ಮೊದಲಿದ್ದ ವಿಷ್ಣುದಾದನ ಮನೆಯ ಹೆಸರೇನು? 'ಸಿಂಹದ ಮನೆ' ಬದಲು 'ವಲ್ಮೀಕ' ಅಂತಿಟ್ಟಿದ್ದೇಕೆ?
ಸಾಹಸ ಸಿಂಹ ವಿಷ್ಣುವರ್ಧನ್ ಬದುಕಿ ಬಾಳಿದ್ದ ಅದೇ ಜಾಗದಲ್ಲಿ ಹೊಸ ಮನೆ ನಿರ್ಮಾಣಗೊಂಡಿದೆ. ಇಂದು (ನವೆಂಬರ್ 27) ಹೊಸ ಮನೆಗೆ ಗೃಹಪ್ರವೇಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ಮುಖಂಡರು ಆಗಮಿಸಿ ಶುಭಕೋರಿದ್ರು.
ಕಳೆದ ಮೂರು ವರ್ಷಗಳಿಂದ ವಿಷ್ಣುವರ್ಧನ್ ಕನಸಿನಂತೆ ಹೊಸ ಮನೆಯನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದರು. ಭಾರತಿ ವಿಷ್ಣುವರ್ಧನ್, ಪುತ್ರಿ ಕೀರ್ತಿ ಹಾಗೂ ಅಳಿಯ ಅನಿರುದ್ಧ್ ಸೇರಿ ಈ ಮನೆಯನ್ನು ನಿರ್ಮಾಣ ಮಾಡಿದ್ದಾರೆ.
ಈಗ ವಿಷ್ಣುದಾದ ಹೊಸ ಮನೆಗೆ ಇಟ್ಟಿರುವ ಹೆಸರಿನ ಚರ್ಚೆ ಶುರುವಾಗಿದೆ. ಈ ಮನೆಗೆ 'ವಲ್ಮೀಕ' ಅಂತ ಹೆಸರಿಟ್ಟಿದ್ದೇಕೆ? ಹಳೆಯ ಮನೆಯ ಹೆಸರೇನು? ಅನ್ನೋ ಕುತೂಹಲ ಎಲ್ಲರನ್ನೂ ಮನೆಮಾಡಿದೆ. ಅದಕ್ಕೆ ಅನಿರುದ್ಧ್ ಹಾಗೂ ಪತ್ನಿ ಕೀರ್ತಿ ಅವರೇ ಉತ್ತರಿಸಿದ್ದಾರೆ.

ವಿಷ್ಣುವರ್ಧನ್ ಕನಸಿನಂತೆ ಹೊಸ ಮನೆ
ವಿಷ್ಣುವರ್ಧನ್ ಅಗಲುವ ಮುನ್ನವೇ ಹೊಸ ಮನೆಯನ್ನು ಕಟ್ಟಬೇಕು ಅಂತ ಆಸೆ ಪಟ್ಟಿದ್ದರು. ಆದರೆ, ಅಂದು ಸಾಧ್ಯವಾಗಿರಲಿಲ್ಲ. ಹೀಗಾಗಿ ಸುಮಾರು 14 ವರ್ಷಗಳ ಬಳಿಕ ಸಾಹಸ ಸಿಂಹ ಕಂಡ ಕನಸು ನನಸಾಗಿದೆ. "ಅಪ್ಪನವರ ಕನಸು ಇದಾಗಿತ್ತು. ಅವರು 2008ರಿಂದಾನೇ ಹೇಳುತ್ತಿದ್ದರು. ಹೊಸ ಮನೆ ಕಟ್ಟಬೇಕು ಅಂತ ಹೇಳುತ್ತಿದ್ದರು. ಅದು ಇವತ್ತು ನೆರವೇರಿದೆ. ಅವರೇ ಇದು ಮಾಡಿಸಿದ್ದು, ಇದು ನಿಮಿತ್ತ ಮಾತ್ರ. ಎಲ್ಲರೂ ಈ ಮನೆಯನ್ನು ಇಷ್ಟ ಪಡುತ್ತಿದ್ದಾರೆ. ಬಂದ ಗಣ್ಯರು ಹಾಗೂ ಅಭಿಮಾನಿಗಳು ಇಷ್ಟ ಪಡುತ್ತಿದ್ದಾರೆ. ಯಾಕಂದ್ರೆ ಇದನ್ನು ಅಪ್ಪನವರೇ ಮಾಡಿಸಿದ್ದಾರೆ." ಎಂದು ಅನಿರುದ್ಧ್ ಮಾಧ್ಯಮಗಳಿಗೆ ಹೇಳಿದ್ದಾರೆ.

