ನಟ ಸುಶೀಲ್ ಗೌಡ ಆತ್ಮಹತ್ಯೆಯ ನಿರ್ಧಾರಕ್ಕೆ ಕಾರಣವೇನು?
ಇನ್ನೂ ಬದುಕಿನ ಹಾದಿಯಲ್ಲಿ ಯಶಸ್ಸಿನ ಮುಖ ನೋಡಲು ಆರಂಭಿಸಿದ್ದ ಸುಶೀಲ್ ಗೌಡ ಅರಳುವ ಮೊದಲೇ ತಮ್ಮ ಜೀವವನ್ನು ಇಲ್ಲವಾಗಿಸಿದ್ದಾರೆ. ಜಿಮ್ನಲ್ಲಿ ಗಂಟೆಗಟ್ಟಲೆ ಬೆವರು ಹರಿಸಿ ಸದೃಢ ದೇಹ ಬೆಳೆಸಿಕೊಂಡಿದ್ದ ಅವರ ಮನಸು ಮಾತ್ರ ದೇಹದಷ್ಟು ಗಟ್ಟಿಯಾಗಿರಲಿಲ್ಲ.
Recommended Video
ಕೊರೊನಾ ವೈರಸ್ ಬಂದವರೆಲ್ಲ ಸಾಯುವುದಿಲ್ಲ. ದೇಹದಲ್ಲಿ ಶಕ್ತಿ ಮಾತ್ರವಲ್ಲ, ಮನಸು ಗಟ್ಟಿಯಾಗಿದ್ದರೆ ಏನನ್ನೂ ಬೇಕಾದರೂ ಗೆಲ್ಲಬಹುದು ಎಂದು ಇತ್ತೀಚೆಗೆ ಕೊರೊನಾ ವೈರಸ್ ಗೆದ್ದುಬಂದ ಚಿತ್ರದುರ್ಗದ 96 ವರ್ಷ ಹೇಳಿರುವ ಮಾತುಗಳು ವೈರಲ್ ಆಗುತ್ತಿದೆ. ಹೀಗಿರುವಾಗ ಬದುಕಿನ ಸವಾಲುಗಳನ್ನು ಎದುರಿಸುವುದು ಇಷ್ಟು ಕಷ್ಟವೇ? ಸುಶೀಲ್ ಗೌಡ ಸಾವಿನ ಬಳಿಕ ಚರ್ಚೆಯಾಗುತ್ತಿರುವುದು ಇದೇ ಸಂಗತಿ. ಅಷ್ಟು ಕಟ್ಟುಮಸ್ತಾಗಿ ದೇಹವನ್ನು ದಂಡಿಸಿ ದೃಢವಾಗಿಸಿಕೊಂಡಿದ್ದ ಸುಶೀಲ್, ಮನಸನ್ನು ಏಕೆ ಹಾಗೆ ದೃಢವಾಗಿಸಿಕೊಂಡಿರಲಿಲ್ಲ ಎನ್ನುವುದು ಪ್ರಶ್ನೆಯಾಗಿ ಉಳಿದಿದೆ. ಮುಂದೆ ಓದಿ...

ಮಂಡ್ಯ ಮೂಲದವರು
ಮಂಡ್ಯದ ವಿವಿ ನಗರದ ಮೂಲದವರಾದ ಸುಶೀಲ್, ಬೆಂಗಳೂರಿನಲ್ಲಿ ನೆಲೆಸಿದ್ದರು. ಇಲ್ಲಿ ಧಾರಾವಾಹಿ ನಟನೆ, ಸಿನಿಮಾ ಆಸಕ್ತಿಯ ಕ್ಷೇತ್ರದಲ್ಲಿ ಅವಕಾಶಗಳನ್ನು ಕೂಡ ಪಡೆದುಕೊಂಡಿದ್ದರು. ನಟ ದುನಿಯಾ ವಿಜಯ್ ಹೇಳಿರುವಂತೆ ಅವರಿಗೆ ಹೀರೋ ಆಗಿ ಬೆಳೆಯುವ ಅವಕಾಶಗಳಿತ್ತು. ಬಹುಶಃ 'ಸಲಗ' ಚಿತ್ರ ಬಿಡುಗಡೆಯಾಗಿದ್ದರೆ ಅವರಿಗೆ ಮತ್ತಷ್ಟು ಅವಕಾಶಗಳು ಸಿಗುತ್ತಿದ್ದವು.

