'ರಾಮಾಚಾರಿ' ಚಿತ್ರ ನೋಡಿ ಥ್ರಿಲ್ಲಾದ ರಾಮ್ ಚರಣ್
ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅಭಿನಯದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರ 75 ದಿನಗಳನ್ನು ಪೂರೈಸಿ ಶತಕದತ್ತ ಮುನ್ನುಗ್ಗುತ್ತಿದೆ. ಅಕ್ಕಪಕ್ಕದ ರಾಜ್ಯಗಳು ಈ ಚಿತ್ರದ ಕಡೆಗೆ ತಿರುಗಿ ನೋಡುವಂತಾಗಿದೆ. ಇತ್ತೀಚೆಗೆ ತೆಲುಗು ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ಬೆಂಗಳೂರಿಗೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಅವರು ಯಶ್ ಅಭಿನಯದ 'ರಾಮಾಚಾರಿ' ಚಿತ್ರವನ್ನು ವೀಕ್ಷಿಸಿದರು. ಇದುವರೆಗೂ ನಾನು ನೋಡಿದ ಚಿತ್ರಗಳಲ್ಲೇ ಅತ್ಯದ್ಭುತ ಚಿತ್ರ ಎಂದಿದ್ದಾರೆ. ಇದೇ ಚಿತ್ರವನ್ನು ತೆಲುಗಿನಲ್ಲಿ ರೀಮೇಕ್ ಮಾಡಲು ನಮ್ಮನ್ನು ಸಂಪರ್ಕಿಸಲಾಗಿತ್ತು. ಆದರೆ ರೀಮೇಕ್ ಚಿತ್ರಗಳನ್ನು ತಾವು ಮಾಡಬಾರದು ಎಂದು ನಿರ್ಧರಿಸಿದ್ದೇನೆ. ಬಾಲಿವುಡ್ ನ 'ಝಂಜೀರ್' ಚಿತ್ರ ನನಗೆ ಒಳ್ಳೆ ಪಾಠ ಕಲಿಸಿದೆ ಎಂದಿದ್ದಾರೆ.

ಮೂಲ ಚಿತ್ರವೇ ಅದ್ಭುತವಾಗಿರುವಾಗ, ಇನ್ನು ರೀಮೇಕ್ ಮಾಡುವುದರಲ್ಲಿ ಅರ್ಥವಿಲ್ಲ. ಇದೇ ಎಳೆಯನ್ನು ಬೇಕಿದ್ದರೆ ತೆಗೆದುಕೊಂಡು ಕಥೆಯನ್ನು ವಿಸ್ತರಿಸಬಹುದು. ಕನ್ನಡ ಚಿತ್ರಗಳಲ್ಲಿ ಅಭಿನಯಿಸುವ ಬಗ್ಗೆಯೂ ಮಾತನಾಡಿರುವ ಅವರು, ಮೊದಲು ಅತಿಥಿ ಪಾತ್ರದಲ್ಲಿ ಅಭಿನಯಿಸಬೇಕೆಂದಿದ್ದೇನೆ ಎಂದು ತಮ್ಮ ಮನದಾಳದ ಮಾತುಗಳನ್ನು ಇಂಗ್ಲಿಷ್ ದೈನಿಕವೊಂದರ ಜೊತೆಗೆ ಹಂಚಿಕೊಂಡಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ನನಗೆ ಅಷ್ಟಾಗಿ ಯಾರೂ ಆತ್ಮೀಯರಿಲ್ಲ. ಬೆಂಗಳೂರಿನಲ್ಲಿರುವಷ್ಟು ದಿನವೂ ನಾನು ಯಾರನ್ನು ಭೇಟಿ ಮಾಡುವುದಿಲ್ಲ. ಸುದೀಪ್ ಮತ್ತು ಕೃತಿ ಕರಬಂಧ ನನಗೆ ಗೊತ್ತು. ಆದರೆ ಅವರೊಂದಿಗೆ ನನಗೆ ಖಾಸಾ ಗೆಳೆತನವಿಲ್ಲದಿದ್ದರೂ ಕೇವಲ ವೃತ್ತಿಗೆ ಸಂಬಂಧಿಸಿದಂತೆ ಆತ್ಮೀಯತೆ ಇದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ 15 ವರ್ಷಗಳ ಹಿಂದೆ ಕೊಂಡುಕೊಂಡಿರುವ ಫಾರಂ ಹೌಸ್ ಗೆ ಪ್ರತಿ ವರ್ಷ ರಾಮ್ ಚರಣ್ ತಪ್ಪದೇ ಭೇಟಿ ನೀಡುತ್ತಾರೆ. ಈ ಬಾರಿ ಬೆಂಗಳೂರಿಗೆ ಬಂದಾಗ ಅವರು 'ರಾಮಾಚಾರಿ' ನೋಡಿ ಖುಷಿಪಟ್ಟಿದ್ದಾರೆ. ಕನ್ನಡದಲ್ಲಿ ಉತ್ತಮ ಚಿತ್ರಗಳು ಬರುತ್ತಿಲ್ಲ ಎಂಬ ಮಾತಿಗೆ 'ರಾಮಾಚಾರಿ' ಚಿತ್ರ ಒಂದು ಅಪವಾದ ಎನ್ನಬಹುದು.


Click it and Unblock the Notifications











