ಜಗ್ಗೇಶ್ ನಟನೆಯ 'ರಂಗನಾಯಕ'ನಿಗೆ ರಾಧಿಕಾ ಕುಮಾರಸ್ವಾಮಿ ನಾಯಕಿ?
ಸಾಕಷ್ಟು ಕುತೂಹಲ ಕೆರಳಿಸಿರುವ ನವರಸನಾಯಕ ಜಗ್ಗೇಶ್ ಮತ್ತು 'ಮಠ' ಗುರುಪ್ರಸಾದ್ ಜೋಡಿಯ ಮೂರನೇ ಸಿನಿಮಾ 'ರಂಗನಾಯಕ'ಕ್ಕೆ ಅದ್ಧೂರಿ ಚಾಲನೆ ನೀಡಿ ಐದು ತಿಂಗಳೇ ಕಳೆದಿದೆ. ಚಿತ್ರದ ಟೀಸರ್ ಬಿಡುಗಡೆಯ ಬಳಿಕ ಮತ್ತೆ ಸಿನಿಮಾದ ಸುದ್ದಿಯೇ ಇರಲಿಲ್ಲ. ಈ ನಡುವೆ ಮತ್ತೆ ಸುದ್ದಿಗೆ ಬಂದಿದ್ದ ಸಿನಿಮಾ, ಏಪ್ರಿಲ್ 2ರಿಂದ ಚಿತ್ರೀಕರಣ ಆರಂಭಿಸುವ ಮಾಹಿತಿ ನೀಡಿತ್ತು.
ಆದರೆ ಸದ್ಯದ ಪರಿಸ್ಥಿತಿಯಲ್ಲಿ 'ರಂಗನಾಯಕ'ನ ಶೂಟಿಂಗ್ ಆರಂಭವಾಗುವುದು ಕಷ್ಟ. ಎರಡು ಯಶಸ್ವಿ ಸಿನಿಮಾಗಳ ಬಳಿಕ ದೂರವಾಗಿದ್ದ ಈ ಜೋಡಿ ಮತ್ತೆ ಒಂದಾಗಿರುವುದು ಸಿನಿಮಾ ಅಭಿಮಾನಿಗಳಿಗೆ ಖುಷಿ ನೀಡಿದೆ. ಅದ್ಭುತ ನಗುವಿನ ಹಬ್ಬದ ನಿರೀಕ್ಷೆಯಲ್ಲಿರುವ ಸಿನಿಮಾ ರಸಿಕರು ಅದರ ಅನುಭವ ಪಡೆಯಲು ಇನ್ನೂ ಅನೇಕ ತಿಂಗಳು ಕಾಯುವುದು ಅನಿವಾರ್ಯ. 'ರಂಗನಾಯಕ'ನಿಗೆ ಒಬ್ಬ ನಾಯಕಿ ಇರಬೇಕಲ್ಲ? ಅದರ ಬಗ್ಗೆ ಈಗ ಚರ್ಚೆ ಆರಂಭವಾಗಿದೆ.

ರಾಧಿಕಾ ಕುಮಾರಸ್ವಾಮಿ ನಾಯಕಿ?
ಮೂಲಗಳ ಪ್ರಕಾರ 'ರಂಗನಾಯಕ' ಚಿತ್ರತಂಡವನ್ನು ರಾಧಿಕಾ ಕುಮಾರಸ್ವಾಮಿ ಸೇರಿಕೊಳ್ಳಲಿದ್ದಾರೆ. ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಲು ರಾಧಿಕಾ ಅವರನ್ನು ಸಂಪರ್ಕಿಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ರಚಿತಾ ರಾಮ್ ಹೆಸರೂ ಇದೆ
'ರಂಗನಾಯಕ'ನ ನಾಯಕಿಯ ಪಾತ್ರಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಮ್ ಹೆಸರೂ ಸಹ ಚಾಲ್ತಿಯಲ್ಲಿದೆ. ಚಿತ್ರದಲ್ಲಿ ಇಬ್ಬರು ನಾಯಕಿಯರು ಇರುತ್ತಾರಾ, ಅಥವಾ ಒಬ್ಬರೇ ನಾಯಕಿ ಇರುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ನಾಯಕಿಯರ ಆಯ್ಕೆಯ ವಿಚಾರದಲ್ಲಿ ಚರ್ಚೆ ನಡೆದಿದ್ದು, ರಾಧಿಕಾ ಅಥವಾ ರಚಿತಾ ರಾಮ್ ಅಲ್ಲದೆ, ಹೊಸಬರನ್ನು ಆಯ್ಕೆ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ.

ಭೈರಾದೇವಿಯಲ್ಲಿ ರಾಧಿಕಾ
ಇತ್ತ ರಾಧಿಕಾ ತಮ್ಮ ಮಹತ್ವಾಕಾಂಕ್ಷಿ ಸಿನಿಮಾ 'ಭೈರಾದೇವಿ'ಯ ಬಿಡುಗಡೆಗೆ ತಯಾರಿ ನಡೆಸಿದ್ದಾರೆ. ದುನಿಯಾ ವಿಜಯ್, ರಮೇಶ್ ಅರವಿಂದ್ ಕೂಡ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಶ್ರೀಜೈ ನಿರ್ದೇಶನದ ಈ ಚಿತ್ರವನ್ನು ಕನ್ನಡವಲ್ಲದೆ, ತಮಿಳು ಹಾಗೂ ತೆಲುಗಿನಲ್ಲಿಯೂ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ.

ತೋತಾಪುರಿಯಲ್ಲಿ ಬಿಜಿ
ಜಗ್ಗೇಶ್ ಮತ್ತು ನಿರ್ದೇಶಕ ವಿಜಯಪ್ರಸಾದ್ ಕಾಂಬಿನೇಷನ್ನ ಎರಡನೆಯ ಸಿನಿಮಾ 'ತೋತಾಪುರಿ' ಚಿತ್ರೀಕರಣ ಸಾಗಿದೆ. ಅದಿತಿ ಪ್ರಭುದೇವ, ಸುಮನ್ ರಂಗನಾಥ್ ಹಾಗೂ ಡಾಲಿ ಧನಂಜಯ 'ತೋತಾಪುರಿ'ಯಲ್ಲಿ ಅಭಿನಯಿಸಿದ್ದಾರೆ.

ಒಂದೇ ಬಾರಿಗೆ ಎರಡು ಭಾಗ
ಒಂದು ಸಿನಿಮಾ ಬಿಡುಗಡೆಯಾಗುವ ಮುನ್ನವೇ ಅದರ ಎರಡೂ ಭಾಗಗಳನ್ನು ಚಿತ್ರೀಕರಣ ಪೂರ್ಣಗೊಳಿಸುತ್ತಿರುವುದು ಈ ಚಿತ್ರದ ವಿಶೇಷ. ನಿಜ. 'ತೋತಾಪುರಿ' ಎರಡು ಭಾಗಗಳಲ್ಲಿ ಸಿದ್ಧವಾಗುತ್ತಿದೆ. ಚಿತ್ರರಂಗದಲ್ಲಿ ಇದೊಂದು ದಾಖಲೆಯೇ ಸರಿ. 'ತೊಟ್ಟು ಕೀಳ್ಬೇಕು' ಎನ್ನುವುದು ಮೊದಲ ಭಾಗದ ಕ್ಯಾಪ್ಷನ್ ಆದರೆ, 'ತೊಟ್ಟು ಕಿತ್ತಾಯ್ತು' ಎರಡನೆಯ ಭಾಗದ ಉಪ ಶೀರ್ಷಿಕೆಯಾಗಿದೆ.


Click it and Unblock the Notifications











