ರಾಧಿಕಾ ಪಂಡಿತ್ ಮೊಬೈಲ್ ಫೋನ್ ಹ್ಯಾಕರ್ ಬಂಧನ
ಜನಪ್ರಿಯ ನಟಿ ರಾಧಿಕಾ ಪಂಡಿತ್ ಅವರ ಮೊಬೈಲ್ ಫೋನ್ ಹ್ಯಾಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಒಬ್ಬನನ್ನು ಭಾನುವಾರ ಬಂಧಿಸಿದ್ದಾರೆ. ಕಾಲ್ ಸೆಂಟರ್ ಉದ್ಯೋಗಿ ಅಭಿಷೇಕ್ ಎಂಬ ಯುವಕ ರಾಧಿಕಾ ಪಂಡಿತ್ ಅವರ ಮೊಬೈಲ್ ಫೋನ್ ಹ್ಯಾಕ್ ಮಾಡಿದ್ದ ಎನ್ನಲಾಗಿದೆ
ಇತ್ತೀಚೆಗೆ ದಿಲ್ ವಾಲಾ' ಆಡಿಯೋ ಬಿಡುಗಡೆ ಸಮಾರಂಭದಲ್ಲಿ ತಮ್ಮ ಮೊಬೈಲ್ ಹ್ಯಾಕ್ ಆಗಿರುವ ಬಗ್ಗೆ ರಾಧಿಕಾ ಪಂಡಿತ್ ತಿಳಿಸಿದ್ದರು. ಕಳೆದ ಒಂದು ವಾರದಿಂದ ನನ್ನ ಮೊಬೈಲ್ ನನ್ನ ನಿಯಂತ್ರಣದಲ್ಲಿಲ್ಲ. ನನ್ನ ವೋಡಾಫೋನ್ ನಂಬರ್ ನಿಂದ ಅನೇಕ ನಟ,ನಟಿ, ಸಿನಿ ಮ್ಯಾಗಜೀನ್ ಸಂಸ್ಥೆಗೆ ಸಂದೇಶ ಹೋಗಿದೆ. ನಾನು ಕಳಿಸಿಲ್ಲ ಎಂದು ರಾಧಿಕಾ ದುಃಖ ತೋಡಿಕೊಂಡಿದ್ದರು.
ಲಭ್ಯ ಮಾಹಿತಿ ಪ್ರಕಾರ ನಟಿ ರಮ್ಯಾ ಹಾಗೂ ಹೆಸರಾಂತ ಸಿನಿಮಾ ಪತ್ರಿಕೆಗೆ ಹೋಗಿರುವ ಸಂದೇಶದಲ್ಲಿ ನನಗೆ ಹಣಕಾಸಿನ ತೊಂದರೆ ಇದೆ. ಆದಷ್ಟು ಬೇಗ ಇಂತಿಷ್ಟು ಹಣ ಕಳಿಸಿ ಎಂದು ಕಳಿಸಲಾಗಿತ್ತು.

ರಾಧಿಕಾ ಪಂಡಿತ್ ಅವರಿಗೆ ಮೊಬೈಲ್ ಫೋನ್ ಹ್ಯಾಕ್ ಆಗಿರುವ ವಿಷಯ ಸ್ವಲ್ಪ ತಡವಾಗಿ ಗೊತ್ತಿದೆ. ಆದರೆ, ನಂತರ ತಡಮಾಡದೆ ಪೊಲೀಸರ ಹೋಗಿದ್ದಾರೆ. ಸುಬ್ರಮಣ್ಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ಸ್ ಪೆಕ್ಟರ್ ಸೋಮೇಗೌಡ ನೇತೃತ್ವದ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.
ತನಿಕೆ ಕೈಗೊಂಡ ಸುಬ್ರಮಣ್ಯನಗರ ಠಾಣೆ ಪೊಲೀಸರು ಅಭಿಷೇಕ್ ಎಂಬ ಯುವಕನನ್ನು ಬಂಧಿಸಿದ್ದಾರೆ. ಆತ ಕೋಲಾರ ಮೂಲದವನು ಸ್ಥಳೀಯ ಕಾಲ್ ಸೆಂಟರ್ ವೊಂದರಲ್ಲಿ ಉದ್ಯೋಗಿಯಾಗಿದ್ದಾನೆ. ಕಾಲ್ ಸೆಂಟರ್ ನಲ್ಲಿ ಕಲಿತ ವಿದ್ಯೆಯನ್ನು ಬಳಸಿಕೊಂಡಿದ್ದ ವೋಡಾಫೋನ್ ನಂಬರ್ ನೆಟ್ವರ್ಕ್ ಗೆ ಕನ್ನ ಹಾಕಿ ಸಂದೇಶ ಕಳಿಸಿದ್ದಾನೆ.
ಅಭಿಷೇಕ್ ಕಳಿಸಿರುವ ಸಂದೇಶಗಳನ್ನು ಡಿಕೋಡ್ ಮಾಡಬೇಕಿದೆ. ಜೊತೆಗೆ ಆತನ ಉದ್ದೇಶ ಕೂಡಾ ತಿಳಿಯಬೇಕಿದೆ. ಅಂದ ಹಾಗೆ, ಅಶೋಕ್ ಕಶ್ಯಪ್ ನಿರ್ದೇಶನದ ಧಾರಾವಾಹಿ 'ನಂದ ಗೋಕುಲ' ದಲ್ಲಿ ಅಭಿಷೇಕ್ ಗೆ ರಾಧಿಕಾ ಪಂಡಿತ್ ಪರಿಚಯವಾಗಿದೆ. ಸಿರೀಯಲ್ ಯೂನಿಟ್ ನಲ್ಲಿ ಸ್ಪಾಟ್ ಬಾಯ್ ಆಗಿ ಅಭಿಷೇಕ್ ಕೆಲಸ ಮಾಡುತ್ತಿದ್ದ. ಹೀಗಾಗಿ ರಾಧಿಕಾ ಪಂಡಿತ್ ಅವರ ಮೊಬೈಲ್ ಫೋನ್ ನಂಬರ್ ಸಿಕ್ಕಿದೆ. ನಂದ ಗೋಕುಲ ಸಿರೀಯಲ್ ಕಾಲದಲ್ಲಿ ಬಳಸುತ್ತಿದ್ದ ಸಿಮ್ ಅನ್ನೇ ಇಂದಿನವರೆಗೂ ರಾಧಿಕಾ ಪಂಡಿತ್ ಬಳಸುತ್ತಿದ್ದರು.


Click it and Unblock the Notifications











