ಕಿಚ್ಚ ಸುದೀಪ್ಗಾಗಿ ಗುಡಿ ಕಟ್ಟಿದ ಅಭಿಮಾನಿಗಳು: ಇದು ಕನ್ನಡದ ನಟನಿಗೆ ಕಟ್ಟಿದ ಮೊದಲ ದೇವಸ್ಥಾನ!
ಸೂಪರ್ಸ್ಟಾರ್ಗಳು ಅಭಿಮಾನಿಗಳ ಪಾಲಿಗೆ ದೇವರಿದ್ದಂತೆ. ಮನೆಯಲ್ಲಿ ತಮ್ಮ ನೆಚ್ಚಿನ ನಟನ ಫೋಟೊ ಇಟ್ಟು ಫೂಜೆ ಮಾಡುವ ಅದೆಷ್ಟೋ ಮಂದಿ ಇದ್ದಾರೆ. ದಿನನಿತ್ಯ ನಟರದ್ದೇ ಧ್ಯಾನ ಮಾಡುವ ಅಭಿಮಾನಿಗಳಿಗೇನು ಕಮ್ಮಿಯಿಲ್ಲ. ಅದರಲ್ಲೂ ಕಿಚ್ಚ ಸುದೀಪ್ ಅಭಿಮಾನಿಗಳು ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ತಮ್ಮ ನೆಚ್ಚಿನ ನಟನಿಗಾಗಿ ದೇವಸ್ಥಾನವನ್ನೇ ಕಟ್ಟಲು ಮುಂದಾಗಿದ್ದಾರೆ.
ಕಿಚ್ಚ ಸುದೀಪ್ ಅಭಿಮಾನಿಗಳ ಪಾಲಿನ ಆರಾಧ್ಯ ದೈವ. ಸ್ಯಾಂಡಲ್ವುಡ್ನಿಂದ ಬಾಲಿವುಡ್ವರೆಗೆ ಬೆಳೆದು ನಿಂತ ಕನ್ನಡದ ನಟ. ಕರ್ನಾಟಕದ ವಾಲ್ಮೀಕಿ ಸಮುದಾಯದವರ ಹೆಮ್ಮೆ. ಸ್ಯಾಂಡಲ್ವುಡ್ ಕಂಡ ಈ ಅದ್ಭುತ ನಟನಿಗೆ ಎಲ್ಲಾ ಸಮುದಾಯದಿಂದಲೂ ಅಭಿಮಾನಿಗಳಿದ್ದಾರೆ. ಅವರ ಅಭಿಮಾನಕ್ಕೆ ಕಿಚ್ಚ ಸುದೀಪ್ ಕೂಡ ಶರಣಾಗಿದ್ದಾರೆ. ಈಗ ಕಿಚ್ಚ ನ ರಾಯಚೂರಿನ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮೂರ್ತಿ ನಿರ್ಮಿಸಿ ಗುಡಿಯೊಂದನ್ನು ಕಟ್ಟುತ್ತಿದ್ದಾರೆ. ಹೌದು.. ಕನ್ನಡದ ನಟನಿಗಾಗಿ ಕಟ್ಟಿದ ಈ ಮೊದಲ ಗುಡಿಯ ವಿಶೇಷತೆ ಏನು ಅಂತ ತಿಳಿಯಲು ಮುಂದೆ ಓದಿ.

ಕಿಚ್ಚ ನ ಅಭಿಮಾನಿಗಳಿಂದ 'ಅಭಿಮಾನ ಗುಡಿ' ನಿರ್ಮಾಣ
ಪರಭಾಷೆಯಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟ-ನಟಿಯರಿಗಾಗಿ ದೇವಸ್ಥಾನವನ್ನು ಕಟ್ಟಿ ಪೂಜಿಸುತ್ತಿದ್ದಾರೆ. ಆದರೆ, ಕರ್ನಾಟಕದಲ್ಲಿ ಇಂತಹದ್ದೊಂದು ಆಚರಣೆ ಇರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ಕನ್ನಡದ ನಟನೊಬ್ಬನಿಗೆ ಕರ್ನಾಟಕದಲ್ಲಿ ದೇವಸ್ಥಾನ ನಿರ್ಮಿಸಲಾಗುತ್ತಿದೆ. ರಾಯಚೂರು ಜಿಲ್ಲೆಯ, ದೇವದುರ್ಗ ತಾಲೂಕಿನ ಕುರುಕುಂದ ಗ್ರಾಮದಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ದೇವಸ್ಥಾನ ನಿರ್ಮಿಸಲಾಗುತ್ತಿದೆ. ಈಗಾಗಲೇ ಬಹುತೇಕ ದೇವಸ್ಥಾನದ ಕಾರ್ಯಗಳು ಮುಗಿದಿದ್ದು, ಇನ್ನು ಕೆಲವು ದಿನಗಳ ಕೆಲಸ ಬಾಕಿ ಉಳಿದಿದೆಯಷ್ಟೇ.

