'ಟಿಪ್ಪು ನಿಜ ಕನಸುಗಳು' ವಿವಾದ: ಅಡ್ಡಂಡ ಕಾರ್ಯಪ್ಪಗೆ ಕೊಲೆ ಬೆದರಿಕೆ
ಮೈಸೂರಿನ ಸಾಂಸ್ಕೃತಿಕ ಸಂಸ್ಥೆ ರಂಗಾಯಣ ಮತ್ತೆ ಸದ್ದು ಮಾಡಿದೆ. 'ಟಿಪ್ಪು ನಿಜ ಕನಸುಗಳು' ನಾಟಕದ ಮೂಲಕ ಸುದ್ದಿ ಮಾಡಿದ್ದ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಅವರಿಗೆ ಇದೀಗ ಕೊಲೆ ಬೆದರಿಕೆ ಪತ್ರ ಬಂದಿದ್ದು, ಈ ಸಂಬಂಧ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.
ಇತ್ತೀಚಿಗೆ ಬೆಂಗಳೂರಿನ ಸೆಷನ್ ಕೋರ್ಟ್ನಲ್ಲಿ ಅಡ್ಡಂಡ ಕಾರ್ಯಪ್ಪ ರಚನೆಯ 'ಟಿಪ್ಪು ನಿಜ ಕನಸುಗಳು' ನಾಟಕ ಕೃತಿಯ ಮಾರಾಟ ಹಾಗೂ ಹಂಚಿಕೆಗೆ ತಡೆಯಾಜ್ಞೆ ನೀಡಲಾಗಿತ್ತು. ಆದರೆ, ನಾಟಕ ಪ್ರದರ್ಶನಕ್ಕೆ ಯಾವುದೇ ಅಡ್ಡಿ ಇರಲಿಲ್ಲ. ಆದರೀಗ ಶಿವಮೊಗ್ಗ ಮೂಲದ ಅನಾಮಧೇಯ ವ್ಯಕ್ತಿಯೊಬ್ಬರು ರಂಗಾಯಣದ ನಿರ್ದೇಶಕರಿಗೆ ಕೊಲೆ ಬೆದರಿಕೆ ಬರೆದಿದ್ದಾನೆ.
''ನೀನೀಗ ಸಾಯುವ, ಕೊಲೆ ಆಗುವ ಹಂತ ತಲುಪಿದ್ದೀಯ, ನಿನ್ನನ್ನು ನೀನು ನಂಬಿರುವ ದೇವರೂ ಉಳಿಸುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿದ್ದಾನೆ. ಹಾಗೆಯೇ ಶಿವಮೊಗ್ಗದಿಂದ ಒಂದು ಪೋಸ್ಟ್ ಕಾರ್ಡ್ ಬಂದಿದೆ,'' ಎಂದು ದೂರಿನಲ್ಲಿ ತಿಳಿಸಿದ್ದಾರೆ.

''ನ.28ರಂದು ಶಿವಮೊಗ್ಗ ಜಿಲ್ಲೆಯ ಬ್ರಾಹ್ಮಣ ಬೀದಿ, ಕೋಟೆ ರಸ್ತೆಯ ಶ್ರೀರಾಂ ಎಂಬ ವಿಳಾಸದಿಂದ ಪತ್ರ ಬಂದಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಮೈಸೂರಿನ ನಿವೃತ್ತ ಪ್ರಾಧ್ಯಾಪಕ ಮಹೇಶ್ ಚಂದ್ರಗುರು ಎಂಬುವವರು ವಿಡಿಯೊವೊಂದರಲ್ಲಿ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅದನ್ನು ಎಲ್ಲೆಡೆ ಹಂಚುತ್ತಿದ್ದಾರೆ. ಇದರಿಂದ ಪ್ರಚೋದನೆಗೊಂಡ ಕೆಲವರು (ಹೆಸರು ಗೊತ್ತಿಲ್ಲ) ನನ್ನನ್ನು ನಿಂದಿಸಲು ತೊಡಗಿದ್ದಾರೆ,'' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ.
ಇತ್ತೀಚಿಗೆ ಮೈಸೂರಿನ ಕಲಾಮಂದಿರದಲ್ಲಿ ಹಾಗೂ ಭೂಮಿಗೀತದಲ್ಲಿ 'ಟಿಪ್ಪು ನಿಜ ಕನಸುಗಳು' ನಾಟಕ ಯಶಸ್ವಿಯಾಗಿ ಪ್ರದರ್ಶನಗೊಂಡಿದೆ. ಪೊಲೀಸರ ಬಿಗಿ ಭದ್ರತೆ ಮೂಲಕ ನಾಟಕ ಪ್ರದರ್ಶನ ಕಂಡಿದ್ದು ವಿಶೇಷ.
'ಟಿಪ್ಪುವಿನ ನಿಜ ಕನಸುಗಳು' ನಾಟಕದ ಬಗ್ಗೆ ಮೊದಲಿನಿಂದಲೂ ಅಪಸ್ವರ ಇದ್ದೇ ಇದೆ. ಇದೊಂದು ತಿರುಚಲಾದ ಇತಿಹಾಸವುಳ್ಳ ಪುಸ್ತಕವೆಂದು ಹಲವರು ಟೀಕೆ ಮಾಡಿದ್ದಾರೆ. ಟಿಪ್ಪುವಿನ ಬಗ್ಗೆ ಅವರ ಕೋಮಿನ ಬಗ್ಗೆ ದುರಾಭಿಪ್ರಾಯ ಬಿತ್ತಲೆಂದೇ ಈ ಕೃತಿ ರಚಿಸಲಾಗಿದೆಯೆಂದು ಹಲವರು ಆರೋಪಿಸಿದ್ದಾರೆ. ಅಡ್ಡಂಡ ಕಾರ್ಯಪ್ಪ ಅವರನ್ನು ಚರ್ಚೆಗೆ ಸಹ ಆಹ್ವಾನಿಸಿದ್ದಾರೆ.
ಕೃತಿಯನ್ನು ಸಮರ್ಥಿಸಿಕೊಳ್ಳುವವರ ಸಂಖ್ಯೆಯೂ ದೊಡ್ಡದೇ ಇದೆ. ಎಸ್.ಎಲ್.ಬೈರಪ್ಪ, ಸಂಸದ ಪ್ರತಾಪ್ ಸಿಂಹ, ಚಕ್ರವರ್ತಿ ಸೂಲಿಬೆಲೆ, ರೋಹಿತ್ ಚಕ್ರತೀರ್ತ ಇನ್ನಿತರರು ಪುಸ್ತಕದ ಪರವಾಗಿ ನಿಂತಿದ್ದಾರೆ. ಪುಸ್ತಕ ಬಿಡುಗಡೆ ಹಾಗೂ ನಾಟಕ ಪ್ರದರ್ಶನದ ಸಮಯದಲ್ಲಿಯೂ ಹಾಜರಿದ್ದರು. ಗಿರೀಶ್ ಕಾರ್ನಾಡರು ಬರೆದಿರುವ 'ಟಿಪ್ಪುವಿನ ಕನಸುಗಳು' ಪುಸ್ತಕಕ್ಕೆ ಪ್ರತಿಯಾಗಿ ಈ ಪುಸ್ತಕ ಬರೆಯಲಾಗಿದೆ.


Click it and Unblock the Notifications











