'ಕಠಾರಿವೀರ' ಉಪೇಂದ್ರ ವಿಶೇಷ ಸಂದರ್ಶನ

ಪ್ರ. ಉಪೇಂದ್ರ ಸ್ಯಾಂಡಲ್ ವುಡ್ ನಲ್ಲಿ ಟ್ರೆಂಡ್ ಸೆಟ್ಟರ್ ಎನ್ನುವ ಮಾತಿದೆ, 3ಡಿ ತಂತ್ರಜ್ಞಾನದ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆಯಲು ಹೊರಟಿದ್ದೀರಿ. ಈ 3ಡಿ ಚಿತ್ರದ ಕಾನ್ಸೆಪ್ಟ್ ಹೇಗೆ ಬಂತು?
ಉಪ್ಪಿ: ಮೊದಲು 3ಡಿ ಕಾನ್ಸೆಪ್ಟ್ ಬಗ್ಗೆ ಐಡಿಯಾ ಇರಲಿಲ್ಲ. ಹೈದರಾಬಾದ್ ನಲ್ಲಿರುವ ರಾಮೋಜಿ ಫಿಲಂ ಸಿಟಿಯ ಅದ್ದೂರಿ ಸೆಟ್ ಈ ಬಗ್ಗೆ ಆಲೋಚಿಸುವಂತೆ ಮಾಡಿತು. 3ಡಿ ಬಗ್ಗೆ ನಮಗೆ ಮೊದಲು ಐಡಿಯಾ ಕೊಟ್ಟಿದ್ದು ಕ್ಯಾಮಾರಮನ್ ವೇಣು. ವೇಣು ಅವರ ಸಲಹೆಗೆ ನಿರ್ಮಾಪಕ ಮುನಿರತ್ನ ಮತ್ತು ನಿರ್ದೇಶಕ ಸುರೇಶ ಕೃಷ್ಣ ಸಕಾರಾತ್ಮಕವಾಗಿ ಸ್ಪಂದಿಸಿದರು.
ಪ್ರ: 3ಡಿ, ಅತ್ಯಾಧುನಿಕ ಗ್ರಾಫಿಕ್ಸ್ ಬಗ್ಗೆ ದಕ್ಷಿಣ ಭಾರತ ಚಿತ್ರರಂಗ ಇತ್ತೀಚಿನ ದಿನಗಳಲ್ಲಿ ಹೆಚ್ಚು ಗಮನ ಹರಿಸುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ?
ಉಪ್ಪಿ: ಜನ ಚೇಂಜ್ ಕೇಳ್ತಾ ಇದ್ದಾರೆ. 3ಡಿ ತಂತ್ರಜ್ಞಾನದ ಮೇಲೆ ಕೆಲಸ ಮಾಡುವುದು ಬಹಳ ಕಷ್ಟ. ಥಿಯೇಟರ್ ಗಳಲ್ಲಿ 3ಡಿ ಪ್ರದರ್ಶಿಸುವ ಸೌಕರ್ಯ ಇರಬೇಕು. ಕೆಲ ಸಿನಿಮಾ ಮಂದಿರಗಳಿಗೆ ಈ ತಂತ್ರಜ್ಞಾನ ಅಳವಡಿಸಿಕೊಳ್ಳಲು ನಿರ್ಮಾಪಕ ಮುನಿರತ್ನ ತಮ್ಮ ಜೇಬಿನಿಂದ ಹಣ ನೀಡಿ ಸಹಾಯ ಮಾಡಿದ್ದಾರೆ.
ಪ್ರ: ಕಠಾರಿವೀರ ಚಿತ್ರದ ಪ್ರೋಮೋ ನೋಡಿದರೆ ಇದು ಮತ್ತೊಂದು ಹಾಸ್ಯ ಪ್ರಧಾನ ಚಿತ್ರ ಎಂದೆನಿಸುತ್ತದೆ. ಇದನ್ನು ರಕ್ತ ಕಣ್ಣೀರು ಚಿತ್ರದ ಮುಂದುವರಿದ ಭಾಗ ಎನ್ನಬಹುದೇ?
ಉಪ್ಪಿ: ರಕ್ತ ಕಣ್ಣೀರು ಚಿತ್ರದಷ್ಟು ಈ ಚಿತ್ರ ಗಂಭೀರವಾಗಿಲ್ಲ. ಇದೊಂದು ಕಾಮಿಡಿ ಚಿತ್ರ ಅನ್ನೋಕೆ ಅಡ್ಡಿಯಿಲ್ಲ. ಕ್ಲೈಮ್ಯಾಕ್ಸ್ ನಲ್ಲಿ ಒಂದು ಸಂದೇಶ ನೀಡಿದ್ದೇವೆ.
ಪ್ರ: ಕಠಾರಿವೀರ ಚಿತ್ರದಲ್ಲಿ ನಿಮ್ಮ ಪಾತ್ರದ ಬಗ್ಗೆ?
ಉಪ್ಪಿ: ದ್ವಿಪಾತ್ರದಲ್ಲಿ ಕಾಣಿಸುತ್ತಿದ್ದೇನೆ. ರಕ್ತ ಕಣ್ಣೀರು ಚಿತ್ರದಲ್ಲಿ ದುರಂತ ಪಾತ್ರದಲ್ಲಿ ಸಾಯುವ ಮೋಹನ್ ಮತ್ತು ಅವನ ಮಗನ ಪಾತ್ರದಲ್ಲಿ. ನರಕದಲ್ಲಿ ಇಬ್ಬರೂ ಮುಖಾಮುಖಿಯಾಗುತ್ತಾರೆ.