ಕಿಚ್ಚನಿಗೆ ಗುಡಿ ಕಟ್ಟಲು ಮುಂದಾಗಿದ್ದು ಹೇಗೆ?
ಕಿಚ್ಚ ಸುದೀಪ್ ಗುಡಿಯನ್ನು ಸುದೀಪ್ ಅಭಿಮಾನಿಗಳು ಕಳೆದ ಮೂರು ತಿಂಗಳಿಂದ ನಿರ್ಮಾಣ ಮಾಡುತ್ತಿದ್ದಾರೆ. ಮೊದಲು ರಾಯಚೂರು ಜಿಲ್ಲೆಯ, ದೇವದುರ್ಗ ತಾಲೂಕಿನ ಕುರುಕುಂದ ಗ್ರಾಮದ ಜನರು ವಾಲ್ಮೀಕಿ ಗುಡಿ ಕಟ್ಟಲು ಮುಂದಾಗಿದ್ದರು. ಆ ವೇಳೆ ಕಿಚ್ಚನ ಅಭಿಮಾನಿಗಳು ಕಿಚ್ಚ ಸುದೀಪ್ಗೆ ಗುಡಿ ಕಟ್ಟಬೇಕು ಎಂದು ನಿರ್ಧರಿಸಿದ್ದರು. ತಮ್ಮ ಜನಾಂಗದ ನಾಯಕ ನಟನ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಅವರಿಗಾಗಿ ಕುಡಿ ನಿರ್ಮಾಣ ಮಾಡಲು ಮುಂದಾಗಿದ್ದರು. ಈ ವೇಳೆ ಇದೇ ಗ್ರಾಮದ ಶರಣು ಬಸವ ನಾಯಕ ಎನ್ನುವವರು ಉಚಿತವಾಗಿ 35 -45 ಚದರ ಅಡಿ ವಿಸ್ತೀರ್ಣ ಜಾಗ ನೀಡಿದ್ದರು. ಇಲ್ಲಿಂದ ಅಭಿಮಾನಿಗಳೇ ಸೇರಿ ಹಣ ಹೊಂದಿಸಿ, ಗುಡಿ ಕಟ್ಟುತ್ತಿದ್ದಾರೆ.

ಕಿಚ್ಚ ಸುದೀಪ್ ದೇವಸ್ಥಾನದ ವಿಶೇಷತೆಯೇನು?
ರಾಯಚೂರು ಜಿಲ್ಲೆಯ, ದೇವದುರ್ಗ ತಾಲೂಕಿನ ಕುರುಕುಂದ ಗ್ರಾಮದಲ್ಲಿ ಮೊದಲು
"ನಾವು ಹುಚ್ಚ ಸಿನಿಮಾದಿಂದ ಸುದೀಪ್ ಅಭಿಮಾನಿ, ನಮ್ಮ ಜನಾಂಗದಲ್ಲಿ ಅವರು ತುಂಬಾ ದೊಡ್ಡ ಹೆಸರು ಮಾಡಿದ್ದಾರೆ. ಅವರಿಗಾಗಿ ಗುಡಿ ಕಟ್ಟಬೇಕು ಅಂತ ತೀರ್ಮಾನ ಮಾಡಿದ್ವಿ. ಗುಡಿಯೊಳಗೆ ಗಾರ್ಡನ್, ಸುತ್ತಲೂ ಕಾಂಪೌಂಡ್, ಲೈಟಿಂಗ್ ಮಾಡಲಾಗಿದೆ. ಸಿಸಿ ಕ್ಯಾಮರಾವನ್ನೂ ಅಳವಡಿಸಲಾಗಿದೆ. ಇನ್ನೊಂದು 20 ದಿನಗಳಲ್ಲಿ ಕೆಲಸ ಮುಗಿಯುತ್ತೆ. ಈ ಗುಡಿಯೊಳಗೆ ವಾಲ್ಕೀಕಿ ಮೂರ್ತಿ ಹಾಗೂ ಸುದೀಪ್ ಮೂರ್ತಿ ಇರುತ್ತೆ." ಅಂತಾರೆ ಸುದೀಪ್ ಅಭಿಮಾನಿ ಹಾಗೂ ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ದೇವರಾಜ ನಾಯಕ.