ವಿಷ್ಣುದಾದನ ಹಳೆ ಮನೆಯ ಹೆಸರೇನು?
ಸಾಹಸ ಸಿಂಹ ವಿಷ್ಣುವರ್ಧನ್ ಹೊಸ ಮನೆಗೆ 'ವಲ್ಮೀಕ' ಅಂತ ಹೆಸರಿಟ್ಟಿದ್ದಾರೆ. ಸಂಸ್ಕೃತದಲ್ಲಿ ವಲ್ಮೀಕ ಅಂದರೆ 'ಹುತ್ತ' ಎಂದು ಅರ್ಥ. ವಿಷ್ಣುವರ್ಧನ್ 'ನಾಗರಹಾವು'ದ ಬಳಿಕ ಇದೇ ಜಾಗದಲ್ಲಿ ಮನೆಯನ್ನು ಕಟ್ಟಿಸಿದ್ದರು. ಆಗಲೂ ಇದೇ ಹೆಸರನ್ನು ಇಟ್ಟಿದ್ದರಂತೆ. ಹೀಗಾಗಿ ಹೊಸ ಮನೆಗೂ ಅದೇ ಹೆಸರು ಇಟ್ಟಿದ್ದಾರೆ. "ವಲ್ಮೀಕ ಅನ್ನೋದು ಮೊದಲು ಇದ್ದ ಮನೆಗೂ ಇಟ್ಟಿದ್ದರು. ವಲ್ಮೀಕ ಅಂದರೆ ಹುತ್ತ. ನಾಗರಹಾವು ಸಿನಿಮಾ ಬಿಡುಗಡೆಯಾದ ಮೇಲೆ ಈ ಮನೆಯನ್ನು ಕಟ್ಟಿದ್ದರು. ಹಾಗಾಗಿ ವಲ್ಮೀಕ ಅಂತ ಹೆಸರಿಟ್ಟಿದ್ದರು. ಈ ಹೊಸ ಮನೆಗೂ ಅದೇ ಹೆಸರನ್ನೇ ಇಟ್ಟಿದ್ದೇವೆ." ಎನ್ನುತ್ತಾರೆ ಅನಿರುದ್ದ್.

ಹೊಸ ಮನೆಯೊಳಗೆ ಏನೇನಿದೆ?
"ಅವರು ಏನೇನು ಆಸೆ ಪಟ್ಟಿದ್ದರೋ ಅದೆಲ್ಲವೂ ಇದೆ. ಅವರಿಗೆ ಹಸಿರನ್ನು ಕಂಡರೆ ತುಂಬಾನೇ ಇಷ್ಟ ಇತ್ತು. ಗಿಡಗಳನ್ನು ನೋಡಬೇಕು. ಹೂವುಗಳನ್ನು ನೋಡಬೇಕು ಅಂತ ತುಂಬಾನೇ ಇಷ್ಟವಿತ್ತು. ಹಾಗಾಗಿ ಆ ತೋಟವನ್ನು ಹಾಗೇ ಉಳಿಸಿಕೊಂಡಿದ್ದೇವೆ. ಗಿಡ-ಮರಗಳು ಎಲ್ಲವೂ ಹಾಗೇ ಇದೆ. ಅವರು ಎಲ್ಲಿ ತುಂಬಾ ಹೊತ್ತು ಕೂರುತ್ತಿದ್ದರೋ ಆ ಏರಿಯಾವನ್ನೂ ಹಾಗೇ ಇಟ್ಟುಕೊಂಡಿದ್ದೇವೆ. ಹಾಲ್ ಆಗಿರಬಹುದು. ಅಥವಾ ಮಲಗುವ ಕೋಣೆಗಳಾಗಿರಬಹುದು. ತುಂಬಾನೇ ದೊಡ್ಡದಾಗಿರಬೇಕು ಎಂದು ಆಸೆ ಪಟ್ಟಿದ್ದರು. ಅವರು ಹೋಮ್ ಥಿಯೇಟರ್ ಅನ್ನೂ ತುಂಬಾನೇ ಆಸೆ ಪಡುತ್ತಿದ್ದರು. ಅವರು ಹಾಡಲು ಇಷ್ಟ ಪಡುತ್ತಿದ್ದರು. ಹಾಗಾಗಿ ಅದನ್ನೂ ಮಾಡಿದ್ದೇವೆ." ಎನ್ನುತ್ತಾರೆ.

ವಿಷ್ಣು ಸ್ಮಾರಕ ಲೋಕಾರ್ಪಣೆ ಯಾವಾಗ?
ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ಉದ್ಘಾಟನೆಗೆ ಮುಹೂರ್ತ ಇನ್ನೂ ಕೂಡಿ ಬಂದಿಲ್ಲ. ಈಗಾಗಲೇ ಸ್ಮಾರಕ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಡಿಸೆಂಬರ್ 18ಕ್ಕೆ ಉದ್ಘಾಟನೆ ಆಗಲಿದೆ ಅನ್ನೋ ಮಾತು ಕೇಳಿ ಬಂದಿತ್ತು. ಇದೇ ವಿಚಾರವಾಗಿ ಇಂದು ಮನೆಗೆ ಆಗಮಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರ ಚರ್ಚೆ ಮಾಡಲಾಗಿದೆ. ಒಂದು ದಿನದ ಕಾಲಾವಕಾಶ ಕೇಳಿದ್ದು, ಸ್ಮಾರಕ ಉದ್ಘಾಟನೆ ಯಾವಾಗ ಮಾಡಬೇಕು ಅನ್ನೋದನ್ನು ತಿಳಿಸಲಿದ್ದಾರೆ. ಆ ಬಳಿಕ ಅಧಿಕೃತ ದಿನಾಂಕ ಹೊರಬೀಳಲಿದೆ.


Click it and Unblock the Notifications











