ನಿಖಿಲ್-ರೇವತಿ ಮದುವೆ ಬಗ್ಗೆ ಹೀಗ್ಯಾಕಂದರು ರವೀನಾ ಟಂಡನ್
ನಿಖಿಲ್ ಕುಮಾರಸ್ವಾಮಿ- ರೇವತಿ ಮದುವೆ ಇಂದು ರಾಮನಗರದ ಕೇತಿಗಾನಹಳ್ಳಿ ಬಳಿಯ ಫಾರಂ ನಲ್ಲಿ ನರಳವಾಗಿ ನಡೆದಿದೆ. ಆಪ್ತ ಬಂಧುಗಳಷ್ಟೆ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.
ಕುಮಾರಸ್ವಾಮಿ ಕುಟುಂಬ, ರೇವತಿ ಕುಟುಂಬ ಮತ್ತು ಕೆಲವರಷ್ಟೆ ಆಪ್ತರ ಸಮ್ಮುಖದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ರೇವತಿ ಅವರನ್ನು ವರಿಸಿದ್ದಾರೆ.
ಸಾಮಾಜಿಕ ಅಂತರ ಕಾಪಾಡುವುದಾಗಿ, ಹೆಚ್ಚು ಜನ ಸೇರದೆ ಕಡಿಮೆ ಮಂದಿಯ ಹಾಜರಿಯಲ್ಲಿ ಮದುವೆ ಕಾರ್ಯ ಮುಗಿಸುವುದಾಗಿ ಕುಮಾರಸ್ವಾಮಿ ಈ ಮುಂಚೆ ಹೇಳಿದ್ದರು. ಆದರೂ ಸಹ ಕೆಲವರು ಮದುವೆ ಕಾರ್ಯದಲ್ಲಿ ಕೊರೊನಾ ಕುರಿತಾದ ಮುನ್ನೆಚ್ಚರಿಕಾಕ್ರಮಗಳ ಕೊರತೆ ಇತ್ತು ಎಂದು ಆರೋಪಿಸಿದ್ದಾರೆ.
ನಟಿ ರವೀನಾ ಟಂಡನ್ ಸಹ ನಿಖಿಲ್-ರೇವತಿ ಕಲ್ಯಾಣದ ಬಗ್ಗೆ ಅಪಸ್ವರ ಎತ್ತಿದ್ದಾರೆ. ಈ ಬಗ್ಗೆ ಅವರು ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

''ಹಸಿವಿನಿಂದ ನರಳುತ್ತಿದ್ದಾಗ ಇದು ಬೇಕಿತ್ತಾ''
ದೇಶದ ಬಹುತೇಕ ಜನ ಹಸಿವಿನಿಂದ ಒದ್ದಾಡುತ್ತಿದ್ದಾರೆ, ಕೋಟ್ಯಂತರ ಮಂದಿ ತಮ್ಮ ಕುಟುಂಬವನ್ನೂ ತಲುಪಲು ಸಾಧ್ಯವಾಗದೆ ಒದ್ದಾಡುತ್ತಿದ್ದಾರೆ ಎಂಬುದು ಕೆಲ ಬಡ ಆತ್ಮಗಳಿಗೆ ಅರ್ಥವೇ ಆಗಿಲ್ಲ ಎಂದು ರವೀನಾ ಟಂಡನ್ ಅಸಮಾಧಾನ ಹೊರಹಾಕಿದ್ದಾರೆ.

ಭೋಜನಕ್ಕೆ ಏನೇನು ಅಡುಗೆ ಮಾಡಿದ್ದರು: ರವೀನಾ ವ್ಯಂಗ್ಯ
ಇವರು ಸಂಭ್ರಮದ ಆಚರಣೆಯಲ್ಲಿ ತೊಡಗಿದ್ದಾಗ ಉಳಿದವರು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದಿರುವ ರವೀನಾ, ''ಅಂದಹಾಗೆ ವಿವಾಹ ಭೋಜನಕ್ಕೆ ಏನೇನು ಅಡುಗೆ ಮಾಡಿಸಿದ್ದರು ಎಂಬ ಕುತೂಹಲವಿದೆ'' ಎಂದು ವ್ಯಂಗ್ಯವಾಡಿದ್ದಾರೆ.

ಅಸಮಾಧಾನ ವ್ಯಕ್ತಪಡಿಸಿದ ರವೀನಾ ಟಂಡನ್
ಇಂಥಹಾ ಸಂಕಷ್ಟದ ಸಮಯದಲ್ಲಿ ವಿವಾಹ ಕಾರ್ಯಕ್ರಮ ಆಯೋಜಿಸಿದ್ದರ ಬಗ್ಗೆಯೇ ರವೀನಾ ಟಂಡನ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂಥಹಾ ಸಂಕಷ್ಟದ ಸಮಯದಲ್ಲಿ ಸಂಭ್ರಮ ಪಡುವ ಅವಶ್ಯಕತೆ ಇರಲಿಲ್ಲ ಎಂಬುದು ಅವರ ಟ್ವೀಟ್ನ ಒಟ್ಟಾರೆ ಆಶಯ.

ಸಾಮಾಜಿಕ ಅಂತರ ಕಾಪಾಡಿಲ್ಲವೆಂಬ ಆರೋಪ
ನಿಖಿಲ್ ಕುಮಾರಸ್ವಾಮಿ-ರೇವತಿ ವಿವಾಹವು ಇಂದು ಬೆಳಿಗ್ಗೆ ನೆರವೇರಿದೆ. ವಿವಾಹದ ಕೆಲವು ಚಿತ್ರಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಮಾರಂಭದ ವೇಳೆ ಸಾಮಾಜಿಕ ಅಂತರ ಕಾಪಾಡಲಾಗಿಲ್ಲ ಎಂಬ ಆರೋಗಳು ಕೇಳಿ ಬಂದಿವೆ.

ಕೆಜಿಎಫ್ನಲ್ಲಿ ನಟಿಸುತ್ತಿರುವ ರವೀನಾ
ಇನ್ನು ರವೀನಾ ಟಂಡನ್ ಅವರು ಪ್ರೀತ್ಸೆ ನಂತರ ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೆಜಿಎಫ್ 2 ಸಿನಿಮಾದಲ್ಲಿ ರವೀನಾ ಟಂಡನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಯಶ್ ಜೊತೆಗಿನ ಅವರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.


Click it and Unblock the Notifications