ಪ್ರ: ಉಪೇಂದ್ರ ಅವರ ಚಿತ್ರವೆಂದರೆ ಹೆಚ್ಚಾಗಿ ಡೈಲಾಗ್ ಪ್ರಧಾನ ಚಿತ್ರ. ನಿಮ್ಮ ಇಮೇಜ್ ಗೆ ತಕ್ಕಂತೆ ಚಿತ್ರಕಥೆ ರೂಪಿಸಲಾಗಿದೆಯೇ?
ಉಪ್ಪಿ: ಎಸ್. ಚಿತ್ರದಲ್ಲಿ ಡೈಲಾಗ್ ಜೀವಾಳ. ಅಭಿಮಾನಿಗಳು ಇದನ್ನು ಇಷ್ಟ ಪಡುತ್ತಾರೆ ಎನ್ನುವ ನಂಬಿಕೆಯಲ್ಲಿದ್ದೇನೆ.
ಪ್ರ: ಗೌರಮ್ಮ ಚಿತ್ರದ ನಂತರ ರಮ್ಯಾ ಜೊತೆ ಇದು ನಿಮ್ಮ ಎರಡನೇ ಚಿತ್ರ. ರಮ್ಯಾ ಬಗ್ಗೆ ಸ್ವಲ್ಪ ಹೇಳಿ.
ಉಪ್ಪಿ: ಈ ಚಿತ್ರದಲ್ಲಿ ರಮ್ಯಾ ಬಹಳ ಸುಂದರವಾಗಿ ಕಾಣಿಸಿದ್ದಾರೆ. ಅವರೊಬ್ಬರು ಪ್ರತಿಭಾನ್ವಿತ ನಟಿ.
ಪ್ರ: ಅಂಬರೀಷ್ ಮತ್ತು ದೊಡ್ಡಣ್ಣ ಬಗ್ಗೆ?
ಉಪ್ಪಿ: ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ. ಯಮಧರ್ಮ ಮತ್ತು ಚಿತ್ರಗುಪ್ತನ ಪಾತ್ರದಲ್ಲಿ ನಟಿಸಿದ್ದಾರೆ. ಎರಡೂ ಪಾತ್ರ ಇಬ್ಬರಿಗೂ ಚೆನ್ನಾಗಿ ಒಗ್ಗುತ್ತೆ.
ಪ್ರ: ಮುತ್ತಪ್ಪ ರೈ ರೋಲ್ ಬಗ್ಗೆ?
ಉಪ್ಪಿ: ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿಗೆ ತಿಳಿಯಬೇಕಿದ್ದರೆ ಚಿತ್ರ ನೋಡಿ.
ಪ್ರ: ನಿರ್ದೇಶಕರ ಬಗ್ಗೆ ಮತ್ತು ನಿರ್ದೇಶನದಲ್ಲಿ ಕೈಯಾಡಿಸಿದ್ದೀರಾ?
ಉಪ್ಪಿ: ಸುರೇಶ್ ಕೃಷ್ಣ ಗ್ರೇಟ್ ಡೈರೆಕ್ಟರ್. ಅವರು, ಜನಾರ್ಧನ ಮಹರ್ಷಿ ಮತ್ತು ಮುನಿರತ್ನ ಡೈಲಾಗ್, ಚಿತ್ರಕಥೆ ಹಣೆದಿದ್ದಾರೆ. ನಾನು ಕೆಲವೊಂದು ಸಲಹೆ ನೀಡಿದ್ದೇನೆ.
ಪ್ರ: ಕೊನೆಯದಾಗಿ ಕನ್ನಡಿಗರಿಗೆ ಮತ್ತು ನಿಮ್ಮ ಅಭಿಮಾನಿಗಳಿಗೆ ಏನು ಹೇಳಲು ಬಯಸುತ್ತೀರಿ?
ಉಪ್ಪಿ: ಕನ್ನಡದಲ್ಲಿ ಇದೊಂದು ವಿನೂತನ ಪ್ರಯೋಗ. ನಿಮಗೆ ಚಿತ್ರ ಎಲ್ಲೂ ಬೋರ್ ಹೊಡೆಯೋಲ್ಲಾ. ಚಿತ್ರಮಂದಿರಕ್ಕೆ ಕುಟುಂಬ ಸಮೇತ ಬಂದು ಸಿನಿಮಾ ನೋಡಿ. ನಿಮ್ಮ ಪ್ರೀತಿ, ಅಭಿಮಾನವೇ ನಮಗೆ ಶ್ರೀರಕ್ಷೆ. ಕನ್ನಡ ಚಿತ್ರವನ್ನು ಮತ್ತು ಚಿತ್ರರಂಗವನ್ನು ಬೆಳೆಸಿ..
ಪ್ರ: ಕಠಾರಿವೀರ ಚಿತ್ರಕ್ಕೆ ಒಳ್ಳೆದಾಗಲಿ. ಆಲ್ ದಿ ಬೆಸ್ಟ್..
ಉಪ್ಪಿ: ಥ್ಯಾಂಕ್ಸ್


Click it and Unblock the Notifications











