ಬ್ಯಾಂಕಾಕ್ ನಲ್ಲಿ ಎಮರ್ಜೆನ್ಸಿ: ಪುನೀತ್ ಮತ್ತು ಟೀಂ ಸೇಫ್
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಚಿತ್ರವೆಂದರೆ ಅದು ಚಿತ್ರದ ಶೂಟಿಂಗ್ ನಿಂದ ಹಿಡಿದು ಚಿತ್ರ ಬಿಡುಗಡೆ ತನಕ ಒಂದಲ್ಲಾ ಒಂದು ಕಾರಣಗಳಿಂದ ಸುದ್ದಿಯಲ್ಲಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಯಾಕೆಂದರೆ ಅದು ಪುನೀತ್ ಚಿತ್ರಕ್ಕಿರುವ ಬಾಕ್ಸಾಫೀಸ್ ಟ್ರೆಂಡ್.
ಸದ್ಯ ಪುನೀತ್ 'ನಿನ್ನಿಂದಲೇ' ಚಿತ್ರದ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದಾರೆ. ವಿದೇಶದಲ್ಲಿ ಚಿತ್ರೀಕರಣ ಕೂಡಾ ಭರದಿಂದ ಸಾಗುತ್ತಿದೆ. ಆದರೆ ವಿಧಿಯಿಲ್ಲದೇ ಶೂಟಿಂಗ್ ಎರಡು ದಿನ ನಿಲ್ಲಿಸಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಪುನೀತ್ ಅಭಿಮಾನಿಗಳು ಇದಕ್ಕಾಗಿ ಆತಂಕ ಪಡಬೇಕಾಗಿಲ್ಲ.
ಬ್ಯಾಂಕಾಕ್ ನಲ್ಲಿ 'ನಿನ್ನಿಂದಲೇ' ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಆದರೆ ಅಲ್ಲಿ ಉಂಟಾದ ರಾಜಕೀಯ ವೈಷಮ್ಯಗಳಿಂದ ಚಿತ್ರತಂಡಕ್ಕೆ ಶೂಟಿಂಗ್ ನಿಲ್ಲಿಸಲೇ ಬೇಕಾದ ಅನಿವಾರ್ಯತೆ ಉಂಟಾಗಿತ್ತು.
ಹಾಗಾಗಿ ಚಿತ್ರದ ಶೂಟಿಂಗ್ ಎರಡು ದಿನ ಸ್ಟಾಪ್ ಆಗಿತ್ತು. ಪುನೀತ್ ಮತ್ತು ನಿನ್ನಿಂದಲೇ ಚಿತ್ರತಂಡ ಸೇಫ್ ಆಗಿದ್ದಾರೆಂದು ಬ್ಯಾಂಕಾಕ್ ನಲ್ಲಿ ಚಿತ್ರದ coordinator ಬಾಬ್ಬಿ ತಿಳಿಸಿದ್ದಾರೆ.
ಬ್ಯಾಂಕಾಕ್ ನಲ್ಲಿ ಚಿತ್ರತಂಡಕ್ಕಾದ ತೊಂದರೆ ಏನು?

ಬ್ಯಾಂಕಾಕ್
ಥಾಯ್ ಲ್ಯಾಂಡ್ ದೇಶದ ಪ್ರಧಾನಿ ಯಿಂಗ್ಲಕ್ ಶಿನವಾತ್ರ ಸೋಮವಾರ (ನ 25) ದಂದು ರಾಜಧಾನಿ ಬ್ಯಾಂಕಾಕ್ ನಗರಕ್ಕೆ ಸೀಮಿತವಾಗುವಂತೆ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಸರಕಾರೀ ವಿರೋಧಿ ಹೋರಾಟಗಳು ಅಲ್ಲಿ ತಾರಕಕ್ಕೇರಿ ಹೋರಾಟಗಾರರು ಮತ್ತು ಪೊಲೀಸರ ನಡುವೆ ಘರ್ಷಣೆ ಸಂಭವಿಸಿದ್ದರಿಂದ ಪ್ರಧಾನಿ ಅಲ್ಲಿ ಸ್ಪೆಷಲ್ ಎಮರ್ಜೆನ್ಸಿ ಘೋಷಿಸಿದ್ದರು.

