ರಕ್ಷಿತಾ ನಿರ್ಮಿಸುತ್ತಿರುವ ಚಿತ್ರಕ್ಕೆ ಜೋಗಿ ಪ್ರೇಮ್ ನಾಯಕ

ಪ್ರೇಮ್ ಅಡ್ಡ ಚಿತ್ರ ದಸರ ಹಬ್ಬಕ್ಕೆ ಬಿಡುಗಡೆಯಾಗುವುದಾಗಿ ಮೊನ್ನೆ ಆಡಿಯೋ ಸಮಾರಂಭದಲ್ಲಿ ನಿರ್ಮಾಪಕ ಮುರುಳಿ ಕೃಷ್ಣ ಹೇಳಿಕೊಂಡರು. ಪ್ರೇಮ್ ನಾಯಕ ನಟನಾಗಿರುವ ಈ ಚಿತ್ರ ಒಂದು ವೇಳೆ ಯಶಸ್ವಿಯಾದರೆ ಪ್ರೇಮ್ ನಟನಾ ಬಯಕೆಗೆ ಅದೊಂದು ಹೊಸ ಎನರ್ಜಿಯನ್ನೇ ತರಬಹುದು.
ಯಾಕೆಂದರೆ ಅವರ ಈ ಮೊದಲಿನ ಚಿತ್ರ ಪ್ರೀತಿ ಏಕೆ ಭೂಮಿ ಮೇಲಿದೆ ದಯನೀಯವಾಗಿ ನೆಲಕಚ್ಚಿತ್ತು. ಪ್ರೇಮ್ ನಿರ್ದೇಶಕನಾಗಿ ಚಿತ್ರರಂಗಕ್ಕೆ ಬಂದವರಾದರೂ ನಟನೆ ಬಗ್ಗೆಯೂ ಭಾರೀ ಆಸೆ ಇಟ್ಟುಕೊಂಡು ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ. ಪ್ರೇಮ್ ಅಡ್ಡ ಆದ ಮೇಲಾದರೂ ಪ್ರೇಮ್ ಮತ್ತೆ ನಿರ್ದೇಶನಕ್ಕೆ ಮರಳುತ್ತಾರಾ?
ಈ ಬಗೆ ಇನ್ನೂ ಗೊಂದಲವಿದೆ. ಯಾಕೆಂದರೆ ಸದ್ಯಕ್ಕಂತೂ ಪ್ರೇಮ್ ತನ್ನ ಯಾವುದೇ ಪ್ರಾಜೆಕ್ಟ್ ಬಗ್ಗೆಯೂ ಹೇಳಿಕೊಂಡಿಲ್ಲ. ಆದರೆ ನಟನೆ ಮುಂದುವರಿಸುವ ಬಗ್ಗೆ ಮಾತ್ರ ಸೂಚನೆಗಳನ್ನ ಬಿಟ್ಟುಕೊಡುತ್ತಿದ್ದಾರೆ. ಸದ್ಯಕ್ಕೆ ಲಭ್ಯವಾಗುತ್ತಿರುವ ಮಾಹಿತಿ ಪ್ರಕಾರ ಪ್ರೇಮ್ 'ಪ್ರೇಮ್ ಅಡ್ಡ' ಚಿತ್ರದ ನಂತರ ತಮ್ಮ ಶಿಷ್ಯನೊಬ್ಬನ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲು ಸಿದ್ದತೆ ಆರಂಭಿಸಿದ್ದಾರಂತೆ.
'ಗುಬ್ಬಿ' ಎಂಬ ಸಿನಿಮಾ ನಿರ್ದೇಶಿಸಿದ್ದ ವಿಜಯ್ ಆ ಚಿತ್ರಕ್ಕೂ ಮೊದಲು ಪ್ರೇಮ್ ಜೊತೆಗಿದ್ದು ಕೆಲಸ ಮಾಡಿದ್ದ ಹುಡುಗ. ಅದೇ ವಿಜಯ್ ಹೇಳಿರುವ ಸ್ಕ್ರಿಪ್ಟ್ ಕೇಳಿ ಇಂಪ್ರೆಸ್ ಆಗಿರುವ ಪ್ರೇಮ್ ತಾನು ಅದರಲ್ಲಿ ನಾಯಕನಾಗಲು ಒಪ್ಪಿಕೊಂಡಿದ್ದಾರಂತೆ. ಇನ್ನೂ ಒಂದು ವಿಶೇಷವೇನೆಂದರೆ ಪ್ರೇಮ್ ತಾವೇ ಈ ಚಿತ್ರಕ್ಕೆ ಹಣ ತೊಡಗಿಸಲಿದ್ದಾರೆ. ರಕ್ಷಿತಾ ಈ ಚಿತ್ರದ ನಿರ್ಮಾಪಕಿ.
ಇದಲ್ಲದೆ ಮುನಿರತ್ನ ನಿರ್ಮಾಣ ಮಾಡಲಿರುವ ಚಿತ್ರವೊಂದರಲ್ಲಿ ಉಪೇಂದ್ರ ಮತ್ತು ಪ್ರೇಮ್ ಒಟ್ಟಾಗಿ ಕಾಣಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೂ ಗಾಂಧಿನಗರದಲ್ಲಿ ಓಡಾಡುತ್ತಿದೆ.
ಅದೂ ನಿಜವಾದರೆ ಪ್ರಾಯಶಃ ಪ್ರೇಮ್ ನಿರ್ದೇಶನಕ್ಕೆ ಮರಳುವುದು ಸದ್ಯಕ್ಕಿಲ್ಲ ಅಂತಲೆ ಖಚಿತವಾಗಿ ಹೇಳಬಹುದು. ಆದರೆ ಇದೆಲ್ಲವೂ ಪ್ರೇಮ್ ಅಡ್ಡಾದ ಯಶಸ್ಸಿನ ಮೇಲೆಯೇ ನಿರ್ಧರಿತ ಅನ್ನೋದನ್ನ ಮರೆಯುವಂತಿಲ್ಲ.


Click it and Unblock the Notifications











