ಆದಿತ್ಯ-ರವಿ ಶ್ರೀವತ್ಸರಿಂದ 'ಡೆಡ್ಲಿ'ಯಲ್ಲದ ಸಿನಿಮಾ
ಹಾಗೆ ನೋಡಿದರೆ, ಆದಿತ್ಯ ಹಾಗೂ ರವಿ ಶ್ರೀವತ್ಸ ಜೋಡಿ ಸ್ಯಾಂಡಲ್ ವುಡ್ ನಲ್ಲಿ ಪ್ರಸಿದ್ಧವಾಗಿದ್ದೇ ಈ ಡೆಡ್ಲಿ ಸೋಮನ ಚಿತ್ರಗಳಿಂದ. ನಟ ಆದಿತ್ಯನ ಹೆಸರು ಕೇಳಿದರಂತೂ ಥಟ್ಟನೆ ನೆನಪಾಗುವುದು ಡೆಡ್ಲಿ ಸೋಮ ಎಂಬ ಚಿತ್ರಗಳೇ ಆಗಿವೆ. ಆ ಮಟ್ಟಿಗೆ ಇಬ್ಬರೂ ಡೆಡ್ಲಿ ಖ್ಯಾತಿಯನ್ನೇ ಹೊಂದಿದವರು, ನಂಬಿದವರು.
ಆದರೆ ಮುಂದೆ ಮಾಡಲಿರುವ ಚಿತ್ರ ಮಾತ್ರ ಭೂಗತ ಲೋಕವನ್ನು ಪ್ರತಿನಿಧಿಸುತ್ತಿಲ್ಲವಂತೆ. ಈ ಕುರಿತು ಸ್ಪಷ್ಟ ಅಭಿಪ್ರಾಯ ನಿರ್ದೇಶಕ ರವಿ ಶ್ರೀವತ್ಸ ಅವರಿಂದ ಬಂದಿದೆ. "ನಾನು ಮಾಡಲಿರುವ ಚಿತ್ರ ಭೂಗತ ಲೋಕದ ಕಥೆ ಹೊಂದಿಲ್ಲ. ಬದಲಿಗೆ ರೊಮಾನ್ಸ್, ಕಾಮಿಡಿ ಅದರಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ.
ಆದರೆ ಇದರಲ್ಲಿ ಸಾಹಸ ದೃಶ್ಯಗಳೇ ಇಲ್ಲವೆಂದಲ್ಲ. ಇದ್ದೇ ಇರುತ್ತವೆ. ಆದರೆ ಮಚ್ಚು-ಲಾಂಗುಗಳು ಇರುವುದಿಲ್ಲ, ಇದು ಹೊಡಿ-ಬಡಿ ಚಿತ್ರವಲ್ಲ" ಎಂದಿದ್ದಾರೆ ರವಿ ಶ್ರೀವತ್ಸ. ಇನ್ನೂ ಹೆಸರಿಡದ ಈ ಚಿತ್ರವನ್ನು ನಿರ್ಮಿಸಲು ರಾಜಶೇಖರ್ ಮುಂದಾಗಿದ್ದಾರೆ. ನಾಯಕಿ ಹಾಗೂ ಇತರ ತಾರಾಗಣದ ಆಯ್ಕೆ ಇನ್ನಷ್ಟೇ ಆಗಬೇಕಿದೆ.
ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕತ್ವದ 'ದಶಮುಖ' ಸೋತ ಮೇಲೆ ರವಿ ಶ್ರೀವತ್ಸರಿಂದ ಬರಲಿದೆ ಈ ಚಿತ್ರ. ಹಾಗೇ, 'ವಿಲನ್' ಸೋಲಿನಿಂದ ಇನ್ನೂ ಚೇತರಿಸಿಕೊಂಡಿರದ ಆದಿತ್ಯ ಸದ್ಯ 'ರಾಸ್ಕಲ್' ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಈ ಇಬ್ಬರೂ ಸೇರಿ ಮುಂದೆ ಹೊಸತನದ ಚಿತ್ರ ಮಾಡಲು ಮುಂದಾಗಿದ್ದಾರೆ. ಇಬ್ಬರೂ ಸೇರಿ ಅಕ್ಟೋಬರ್ ಹೊತ್ತಿಗೆ ಈ ಚಿತ್ರವನ್ನು ಪ್ರಾರಂಭಿಸಲಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications












