Puneetha Parva: ಗಂಧದ ಗುಡಿ ದೃಶ್ಯಗಳನ್ನು ಮೂರು ವರ್ಷದಿಂದ ನೋಡ್ತಾ ಇದ್ದೇನೆ ಎಂದ ರಕ್ಷಿತ್ ಶೆಟ್ಟಿ
ಇಂದು ( ಅಕ್ಟೋಬರ್ 21 ) ಅಪ್ಪು ಅಭಿಮಾನಿಗಳು ಹಲವಾರು ದಿನಗಳಿಂದ ಸಿದ್ಧತೆ ನಡೆಸಿಕೊಂಡು ಕಾಯುತ್ತಿದ್ದಂತಹ ದಿನ ಬಂದೇ ಬಿಟ್ಟಿದೆ. ತಮ್ಮ ನೆಚ್ಚಿನ ನಟ, ಆರಾಧ್ಯದೈವ ಪುನೀತ್ ರಾಜ್ ಕುಮಾರ್ ಅಭಿನಯದ ಅಂತಿಮ ಚಿತ್ರ ಗಂಧದಗುಡಿಯ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾವುಕತೆ ಮತ್ತು ಸಂತಸದಿಂದ ಭಾಗವಹಿಸಿದ್ದಾರೆ. ಈ ಗಂಧದ ಗುಡಿ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಪುನೀತ ಪರ್ವ ಎಂಬ ಹೆಸರನ್ನು ಇಡಲಾಗಿದ್ದು, ಸಾವಿರಾರು ಅಭಿಮಾನಿಗಳು ಬೆಂಗಳೂರಿನ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿವಿಧ ಚಿತ್ರರಂಗದ ಕಲಾವಿದರು ಹಾಗೂ ರಾಜಕೀಯ ವ್ಯಕ್ತಿಗಳು ವೇದಿಕೆಯನ್ನೇರಿ ನಟ ಪುನೀತ್ ರಾಜ್ ಕುಮಾರ್ ಅವರ ಜತೆಗಿನ ತಮ್ಮ ಒಡನಾಟ ಹಾಗೂ ಅವರ ಜತೆ ಕಳೆದ ಕ್ಷಣಗಳನ್ನು ಸ್ಮರಿಸಿದರು.
ಹೀಗೆ ಪುನೀತ ಪರ್ವ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಕ್ಷಿತ್ ಶೆಟ್ಟಿ ಕೂಡ ಅಪ್ಪು ಹಾಗೂ ಅಪ್ಪು ಅಭಿನಯದ ಮುಂದಿನ ಚಿತ್ರ ಗಂಧದಗುಡಿ ಕುರಿತಾಗಿ ಮಾತನಾಡಿದರು. ಅಪ್ಪು ಸರ್ ಅವರನ್ನು ಸುಮಾರು ಚಿತ್ರಗಳಲ್ಲಿ ನಾವು ಬೇರೆ ಬೇರೆ ಪಾತ್ರಗಳಲ್ಲಿ ನೋಡಿದ್ದೇವೆ, ಆದರೆ ಇದೇ ಮೊದಲ ಬಾರಿಗೆ ಅಪ್ಪು ಅವರನ್ನು ಅಪ್ಪು ಆಗಿಯೇ ಗಂಧದಗುಡಿ ಚಿತ್ರದಲ್ಲಿ ವೀಕ್ಷಿಸುವ ಅವಕಾಶ ಸಿಕ್ತಾ ಇದೆ ಎಂದರು ರಕ್ಷಿತ್ ಶೆಟ್ಟಿ.

ಇನ್ನು ಗಂಧದ ಗುಡಿ ಚಿತ್ರಕ್ಕೆ ಸಂಕಲನಕಾರರಾಗಿ ಕೆಲಸ ನಿರ್ವಹಿಸಿರುವ ಪ್ರತೀಕ್ ಶೆಟ್ಟಿ ಅವರು ಚಾರ್ಲಿ ಸಿನಿಮಾಗೂ ಕೂಡ ಸಂಕಲನಕಾರರಾಗಿ ಕೆಲಸ ನಿರ್ವಹಿಸುತ್ತಿದ್ದರಿಂದ ಗಂಧದಗುಡಿ ಚಿತ್ರದ ದೃಶ್ಯಗಳನ್ನು ನಾನು ಸುಮಾರು 3 ವರ್ಷಗಳಿಂದ ವೀಕ್ಷಿಸುತ್ತಾ ಬಂದಿದ್ದೇನೆ ಹಾಗೂ ಇದನ್ನು ನಾನು ಬೆಳ್ಳಿತೆರೆ ಮೇಲೆ ವೀಕ್ಷಿಸಲು ಕಾಯುತ್ತಿದ್ದೇನೆ, ಏಕೆಂದರೆ ದೊಡ್ಡ ಪರದೆ ಮೇಲೆ ಅಪ್ಪು ಅವರನ್ನು ಅಪ್ಪು ಅವರಾಗಿಯೇ ವೀಕ್ಷಿಸುವ ಅವಕಾಶ ಇದುವರೆಗೂ ಲಭಿಸಿರಲಿಲ್ಲ ಎಂದು ರಕ್ಷಿತ್ ಶೆಟ್ಟಿ ತಿಳಿಸಿದರು. ಹಾಗೂ ಇನ್ನೂ ಮುಂದುವರಿದು ಮಾತನಾಡಿದ ರಕ್ಷಿತ್ ಶೆಟ್ಟಿ ಈ ಚಿತ್ರ ಚಿತ್ರಮಂದಿರದಲ್ಲಿ ಒಂದೊಳ್ಳೆ ಅನುಭವವನ್ನು ನೀಡುವುದರಲ್ಲಿ ಎರಡು ಮಾತಿಲ್ಲ ಎಂದು ಗಂಧದ ಗುಡಿ ಚಿತ್ರದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.


Click it and Unblock the Notifications











