ಪುನೀತ್ ರಾಜ್ಕುಮಾರ್ಗೆ ಕರ್ನಾಟಕ ರತ್ನ ಪ್ರಶಸ್ತಿ: ಬೆಂಗಳೂರಿಗೆ ಬಂದಿಳಿದ ರಜನಿಕಾಂತ್!
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿದ ಒಂದು ವರ್ಷ ಕಳೆದಿದೆ. ಇತ್ತೀಚೆಗೆ ಪವರ್ಸ್ಟಾರ್ ಅಭಿಮಾನಿಗಳು ಮೊದಲ ಪುಣ್ಯ ಸ್ಮರಣೆಯಲ್ಲಿ ಭಾಗಿಯಾಗಿದ್ದರು. ಇಂದು (ನವೆಂಬರ್ 1) ಕನ್ನಡ ರಾಜ್ಯೋತ್ಸವದ ವಿಶೇಷ ದಿನದಂದು ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಅಪ್ಪು ಅಗಲಿದ ದಿನವೇ ಸಿ ಎಂ ಬಸವರಾಜ ಬೊಮ್ಮಾಯಿ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ನೀಡುವುದಾಗಿ ಘೋಷಣೆ ಮಾಡಿದ್ದರು. ಆದರೆ, ಪ್ರಶಸ್ತಿ ಪ್ರಧಾನ ಸಮಾರಂಭ ಯಾವಾಗ ಅನ್ನೋದು ಮಾತ್ರ ನಿಗೂಢವಾಗಿಯೇ ಇತ್ತು. ಕೊನೆಗೂ ಈಗ ಪುನೀತ್ ರಾಜ್ಕುಮಾರ್ ಸಿನಿಮಾ ಹಾಗೂ ಸಾಮಾಜಿಕ ಸೇವೆಯನ್ನು ಗಮನದಲ್ಲಿಟ್ಟುಕೊಂಡು ವಿಧಾನ ಸೌಧದ ಮುಂಭಾಗದಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತಿದೆ.
ಈ ಸಂಬಂಧ ಸೂಪರ್ಸ್ಟಾರ್ ರಜನಿಕಾಂತ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದಾರೆ. ರಜನಿಕಾಂತ್ ಚೆನ್ನೈನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಇಂದು ಸಂಜೆ 4 ಗಂಟೆಗೆ ನಡೆಯಲಿರೋ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗಿಯಾಗುತ್ತಿದ್ದಾರೆ.

ಬೆಂಗಳೂರಿನಲ್ಲಿ ಸೂಪರ್ಸ್ಟಾರ್
ಪುನೀತ್ ರಾಜ್ಕುಮಾರ್ಗೆ ನೀಡಲಾಗುತ್ತಿರುವ ಕರ್ನಾಟಕ ರತ್ನ ಪ್ರಶಸ್ತಿ ಸಮಾರಂಭಕ್ಕೆ ಸೂಪರ್ಸ್ಟಾರ್ ರಜನಿಕಾಂತ್ಗೆ ಆಹ್ವಾನ ನೀಡಲಾಗಿತ್ತು. ಕರ್ನಾಟಕ ಸರ್ಕಾರ ನೀಡಿದ ಆಹ್ವಾನವನ್ನು ತಲೈವಾ ಸ್ವೀಕರಿಸಿದ್ದರು. ಹೀಗಾಗಿ ಇಂದು (ನವೆಂಬರ್ 01) ಮಧ್ಯಾಹ್ನದ ವೇಳೆ ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಇವರೊಂದಿಗೆ ಪುತ್ರಿ ಐಶ್ವರ್ಯಾ ರಜನಿಕಾಂತ್ ಕೂಡ ಆಗಮಿಸಿದ್ದಾರೆ.
ಸೂಪರ್ಸ್ಟಾರ್ಗೆ ಅದ್ಧೂರಿ ಸ್ವಾಗತ
'ಕರ್ನಾಟಕ ರತ್ನ' ಪ್ರಶಸ್ತಿ ಕಾರ್ಯಕ್ರಮಕ್ಕೆ ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಹೀಗಾಗಿ ಹೆಚ್ಎಎಲ್ ಏರ್ಪೋರ್ಟ್ಗೆ ಬಂದಿಳಿದ ಸೂಪರ್ಸ್ಟಾರ್ ಅನ್ನು ಸ್ವತ: ಸಚಿವರಾದ ಕೆ. ಸುಧಾಕರ್ ಹಾಗೂ ಮುನಿರತ್ನ ಇಬ್ಬರೂ ಹೂಗುಚ್ಚ ಹಾಗೂ 'ಎ ಹಿಮಾಲಯನ್ ಮಾಸ್ಟರ್' ಅನ್ನೋ ಪುಸ್ತಕವನ್ನು ನೀಡಿ ಸ್ವಾಗತಿಸಿದ್ದಾರೆ. ಬಳಿಕ ಐಟಿಸಿ ಗಾರ್ಡೇನಿಯಾದಲ್ಲಿ ಸೂಪರ್ಸ್ಟಾರ್ ರಜನಿ ಜೊತೆ ಕೆ ಸುಧಾಕರ್ ಹಾಗೂ ಮುನಿರತ್ನ ಇಬ್ಬರೂ ಭೋಜನ ಸ್ವೀಕರಿಸಿದ್ದಾರೆ. ತಮ್ಮ ಬ್ಯುಸಿ ಶೆಡ್ಯೂಲ್ನಲ್ಲಿಯೂ ರಜನಿಕಾಂತ್ ಬಿಡುವು ಮಾಡಿಕೊಂಡು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

