ಯೋಗರಾಜ್ ಭಟ್ 'ಗರಡಿ' ಸೇರಿದ ಡಿಂಪಲ್ ಕ್ವೀನ್ ರಚಿತಾ ರಾಮ್
ಈ ವರ್ಷದ ಕೊನೆಯಲ್ಲಿ ರಚಿತಾ ರಾಮ್ ಅದೃಷ್ಟ ಒಲಿದು ಬಂದಿದೆ. ಒಂದು ಕಡೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಸೆಟ್ಟೇರುತ್ತಿದೆ. ಇನ್ನೊಂದು ಕಡೆ ಸಿನಿಮಾಗಳು ರಿಲೀಸ್ ಆಗುತ್ತಿದೆ. ಹೀಗಾಗಿ ಡಿಸೆಂಬರ್ನಲ್ಲಿ ರಚಿತಾ ರಾಮ್ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಎಲ್ಲಕ್ಕಿಂತ ಹೆಚ್ಚಾಗಿ ಡಿಂಪಲ್ ಕ್ವೀನ್ ಅಭಿಮಾನಿಗಳು ಖುಷಿ ಪಡುವ ವಿಷಯವೊಂದಿದೆ. ಅದೇನಪ್ಪಾ ಅಂದ್ರೆ, ರಚಿತಾ ರಾಮ್ ಮತ್ತೊಂದು ಸಿನಿಮಾಗೆ ಸಹಿ ಹಾಕಿದ್ದಾರೆ.
ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ರಚಿತಾ ರಾಮ್ 'ಲವ್ ಯು ರಚ್ಚು' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಇನ್ನೊಂದು ನಾಲ್ಕೈದು ಸಿನಿಮಾ ಚಿತ್ರೀಕರಣದ ಹಂತದಲ್ಲಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಹೊಸ ಸಿನಿಮಾದ ಶೂಟಿಂಗ್ ನಡೀತಿದೆ. ಮತ್ತೊಂದ್ಕಡೆ ಯೋಗ್ ರಾಜ್ ಭಟ್ ನಿರ್ದೇಶಿಸುತ್ತಿರುವ ಹೊಸ ಚಿತ್ರಕ್ಕೂ ರಚಿತಾ ರಾಮ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಹಾಗಿದ್ದರೆ, ಆ ಸಿನಿಮಾ ಯಾವುದು? ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.

