ಮಂಡ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷನಾದ ಖಳನಟ ರವಿಶಂಕರ್
ಕರ್ನಾಟಕ ವಿಧಾನಸಭೆ ಚುನಾವಣೆ ಬರುತ್ತಿದ್ದಂತೆ ಸಿನಿಮಾ ತಾರೆಯರನ್ನ ಪ್ರಚಾರಕ್ಕೆಂದು ಕರೆತರುವುದು ಆರಂಭವಾಗಿದೆ. ಇತ್ತೀಚಿಗಷ್ಟೆ ನಟಿ ಮಾಲಾಶ್ರೀ, ಸಾಧುಕೋಕಿಲಾ, ರಮ್ಯಾ ಸೇರಿದಂತೆ ಹಲವರು ಸಿನಿಮಾ ಕಲಾವಿದರು ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕರಾಗಿ ಕೈ ಪಕ್ಷದ ಜೊತೆಯಾಗಿದ್ದಾರೆ.
ಮತ್ತೊಂದೆಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್, ನಟಿ ಅಮೂಲ್ಯ ಸೇರಿದಂತೆ ಹಲವು ತಾರೆಯರನ್ನ ಎಲೆಕ್ಷನ್ ವೇಳೆಗೆ ಪ್ರಚಾರಕ್ಕೆ ಕರೆತರುವ ಪ್ರಯತ್ನ ಸಾಗಿದೆ.
ಇಷ್ಟೆಲ್ಲಾ ಬೆಳವಣಿಗೆ ಮಧ್ಯೆ ಕನ್ನಡದ ಖ್ಯಾತ ಖಳನಟ ರವಿಶಂಕರ್ ಮಂಡ್ಯ ಗ್ರಾಮ ಪಂಚಾಯಿತಿ ಅಖಾಡಕ್ಕೆ ಧುಮುಕಿದ್ದಾರೆ. ಅಷ್ಟೇ ಅಲ್ಲದೇ, ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನ ಕೂಡ ಪಡೆದುಕೊಂಡಿದ್ದಾರೆ. ಏನಿದು ರವಿಶಂಕರ್ ಬಗ್ಗೆ ಬ್ರೇಕಿಂಗ್ ನ್ಯೂಸ್ ಅಂತ ಮುಂದೆ ಓದಿ.....

ರಾಜಕಾರಣಿಯಾದ ರವಿಶಂಕರ್
ಕನ್ನಡದ ಸಿನಿಮಾಗಳಲ್ಲಿ ಮುಖ್ಯ ಖಳನಟನಾಗಿ ಅಬ್ಬರಿಸುತ್ತಿರುವ ರವಿಶಂಕರ್ ಈಗ ಮತ್ತೊಂದು ವಿಭಿನ್ನ ಪಾತ್ರವನ್ನ ನಿರ್ವಹಿಸಲಿದ್ದಾರೆ. ಅಪ್ಪ, ತಾತ, ಡಾನ್ ಹಾಗೂ ಖಡಕ್ ವಿಲನ್ ಆಗಿ ನೋಡಿದ್ದ ರವಿಶಂಕರ್ ಅವರನ್ನ ಈಗ ರಾಜಕಾರಣಿಯಾಗಿ ನೋಡಬಹುದು.

'ಅಯೋಗ್ಯ'ನಿಗೆ ಸಾಥ್ ಕೊಟ್ಟ ಆರುಮುಗ
ಸತೀಶ್ ನೀನಾಸಂ ಅಭಿನಯಿಸುತ್ತಿರುವ 'ಅಯೋಗ್ಯ' ಚಿತ್ರದಲ್ಲಿ ರವಿಶಂಕರ್ ರಾಜಕಾರಣಿಯಾಗಿ ಅಭಿನಯಿಸುತ್ತಿದ್ದಾರೆ. ಗ್ರಾಮೀಣ ಸೊಗಡಿನ ಕಥೆಯಲ್ಲಿ ಮಂಡ್ಯ ಗ್ರಾಮ ಪಂಚಾಯಿತಿಯ ಅಧ್ಯಕ್ಷನ ಪಾತ್ರದಲ್ಲಿ ರವಿಶಂಕರ್ ಮಿಂಚಲಿದ್ದಾರೆ.

ಅಧ್ಯಕ್ಷ ವರ್ಸಸ್ ಸದಸ್ಯ
ಈ ಚಿತ್ರದಲ್ಲಿ ಸತೀಶ್ ನೀನಾಸಂ ಗ್ರಾಮ ಪಂಚಾಯಿತಿ ಸದಸ್ಯನ ಪಾತ್ರ ನಿರ್ವಹಿಸುತ್ತಿದ್ದು, ಇದಕ್ಕೆ ವಿರುದ್ಧವಾಗಿ ರವಿಶಂಕರ್ ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿ ಬಣ್ಣ ಹಚ್ಚಿದ್ದಾರೆ. ಈಗಾಗಲೇ ರವಿಶಂಕರ್ ಅವರ ಫಸ್ಟ್ ಲುಕ್ ರಿವಿಲ್ ಆಗಿದ್ದು, ಬಚ್ಚೆಗೌಡ ಎಂಬ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಇನ್ನು ಮೊದಲ ಬಾರಿಗೆ ಸತೀಶ್ ನೀನಾಸಂ ಮತ್ತು ರವಿಶಂಕರ್ ಚಿತ್ರವೊಂದರಲ್ಲಿ ಮುಖಾಮುಖಿಯಾಗುತ್ತಿರುವುದು ವಿಶೇಷ.

'ಅಯೋಗ್ಯ' ಚಿತ್ರದ ವಿಶೇಷತೆ
ಅಂದ್ಹಾಗೆ, ಈ ಚಿತ್ರವನ್ನ ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಸತೀಶ್ ಗೆ ರಚಿತಾ ರಾಮ್ ಜೋಡಿಯಾಗಿದ್ದಾರೆ. ಚಂದ್ರಶೇಖರ್ ನಿರ್ಮಾಣ ಮಾಡಿದ್ದರೇ, ಅರ್ಜುನ್ ಜನ್ಯ ಹಾಡುಗಳನ್ನ ಕಂಪೋಸ್ ಮಾಡಲಿದ್ದಾರೆ. ಬಿರುಸಿನಿಂದ ಚಿತ್ರೀಕರಣ ಮಾಡುತ್ತಿರುವ ಚಿತ್ರತಂಡ ಆದಷ್ಟೂ ಬೇಗ ತೆರೆಗೆ ಬರುವ ಯೋಚನೆಯಲ್ಲಿದೆ.


Click it and Unblock the Notifications











