆಗಳಲ್ಲೂ ಅದೇ ನಾಯಕಿಯರು ಮುಂದುವರಿಯಲಿದ್ದಾರೆ.
ಚಿತ್ರಕ್ಕೆ ಎ.ಆರ್ ರೆಹಮಾನ್ ಅವರು ಸಂಗೀತ ನಿರ್ದೇಶನ ಮಾಡಲಿದ್ದು, ಈ ನಾಲ್ಕು ನಾಯಕರು ಎಲ್ಲಾ ಭಾಷೆಗಳಲ್ಲಿ ಗೆಸ್ಟ್ ರೋಲ್ ಮಾಡಲಿದ್ದಾರೆ. ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

ಸ್ಯಾಂಡಲ್ ವುಡ್ ನಿಂದ ಪವರ್ ಸ್ಟಾರ್
ನಿರ್ದೇಶಕ ಗೌತಮ್ ಮೆನನ್ ಅವರ ನಿರ್ಮಾಣ ಮತ್ತು ನಿರ್ದೇಶನದ ಚಿತ್ರಕ್ಕೆ ಕನ್ನಡದಿಂದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಸುದ್ದಿ ಪಕ್ಕಾ ಆಗಿದ್ದು, ಸದ್ಯದಲ್ಲೇ ಪುನೀತ್ ಅವರು ಗೌತಮ್ ಮೆನನ್ ಅವರ ಜೊತೆ ಸೇರಿಕೊಳ್ಳಲಿದ್ದಾರೆ. ಇವರಿಗೆ ನಾಯಕಿಯರಾಗಿ ದಕ್ಷಿಣ ಭಾರತದ ಖ್ಯಾತ ನಟಿಯರಿಬ್ಬರು ಸಾಥ್ ಕೊಡಲಿದ್ದಾರೆ.

ಅನುಷ್ಕಾ ಶೆಟ್ಟಿ/ ತಮನ್ನಾ ಭಾಟಿಯಾ
ದಕ್ಷಿಣ ಭಾರತದ ಖ್ಯಾತ ನಟಿಯರಾದ ಅನುಷ್ಕಾ ಶೆಟ್ಟಿ ಮತ್ತು ತಮನ್ನಾ ಭಾಟಿಯಾ ಅವರು ಎಲ್ಲಾ ಭಾಷೆಗಳಲ್ಲಿ ನಾಯಕಿಯರಾಗಿ ಸಾಥ್ ನೀಡಲಿದ್ದಾರೆ. ಈ ಮೂಲಕ ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಈ ನಟಿಮಣಿಯರಿಬ್ಬರು ಬಲಗಾಲಿಟ್ಟು ಒಳಬರುತ್ತಿದ್ದಾರೆ ಅಂತಾಯ್ತು.

ತಮಿಳಿನಲ್ಲಿ ಜಯಂ ರವಿ
'ಥನಿ ಒರುವನ್' ಖ್ಯಾತಿಯ ಸುಂದರ ನಟ ಜಯಂ ರವಿ ಅವರು ತಮಿಳಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಈ ಮೊದಲು ನಟ ಸಿಂಬು (ಸಿಲಂಬರಸನ್) ಅವರು ಗೌತಮ್ ಮೆನನ್ ಜೊತೆ ಕೈ ಜೋಡಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಕೆಲವು ಬದಲಾವಣೆಗಳಿಂದ ಇದೀಗ ಈ ಅವಕಾಶ ಜಯಂ ರವಿ ಅವರ ಪಾಲಾಗಿದೆ.

ತೆಲುಗಿನಲ್ಲಿ ಸಾಯಿ ಧರ್ಮ ತೇಜಾ
ಮೊಟ್ಟ ಮೊದಲ ಬಾರಿಗೆ ಚಿರಂಜೀವಿ ಕುಟುಂಬದ ಕುಡಿ ನಟ ಸಾಯಿ ಧರ್ಮ ತೇಜ ಮತ್ತು ನಿರ್ದೇಶಕ ಗೌತಮ್ ಮೆನನ್ ಅವರು ಒಂದಾಗಿದ್ದಾರೆ. ತೆಲುಗಿನಲ್ಲಿ ಸಾಯಿ ಧರ್ಮ ತೇಜಾ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಈ ಮೊದಲು ಅಲ್ಲು ಅರ್ಜುನ್ ಅವರ ಜೊತೆ ಮಾತು-ಕತೆ ನಡೆದಿತ್ತು. ಇದೀಗ 'ಪಿಲ್ಲಾ ನುವ್ವುಲೇನಿ ಜೀವಿತಂ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಸಾಯಿ ಧರ್ಮ ತೇಜಾ ಅವರು ಲೀಡ್ ರೋಲ್ ನಲ್ಲಿ ಮಿಂಚಲಿದ್ದಾರೆ.

ಮಲಯಾಳಂ ನಲ್ಲಿ ಪೃಥ್ವಿರಾಜ್ ಗೆ ಬಂಪರ್ ಆಫರ್
ಈ ಮೊದಲು ನಟ ಫಹದ್ ಫಝಿಲ್ ಅವರ ಜೊತೆ ಚಿತ್ರದ ಬಗ್ಗೆ ಡೀಲ್ ನಡೆದಿತ್ತು. ಆದರೆ ಇದೀಗ ಗೌತಮ್ ಮೆನನ್ ಅವರ ಜೊತೆ ಕೈ ಜೋಡಿಸುವ ಅವಕಾಶ ಖ್ಯಾತ ನಟ ಪೃಥ್ವಿ ರಾಜ್ ಅವರ ಪಾಲಾಗಿದೆ. ಮಲಯಾಳಂನಲ್ಲಿ ಪೃಥ್ವಿರಾಜ್ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಏಕಕಾಲಕ್ಕೆ ತಯಾರಾಗುತ್ತಾ?
ಅಂದಹಾಗೆ ನಾಲ್ಕು ಭಾಷೆಗಳಲ್ಲಿ ಏಕಕಾಲಕ್ಕೆ ಈ ಸಿನಿಮಾ ಸೆಟ್ಟೇರಲಿದ್ದು, ಒಟ್ಟಿಗೆ ಶೂಟಿಂಗ್ ಆಗುತ್ತಾ ಅನ್ನೋದರ ಮಾಹಿತಿ ಇನ್ನೂ ಲಭ್ಯವಾಗದೇ ಇರುವ ಕಾರಣ ಸದ್ಯದ ಮಟ್ಟಿಗೆ ಏನೂ ಹೇಳಲಾಗುತ್ತಿಲ್ಲ. ಒಟ್ನಲ್ಲಿ ಬಿಗ್ ಬಜೆಟ್ ನ ಸಿನಿಮಾ ನಾಲ್ಕು ಭಾಷೆಗಳಲ್ಲಿ ತಯಾರಾಗುತ್ತಿದೆ ಅನ್ನೋದು ಖುಷಿಯ ವಿಚಾರ. ಸದ್ಯಕ್ಕೆ ಈ ಚಿತ್ರದ ಬಗ್ಗೆ ಸಿಕ್ಕಿರುವ ಮಾಹಿತಿ ಇಷ್ಟು. ಹೆಚ್ಚಿನ ಮಾಹಿತಿಗಾಗಿ ಪಿಲ್ಮಿಬೀಟ್ ಕನ್ನಡ ಓದ್ತಾಯಿರಿ.


Click it and Unblock the Notifications











