ಮೈಸೂರು, ಹುಬ್ಬಳ್ಳಿಯಲ್ಲಿ ಕೆ.ಪಿ.ಎಲ್ ಟೂರ್ನಿ: ನಟಿ ರಾಗಿಣಿ ಪ್ರಮುಖ ಆಕರ್ಷಣೆ
'ತುಪ್ಪದ ಹುಡುಗಿ' ರಾಗಿಣಿ ದ್ವಿವೇದಿ ಕ್ರೀಡಾ ಲೋಕಕ್ಕೂ ಕಾಲಿಟ್ಟಿರುವ ಸುದ್ದಿ ನಿಮಗೆ ಗೊತ್ತೇ ಇದೆ. ಸಿನಿಮಾ ರಂಗದಲ್ಲಿ ಬಿಜಿಯಾಗಿರುವಾಗಲೇ ಕ್ರಿಕೆಟ್ ಬಗ್ಗೆ ಕೂಡ ಆಸಕ್ತಿ ತೋರಿ, ಪ್ರತಿಷ್ಟಿತ ಕೆ.ಪಿ.ಎಲ್ ಲೀಗ್ ನಲ್ಲಿ ಸ್ಪರ್ಧಿಸಲಿರುವ 'ಬಳ್ಳಾರಿ ಟಸ್ಕರ್ಸ್' ತಂಡದ ಮಾಲೀಕರಾಗಿದ್ದಾರೆ ನಟಿ ರಾಗಿಣಿ ದ್ವಿವೇದಿ.
ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಕೆ.ಪಿ.ಎಲ್ ಗೆ ಪದಾರ್ಪಣೆ ಮಾಡಿದ್ದಾರೆ ನಟಿ ರಾಗಿಣಿ. ಕರ್ನಾಟಕ ಕ್ರಿಕೆಟ್ ಸಂಸ್ಥೆ ಆಯೋಜಿಸುತ್ತಿರುವ ಈ ಪ್ರತಿಷ್ಟಿತ ಟೂರ್ನಿಗಾಗಿ ಈಗಾಗಲೇ ಸಿದ್ಧತೆಗಳು ಆರಂಭಗೊಂಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕೆ.ಪಿ.ಎಲ್ ಟೂರ್ನಿ ದಿನಾಂಕ ಪ್ರಕಟವಾಗಿದೆ.

ನಾಲ್ಕನೇ ಆವೃತ್ತಿಯ ಕೆ.ಪಿ.ಎಲ್ ಟೂರ್ನಿ ಮೈಸೂರಿನಲ್ಲಿ ಉದ್ಘಾಟನೆ ಆಗಲಿದೆ. ಸೆಪ್ಟೆಂಬರ್ 16 ರಿಂದ 22 ರವರೆಗಿನ ಪಂದ್ಯಗಳು ಸಾಂಸ್ಕೃತಿಕ ನಗರಿ ಮೈಸೂರಿನಲ್ಲೇ ನಡೆಯಲಿದೆ. ಬಳಿಕ ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 1 ವರೆಗಿನ ಲೀಗ್ ಹಾಗೂ ಸೆಮಿಫೈನಲ್ ಪಂದ್ಯಗಳಿಗೆ ಹುಬ್ಬಳ್ಳಿ ಆತಿಥ್ಯ ವಹಿಸಲಿದೆ.
ಈ ಇಡೀ ರೋಚಕ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿ ರಾಗಿಣಿ ದ್ವಿವೇದಿ ಮಿಂಚಲಿದ್ದಾರೆ. ''ಈ ರಾಜ್ಯ ನನಗೆ ಎಲ್ಲವನ್ನೂ ಕೊಟ್ಟಿದೆ. ಇಲ್ಲಿನ ಜನರ ಪ್ರೀತಿಯಿಂದಲೇ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ಇಲ್ಲಿಗಾಗಿ ನಾನೇನಾದರೂ ಮಾಡಬೇಕೆಂಬ ತುಡಿತ ಮೊದಲಿನಿಂದಲೂ ಇತ್ತು. ಕ್ರೀಡಾ ಕ್ಷೇತ್ರದಲ್ಲಿಯೂ ಕರ್ನಾಟಕದ ಪ್ರತಿಭಾವಂತರನ್ನು ಮುಖ್ಯಭೂಮಿಕೆಗೆ ತರಬೇಕೆಂಬ ಉದ್ದೇಶ ಇಟ್ಟುಕೊಂಡು 'ಬಳ್ಳಾರಿ ಟಸ್ಕರ್ಸ್' ತಂಡದ ಭಾಗಿಯಾಗಿದ್ದೇನೆ ಎನ್ನುತ್ತಾರೆ ನಟಿ ರಾಗಿಣಿ ದ್ವಿವೇದಿ.
ಬಳ್ಳಾರಿ ಟಸ್ಕರ್ಸ್ ತಂಡದಲ್ಲಿ ಅಮಿತ್ ವರ್ಮಾ, ಪ್ರಸಿದ್ಧ್ ಕೃಷ್ಣ, ಪ್ರತೀಕ್ ಜೈನ್, ಅಖಿಲ್ ಸೇರಿದಂತೆ ಸಮರ್ಥ ಆಟಗಾರರಿದ್ದಾರೆ.


Click it and Unblock the Notifications











