ಅಪ್ಪು ಸಮಾಧಿ ಸ್ಥಳ ಅಭಿವೃದ್ಧಿ: ಸಿಎಂ ಭೇಟಿಯಾದ ರಾಜ್ ಕುಟುಂಬ!
ರಾಜ್ಕುಮಾರ್ ಕುಟುಂಬಕ್ಕೂ ಕರ್ನಾಟಕದ ಪ್ರಸ್ತುತ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಅವಿನಾಭಾವ ನಂಟಿದೆ. ರಾಜ್ ಕುಟುಂಬಕ್ಕೆ ಸಿಎಂ ಆಪ್ತರು. ಹಾಗಾಗಿ ಮೊದಲಿನಿಂದಲೂ ಇವರ ಕುಟುಂಬದ ಜೊತೆಗೆ ಬೊಮ್ಮಾಯಿ ಅವರ ಒಡನಾಟ ಹೆಚ್ಚೇ ಇದೆ.
ಇನ್ನು ರಾಜ್ ಕುಟುಂಬದ ಬಗ್ಗೆ, ಅದರಲ್ಲೂ ವಿಶೇಷವಾಗಿ ಪುನೀತ್ ರಾಜ್ಕುಮಾರ್ ಬಗ್ಗೆ ಮಾತನಾಡುವಾಗ ಸಿಎಂ ಭಾವುಕರಾಗುತ್ತಾರೆ. ಪುನೀತ್ ಅವರನ್ನು ಚಿಕ್ಕಂದಿನಿಂದ ನೋಡಿಕೊಂಡು ಬಂದಿದ್ದಾರೆ ಸಿಎಂ. ಹಾಗಾಗಿ ಅಪ್ಪು ಎಂದರೆ ಅವರಿಗೆ ಅಪಾರ ಪ್ರೀತಿ. ಇದನ್ನು ಅವರೇ ಹಲವು ಬಾರಿ ಹೇಳಿಕೊಂಡಿದ್ದಾರೆ.
ಈಗ ರಾಜ್ ಕುಟುಂಬ ಸಿಎಂ ಅವರನ್ನು ಭೇಟಿ ಮಾಡಿದೆ. ಇದ್ದಕ್ಕಿದ್ದ ಹಾಗೆ ರಾಜ್ ಕುಟುಂಬದ ಸದಸ್ಯರು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಈ ಭೇಟಿ ಯಾಕೆ? ಯಾವ ಕಾರ್ಯಕ್ಕಾಗಿ ಎನ್ನುವುದನ್ನು ಮುಂದೆ ಓದಿ...

ಸಿಎಂ ಭೇಟಿಯಾದ ರಾಘಣ್ಣ, ಯುವ!
ರೇಸ್ ಕೋರ್ಸ್ ನಿವಾಸದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಡಾ. ರಾಜ್ ಕುಮಾರ್ ಕುಟುಂಬದ ಸದಸ್ಯರು ಭೇಟಿಯಾಗಿದೆ. ಹೀಗೆ ಇದ್ದಕ್ಕಿದ್ದ ಹಾಗೆ ರಾಜ್ ಕುಟುಂಬ ಸಿಎಂ ಅವರನ್ನು ಭೇಟಿಯಾಗಿದ್ದು ಯಾಕೆ ಎನ್ನುವ ಕುತೂಹಲ ಮೂಡಿದೆ. ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಯುವ ರಾಜಕುಮಾರ್ ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇವರ ಭೇಟಿಯ ಫೋಟೊಗಳು ಕೂಡ ರಿವೀಲ್ ಆಗಿವೆ.