ಪ್ರತಿಭಟನೆ
ಪ್ರತಿಭಟನಾಕಾರರು ಅಲ್ಲಿ ಪ್ರಧಾನಿ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ಪ್ರಧಾನಿ ಅವರು ತಮ್ಮ ಸಹೋದರ ತಾಸ್ಕಿನ್ ಶಿನವಾತ್ರ ಅಣತಿಯಂತೆ ಆಡಳಿತ ನಡೆಸುತ್ತಿದ್ದಾರೆ. ಹಾಗಾಗಿ, ಕೂಡಲೇ ಅವರು ರಾಜೀನಾಮೆ ನೀಡಬೇಕೆಂದು ಭಾರೀ ಹೋರಾಟವನ್ನು ಪ್ರತಿಭಟನಾಕಾರರು ನಡೆಸುತ್ತಿದ್ದಾರೆ.

ನಿನ್ನಿಂದಲೇ
ಚಿತ್ರದ ಶೂಟಿಂಗ್ ಬ್ಯಾಂಕಾಕ್ ನಲ್ಲಿ ಭರದಿಂದ ಸಾಗುತ್ತಿರ ಬೇಕಾದರೆ ಸಾರ್ವಜನಿಕ ಸಭೆಗಳು, ಮೆರವಣಿಗೆಗಳು ವಿಪರೀತವಾಗಿದ್ದರಿಂದ ಚಿತ್ರೀಕರಣ ನಿಲ್ಲಿಸಲೇ ಬೇಕಾಯಿತು. ಎರಡನೇ ಹಂತದ ಚಿತ್ರೀಕರಣಕ್ಕಾಗಿ ಚಿತ್ರತಂಡ ಬ್ಯಾಂಕಾಕಿಗೆ ಹೋಗಿತ್ತು.

ಎಲ್ಲರೂ ಸೇಫ್
ಇಡೀ ಚಿತ್ರತಂಡ ಬ್ಯಾಂಕಾಕ್ ನಲ್ಲಿ ಸೇಫ್ ಆಗಿದೆ. ಇಲ್ಲಿನ ಪ್ರಧಾನಿ ಪದತ್ಯಾಗ ಮಾಡಬೇಕೆಂದು ಪ್ರತಿಭಟನೆ ನಡೆಯುತ್ತಿದೆ. ಆದರೆ ಯಾರೂ ಚಿಂತಿಸ ಬೇಕಾಗಿಲ್ಲ. ಚಿತ್ರೀಕರಣ ಬುಧವಾರದಿಂದ ಮತ್ತೆ ಆರಂಭವಾಗಿದೆ. ಇನ್ನೆರಡು ದಿನಗಳಲ್ಲಿ ಬ್ಯಾಂಕಾಕ್ ಸುತ್ತಮುತ್ತ ಚಿತ್ರೀಕರಣ ನಡೆಸಿ ಚಿತ್ರತಂಡ ಭಾರತಕ್ಕೆ ವಾಪಾಸ್ ಆಗಲಿದೆ, ಇಲ್ಲಿ ತಮಿಳು ಮತ್ತು ಬೆಂಗಾಲಿ ಭಾಷೆಯ ಚಿತ್ರೀಕರಣ ಕೂಡಾ ನಡೆಯುತ್ತಿದೆ ಎಂದು ಚಿತ್ರದ coordinator ಬಾಬ್ಬಿ ಸ್ಪಷ್ಟ ಪಡಿಸಿದ್ದಾರೆ.

ಅಮೆರಿಕಾ
ನಿನ್ನಿಂದಲೇ ಚಿತ್ರತಂಡ ಅಮೆರಿಕಾದಲ್ಲಿ ಮೊದಲ ಹಂತದ ಚಿತ್ರೀಕರಣ ಈಗಾಗಲೇ ಮುಗಿಸಿದೆ. ಬ್ಯಾಂಕಾಕ್ ನಲ್ಲಿ ಹಾಡಿನ ಚಿತ್ರೀಕರಣಕ್ಕಾಗಿ ಚಿತ್ರತಂಡ ಈಗ ಅಲ್ಲಿ ಬೀಡು ಬಿಟ್ಟಿದೆ. ಪುನೀತ್ ರಾಜಕುಮಾರ್, ಎರಿಕಾ ಫೆರ್ನಾಂಡಿಸ್, ಸೋನಿಯಾ ದೀಪ್ತಿ, ವಿನಾಯಕ್ ಜೋಶಿ, ಸಾದು ಕೋಕಿಲಾ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರವನ್ನು ಜಯಂತ್ ಪರಂಜೆ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಮಣಿಶರ್ಮಾ ಸಂಗೀತ ಸಂಯೋಜಿಸಿದ್ದಾರೆ.


Click it and Unblock the Notifications