ರಜನಿಕಾಂತ್ ಜೊತೆ ಜೂ.ಎನ್ಟಿಆರ್
ರಜನಿಕಾಂತ್ ಹಾಗೂ ಅಣ್ಣಾವ್ರ ಕುಟುಂಬದ ನಡುವೆ ವಿಶೇಷ ಒಡನಾಟವಿತ್ತು. ಡಾ.ರಾಜ್ಕುಮಾರ್ ಕುಟುಂಬ ಹಲವು ಕಾರ್ಯಕ್ರಮಕ್ಕೆ ರಜನಿ ಆಗಮಿಸಿದ್ದಾರೆ. ಪುನೀತ್ ರಾಜ್ಕುಮಾರ್ ನಿಧನದ ಬಳಿಕ ಇದೇ ಮೊದಲು ಅಪ್ಪುಗೆ ಸಂಬಂಧಿಸಿದ ಕಾರ್ಯಕ್ರಮಕ್ಕೆ ಸೂಪರ್ಸ್ಟಾರ್ ಆಗಮಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಪುನೀತ್ ರಾಜ್ಕುಮಾರ್ ಬಗ್ಗೆ ರಜನಿಕಾಂತ್ ಏನು ಮಾತಾಡುತ್ತಾರೆ ಅನ್ನೋದು ಕೇಳಲು ಅಭಿಮಾನಿಗಳು ಕಾದು ಕೂತಿದ್ದಾರೆ. ಹಾಗೇ ಜೂ.ಎನ್ಟಿಆರ್ ಮತ್ತೊಬ್ಬ ಮುಖ್ಯ ಅತಿಥಿಯಾಗಿ ವೇದಿಕೆ ಮೇಲೆ ಕಾಣಿಸಿಕೊಳ್ಳಿದ್ದಾರೆ.

'ಅಪ್ಪು' ಶತದಿನೋತ್ಸವಕ್ಕೂ ರಜನಿ ಅತಿಥಿ
ಪವರ್ಸ್ಟಾರ್ ಹೀರೊ ಆಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಮೊದಲ ಸಿನಿಮಾ 'ಅಪ್ಪು'. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ 100 ದಿನಗಳನ್ನು ಪೂರೈಸಿತ್ತು. ಈ ವೇಳೆ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಶತದಿನೋತ್ಸವ ಕಾರ್ಯಕ್ರಮಕ್ಕೆ ರಜನಿಕಾಂತ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಪುನೀತ್ ರಾಜ್ಕುಮಾರ್ ಆಕ್ಷನ್, ಡ್ಯಾನ್ಸ್ ಅನ್ನು ಹಾಡಿಹೊಗಳಿದ್ದರು. ಈಗ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೂ ಅತಿಥಿಯಾಗಿ ಆಗಮಿಸಿದ್ದಾರೆ


Click it and Unblock the Notifications