ಕಿಚ್ಚನ ಮೂರ್ತಿ ಜೊತೆ ಅಪ್ಪು ಫೋಟೊವನ್ನೂ ಇಟ್ಟು ಪೂಜೆ
ಕಿಚ್ಚನ ಈ ಗುಡಿಗೆ ಇದೂವರೆಗೂ 12 ಲಕ್ಷ ಖರ್ಚಾಗಿದೆ. ಕೆಲವು ಗಣ್ಯರು 2-3 ಲಕ್ಷ ಸಹಾಯ ಮಾಡಿದ್ದು ಬಿಟ್ಟರೆ, ಉಳಿದ ಹಣವನ್ನು ಅಭಿಮಾನಿಗಳೇ ಹಾಕಿ ಗುಡಿ ಕಟ್ಟುತ್ತಿದ್ದಾರೆ. ಕಿಚ್ಚ ಗುಡಿಯೊಳಗೆ ಪುನೀತ್ ರಾಜ್ಕುಮಾರ್ ಫೋಟೊಗೆ ಗ್ಲಾಸ್ ಫಿಟ್ಟಿಂಗ್ ಮಾಡಿಸಿ, ಎಲ್ಇಡಿ ಅಳಪಡಿಸಲಾಗುತ್ತೆ. 4 ಬೈ 8 ಗ್ಲಾಸ್ ಫಿಟ್ಟಿಂಗ್ ಇರುವ ಅಪ್ಪು ಪೋಟೊ ಈ ಗುಡಿಯೊಳಗೆ ಸ್ಥಾಪನೆ ಮಾಡಲಾಗುತ್ತೆ. " ಕಿಚ್ಚ ಸುದೀಪ್ ಬಳಿಕ ಅಭಿಮಾನಿಗಳು ಹೇಳಿದಾಗ, ಗುಡಿಯನ್ನು ಕಟ್ಟದೆ ಇರುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಆದರೆ, ನಾವು ಪ್ರೀತಿಯಿಂದ ಕಿಚ್ಚ ಸುದೀಪ್ಗಾಗಿ ಮೂರ್ತಿ ನಿರ್ಮಿಸಿ ಗುಡಿ ಕಟ್ಟಿದ್ದೇವೆ. ಅವರು ಗುಡಿ ನೋಡಲು ಬರುತ್ತೇವೆ ಎಂದಿದ್ದಾರೆ. ಉದ್ಘಾಟನೆ ಬರುತ್ತಾ ಇಲ್ಲವಾ ಅನ್ನುವುದು ಇನ್ನೂ ಗೊತ್ತಿಲ್ಲ" ಅಂತಾರೆ ದೇವರಾಜ ನಾಯಕ.
ಇಷ್ಟೇ ಅಲ್ಲದೆ ಕಿಚ್ಚನ ಗುಡಿ ಕಾಯಲು ವಾಚ್ಮ್ಯಾನ್ ಅನ್ನು ನೇಮಿಸಿದ್ದಾರೆ. ಅವರಿಗೆ ತಿಂಗಳಿಗೆ 7 ರಿಂದ 8 ಸಾವಿರ ಸಂಬಳವನ್ನು ಅಭಿಮಾನಿಗಳು ತಮ್ಮದೇ ಕೈಯಿಂದ ನೀಡಲಿದ್ದಾರೆ. ಇನ್ನು 20 ದಿನಗಳಲ್ಲಿ ಕಿಚ್ಚನ ಗುಡಿ ನಿರ್ಮಾಣ ಆಗಲಿದೆ.


Click it and Unblock the Notifications