ಸಿಎಂ ನಿವಾಸದಲ್ಲಿ ಅಪ್ಪು ಪತ್ನಿ ಅಶ್ವಿನಿ!
ಈಗ ಸಿಎಂ ಅವರನ್ನು ರಾಜ್ಕುಟುಂಬ ಭೇಟಿ ಆಗಿರುವುದಕ್ಕೆ ವಿಶೇಷ ಕಾರಣ ಇದೆ. ಕಂಠೀರವ ಸ್ಟುಡಿಯೋ ಮತ್ತು ಅಲ್ಲಿನ ರಾಜ್ ಕುಮಾರ್ ಸಮಾಧಿ ,ಪುನೀತ್ ರಾಜ್ ಕುಮಾರ್ ಸಮಾಧಿ ಮತ್ತು ಪಾರ್ವತಮ್ಮ ಸಮಾಧಿ ಸ್ಥಳವನ್ನು ಅಭಿವೃದ್ಧಿಗೊಳಿಸುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಲಾಗಿದೆ. ಒಂದೇ ಸ್ಥಳದಲ್ಲಿ ರಾಜ್ಕುಟುಂಬದ ಮೂವರ ಸಮಾಧಿ ಇದೆ. ಹಾಗಾಗಿ ಈ ಜಾಗದ ಅಭಿವೃದ್ಧಿಗೆ ರಾಜ್ಕುಟುಂಬ ಮುಂದಾಗಿದ್ದು, ಈ ಬಗ್ಗೆ ಸಿಎಂ ಜೊತೆ ಚರ್ಚಿಸಿದ್ದಾರೆ.

ಅಭಿವೃದ್ಧಿಯ ರೂಪುರೇಷೆ ಸಿದ್ಧ!
ಕಂಠೀರವ ಸ್ಟುಡಿಯೋದಲ್ಲಿನ ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಮತ್ತು ಪಾರ್ವತಮ್ಮ ಸಮಾಧಿ ಸ್ಥಳವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ರಾಜ್ ಕುಟುಂಬದಿಂದ ಸಿದ್ದಪಡಿಸಿದ ಪಿಪಿಟಿಯನ್ನು ಕೂಡ ಸಿಎಂ ವೀಕ್ಷಣೆ ಮಾಡಿದ್ದಾರೆ. ಪಿಡಬ್ಲ್ಯುಡಿ ಇಲಾಖೆಯಿಂದ ಈ ಯೋಜನೆಗೆ ಅಂದಾಜು ಮೊತ್ತ ತರಿಸಲು ಸಿಎಂ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. PWD ಇಲಾಖೆಯಿಂದ ಯೋಜನೆಯ ರೂಪುರೇಷ ತಯಾರದ ಬಳಿಕ ಮತ್ತೊಂದು ಸುತ್ತಿನ ಸಭೆ ಮಾಡೋವುದಾಗಿ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಅಪ್ಪು ಸ್ಮಾರಕಕ್ಕೆ ಜನಸಾಗರ!
ಕಂಠೀರವ ಸ್ಟುಡಿಯೋದಲ್ಲಿ ಮೊದಲು ರಾಜ್ಕುಮಾರ್ ಸಮಾಧಿಗೆ ಹಲವಾರು ಮಂದಿ ಭೇಟಿ ನೀಡುತ್ತಿದ್ದರು. ಈಗ ನಟ ಪುನೀತ್ ರಾಜ್ಕುಮಾರ್ ಸಮಾಧಿಗೆ ನಮಿಸಲು ಪ್ರತಿನಿತ್ಯವೂ ಜನ ಸಾಗರ ಹರಿದು ಬರ್ತಿದೆ. ಅಲ್ಲೇ ಪಾರ್ವತಮ್ಮ ರಾಜ್ಕುಮಾರ್ ಸಮಾಧಿ ಕೂಡ ಇದೆ. ಅಪ್ಪು ಆರಾಧಕರು ನಿತ್ಯವೂ ಅಲ್ಲಿಗೆ ಬಂದು ನಮಿಸಿ ಹೋಗುವುದರಿಂದ ಅದು ಒಂದು ರೀತಿ ದೇವಸ್ಥಾನದ ರೀತಿಯಲ್ಲಿ ಮಾರ್ಪಾಡಾಗಿದೆ. ಸದಾ ಪೂಜೆ ಪುನಸ್ಕಾರಗಳು ನಡೆಯುತ್ತಲೇ ಇರುತ್ತೆ. ಈಗ ಈ ಜಾಗವನ್ನು ಮತ್ತಷ್ಟು ಅಭಿವೃದ್ಧಿ ಮಾಡಲು ರಾಜ್ಕುಟುಂಬ ಮುಂದಾಗಿದೆ.


Click it and Unblock the Notifications