ಭಟ್ಟರ ಗರಡಿಯಲ್ಲಿ ರಚಿತಾ ರಾಮ್
ನವೆಂಬರ್ 14ರಂದು ಬಿಸಿ ಪಾಟೀಲ್ ನಿರ್ಮಿಸುತ್ತಿರುವ 'ಗರಡಿ' ಸಿನಿಮಾ ಸೆಟ್ಟೇರಿತ್ತು. ಸ್ವತ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದಾಳತ್ವದಲ್ಲಿ ಈ ಸಿನಿಮಾ ಆರಂಭಗೊಂಡಿತ್ತು. ಯೋಗರಾಜ್ ಭಟ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದರೆ, ಯಶಸ್ ಸೂರ್ಯ ಈ ಚಿತ್ರದ ಪ್ರಮುಖ ಪಾತ್ರಕ್ಕೆ ಆಯ್ಕೆ ಆಗಿದ್ದರು. ಈಗ ಇದೇ 'ಗರಡಿ' ತಂಡಕ್ಕೆ ಹೊಸದಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಸೇರಿಕೊಂಡಿದ್ದು, ಯಶಸ್ ಸೂರ್ಯನಿಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಜನವರಿಯಿಂದ ರಚಿತಾ ರಾಮ್ ಗರಡಿ ಅಖಾಡಕ್ಕೆ ಎಂಟ್ರಿ
ನಿರ್ಮಾಪಕ-ಸಚಿವ ಬಿಸಿ ಪಾಟೀಲ್ ನಿವಾಸದಲ್ಲಿ ಭಾನುವಾರ (ಡಿಸೆಂಬರ್ 06) ಸಿನಿಮಾ ಬಗ್ಗೆ ಚರ್ಚೆ ನಡೆಸಲಾಯಿತು. ಈ ವೇಳೆ ಬಿ ಸಿ ಪಾಟೀಲ್, ನಿರ್ದೇಶಕ ಯೋಗರಾಜ ಭಟ್ ಹಾಗೂ ನಾಯಕ ನಟ ಯಶಸ್ ಸೂರ್ಯ ಜೊತೆ ರಚಿತಾ ರಾಮ್ ಕೂಡ ಉಪಸ್ಥಿತರಿದ್ದರು. ಈ ವೇಳೆ ''ಗರಡಿ ಸಿನಿಮಾಗೆ ರಚಿತಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದು, ಜನವರಿ ತಿಂಗಳಿನಿಂದ 'ಗರಡಿ' ಸಿನಿಮಾದ ಚಿತ್ರೀಕರಣಕ್ಕೆ ಆಯ್ಕೆಯಾಗಲಿದ್ದಾರೆ'' ಎಂದು ಬಿಸಿ ಪಾಟೀಲ್ ಅನೌನ್ಸ್ ಮಾಡಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಬಹುತೇಕ ಶೂಟಿಂಗ್
'ಗರಡಿ' ಸಿನಿಮಾ ಟೈಟಲ್ ಡಿಮ್ಯಾಂಡ್ ಮಾಡುವಂತೆ ಉತ್ತರ ಕರ್ನಾಟಕದ ಕಡೆ ಇಡೀ ಚಿತ್ರತಂಡ ಪಯಣ ಬೆಳೆಸಲಿದೆ. ಬಾದಾಮಿ, ಐಹೊಳೆ, ಪಟ್ಟದಕಲ್ಲು ಕಡೆಗಳಲ್ಲಿ ಸಿನಿಮಾದ ಶೂಟಿಂಗ್ ನಡೆಯಲಿದೆ. ಜನವರಿಯಿಂದ ನಿರಂತರವಾಗಿ 'ಗರಡಿ' ಸಿನಿಮಾದ ಶೂಟಿಂಗ್ ನಡೆಯಲಿದೆ. ವಿಶೇಷ ಅಂದ್ರೆ, ಕೃಷಿ ಸಚಿವ ಹಾಗೂ 'ಗರಡಿ' ಸಿನಿಮಾದ ನಿರ್ಮಾಪಕ ಬಿಸಿ ಪಾಟೀಲ್ ಕೂಡ ಈ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಯೋಗರಾಜ್ ಭಟ್ ಮಾಸ್ ಟೈಟಲ್ ಹೊತ್ತು ಬಂದಿರುವುದು ಹಾಗೂ ರಚಿತಾ ರಾಮ್ ಈ ತಂಡ ಸೇರಿಕೊಂಡಿರುವುದು ಮತ್ತಷ್ಟು ಬಲ ಬಂದಂತಾಗಿದೆ.

'ಕ್ರಾಂತಿ' ಸಿನಿಮಾದಲ್ಲಿ ದರ್ಶನ್ ಬ್ಯುಸಿ
ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ಯ ದರ್ಶನ್ ನಟಿಸುತ್ತಿರುವ 'ಕ್ರಾಂತಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮ್ಯೂಸಿಕ್ ಡೈರೆಕ್ಟರ್ ಹರಿಕೃಷ್ಣ ನಿರ್ದೇಶಿಸುತ್ತಿರುವ 'ಕ್ರಾಂತಿ' ಚಿತ್ರದ ಚಿತ್ರೀಕರಣ ಈಗಾಗಲೇ ನಡೆಯುತ್ತಿದೆ. ಶೈಲಜಾ ನಾಗ್ ಹಾಗೂ ಬಿ ಸುರೇಶ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಹೀಗಾಗಿ ರಚಿತಾ ರಾಮ್ 'ಕ್ರಾಂತಿ' ಹಾಗೂ 'ಗರಡಿ' ಸಿನಿಮಾಗಳಲ್ಲಿ ಜೊತೆ ಜೊತೆಯಾಗಿ ನಟಿಸಲಿದ್ದಾರೆ.


Click it and Unblock the Notifications











