'ಕನ್ನಡ ಮೀಡಿಯಂ ರಾಜು' ಬಿಡುಗಡೆಗೆ ಎದುರಾಯ್ತು ಕಂಟಕ
'ರಾಜು ಕನ್ನಡದ ಮೀಡಿಯಂ' ಸಿನಿಮಾಗೆ ಕಂಟಕ ಎದುರಾಗಿದೆ. ಸುರೇಶ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನ ಬಿಡುಗಡೆ ಮಾಡದಂತೆ ತಡೆಯಾಜ್ಞೆ ತರಲಾಗಿದೆ.
ನಟ ಗುರುನಂದನ್ ಹಾಗೂ ಅವಂತಿಕಾ ಶೆಟ್ಟಿ ಅಭಿನಯದ ಚಿತ್ರ ಇದಾಗಿದ್ದು 'ಫಸ್ಟ್ Rank ರಾಜು' ಸಿನಿಮಾ ನಿರ್ದೇಶಕ ನರೇಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 'ರಾಜು ಕನ್ನಡ ಮೀಡಿಯಂ' ಸಿನಿಮಾದ ನಿರ್ಮಾಪಕ ಸುರೇಶ್ ಅಲ್ಲ ನಾನು ಕೂಡ ಚಿತ್ರದ ನಿರ್ಮಾಪಕ ಎಂದು ಡಾ.ಎನ್.ಲಕ್ಷ್ಮೀಪತಿ ಬಾಬು ಕೋರ್ಟ್ ಮೆಟ್ಟಿಲೇರಿದ್ದಾರೆ.

ಸದ್ಯ ಸಿಟಿ ಸಿವಿಲ್ ಕೋರ್ಟ್ ನಿಂದ ಚಿತ್ರ ಬಿಡುಗಡೆಗೆ ತಡೆಯಾಜ್ಞೆ ತಂದಿದ್ದಾರೆ ಲಕ್ಷ್ಮೀಪತಿ ಬಾಬು. 'ರಾಜು ಕನ್ನಡ ಮೀಡಿಯಂ' ಸಿನಿಮಾ ನಿರ್ಮಾಣದ ಸಮಯದಲ್ಲಿ ಸುರೇಶ್ ಮತ್ತು ಲಕ್ಷ್ಮೀಪತಿ ಬಾಬು ಸೇರಿ ಸುರೇಶ್ ಫಿಲ್ಮ್ಸ್ ಎನ್ನುವ ಬ್ಯಾನರ್ ಪ್ರಾರಂಭ ಮಾಡಿ 60-40 ಶೇರ್ ನಲ್ಲಿ ಚಿತ್ರ ಮಾಡಲು ನಿರ್ಧರಿಸಿದ್ದರಂತೆ. ಸದ್ಯ ಶೇಕಡ 60 ರಷ್ಟು ಲಕ್ಷ್ಮೀಪತಿ ಬಾಬು ಅವರಿಂದ ಹಣ ಪಡೆದು ಈಗ ನಿರ್ಮಾಪಕ ಸುರೇಶ್ ಕೈಗೆ ಸಿಗದಂತೆ ಓಡಾಡ್ತಿದ್ದಾರೆ ಅನ್ನೋದು ನಿರ್ಮಾಪಕ ಲಕ್ಷ್ಮೀಪತಿ ಅವರ ಆರೋಪ.

ಅಷ್ಟೇ ಅಲ್ಲದೆ ಸುರೇಶ್ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ತಮ್ಮ ಸ್ವಂತ ಬ್ಯಾನರ್ ಆದ ಸುರೇಶ್ ಆರ್ಟ್ಸ್ ನಲ್ಲಿ ಚಿತ್ರ ಬಿಡುಗಡೆ ಮಾಡೋದಕ್ಕೆ ಸಜ್ಜಾಗಿದ್ದಾರೆ. ಚಿತ್ರ ಬಿಡುಗಡೆ ಬಗ್ಗೆಯೂ ನನಗೆ ಮಾಹಿತಿ ಇಲ್ಲ ಎಂದಿದ್ದಾರೆ ಲಕ್ಷ್ಮೀಪತಿ ಬಾಬು. ಇತ್ತ ಸುರೇಶ್ ಅವರನ್ನ ಈ ಬಗ್ಗೆ ಕೇಳಿದ್ರೆ ಕೋರ್ಟ್ ರಜೆ ಇದೆ ನಾಳೆ ಎಲ್ಲಾ ಕ್ಲಿಯರ್ ಮಾಡಿಕೊಳ್ಳುತ್ತೇವೆ ಅಂತಿದ್ದಾರೆ.


Click it and Unblock the Notifications