ಜಿಮ್ನಲ್ಲಿ ದೇಹ ದಂಡಿಸುತ್ತಿದ್ದರು
ಸುಶೀಲ್ ಮುಖ್ಯವಾಗಿ ಕೆಲಸ ಮಾಡುತ್ತಿದ್ದದ್ದು ಜಿಮ್ ಟ್ರೇನರ್ ಆಗಿ. ಜಯರಾಮ್ ಕಾರ್ತಿಕ್ ಸೇರಿದಂತೆ ಅನೇಕ ತಾರೆಯರು ಅವರ ಬಳಿ ಕಸರತ್ತಿನ ತಂತ್ರ ಕಲಿತಿದ್ದಾರೆ. ಜೆ.ಕೆ. ಹೇಳುವಂತೆ ಸುಶೀಲ್ ಬಹಳ ಪರಿಶ್ರಮಿ. ದೇಹದ ಸೌಂದರ್ಯದ ಬಗ್ಗೆ ಕಾಳಜಿಯುಳ್ಳವರು. ಅದಕ್ಕಾಗಿ ಗಂಟೆಗಟ್ಟಲೆ ವರ್ಕೌಟ್ ಮಾಡುತ್ತಿದ್ದರು. ಸುಶೀಲ್ ಅವರ ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್ಗಳೇ ಅವರು ಎಂತಹ ಫಿಟ್ನೆಸ್ ಫ್ರೀಕ್ ಎನ್ನುವುದನ್ನು ಸಾರುತ್ತವೆ. ಆದರೆ ಅವರಲ್ಲಿ ಬೇಸರ, ಹತಾಶೆ ಮೂಡಲಾರಂಭಿಸಿದ್ದು ಲಾಕ್ ಡೌನ್ ಬಳಿಕ.

ಜೀವನ ಪ್ರೀತಿಯನ್ನೇಕೆ ಮರೆತರು?
ಪ್ರೀತಿಸಿ ಮದುವೆಯಾಗಿದ್ದ ಸುಶೀಲ್, ಜೀವನ ಪ್ರೀತಿಯನ್ನು ಮರೆತಿದ್ದು ಹೇಗೆ? ಎಂಬ ಬೇಸರ ಮೂಡುತ್ತದೆ. ಅವರ ಲೋಟಸ್ ಫಿಟ್ನೆಸ್ ಕೇಂದ್ರಕ್ಕೆ ಒಮ್ಮೆ ಅವರ ತಂದೆ ಕೂಡ ಭೇಟಿ ನೀಡಿದ್ದರು. ಆ ಖುಷಿಯನ್ನು ಸುಶೀಲ್ ಹಂಚಿಕೊಂಡಿದ್ದರು. ಲಾಕ್ ಡೌನ್ ಬಳಿಕ ಜಿಮ್ಗಳು ಕ್ಲೋಸ್ ಮಾಡಬೇಕಿದ್ದರಿಂದ ಸುಶೀಲ್ ಮಾನಸಿಕವಾಗಿ ಕುಗ್ಗತೊಡಗಿದರು ಎನ್ನಲಾಗಿದೆ. ಸದಾ ಜಿಮ್ನಲ್ಲಿ ವರ್ಕೌಟ್ ಮಾಡುವವರು ಅದಕ್ಕೆ ವಿಪರೀತ ಅಂಟಿಕೊಳ್ಳುತ್ತಾರೆ. ನಮಗೆ ಇಷ್ಟವಾದ ಕೆಲಸವನ್ನು, ಜನರನ್ನು ಕಳೆದುಕೊಂಡಾಗ ಆಗುವ ಅನುಭವ ಅವರಿಗಾಗಿದೆ.

ಗೆಳೆಯರ ಬಳಿ ಹೇಳಿಕೊಂಡಿದ್ದರು
ಬೆಂಗಳೂರಿನಲ್ಲಿ ಇರಲಾಗದೆ ಅವರು ಹುಟ್ಟೂರಿಗೆ ಮರಳಿದ್ದಾರೆ. ಅಲ್ಲಿ ಇದ್ದಾಗ ಅವರಿಗೆ ಬೆಂಗಳೂರು ಮತ್ತು ಜಿಮ್ ಮತ್ತಷ್ಟು ಕಾಡತೊಡಗಿತ್ತು ಎನ್ನಲಾಗಿದೆ. ನಾಲ್ಕು ತಿಂಗಳಿನಿಂದ ಕೆಲಸವಿಲ್ಲದೆ ಅವರು ಹತಾಶರಾಗಿದ್ದರು. ಹದಿನೈದು ದಿನಗಳ ಹಿಂದಷ್ಟೇ ಗೆಳೆಯರ ಬಳಿ ಅದನ್ನು ಹೇಳಿಕೊಂಡಿದ್ದರು. ಎಲ್ಲವೂ ಓಪನ್ ಆಗುತ್ತಿದೆ. ಆದರೆ ಜಿಮ್ ಓಪನ್ ಮಾಡಲು ಮಾತ್ರ ಅವಕಾಶ ನೀಡುತ್ತಿಲ್ಲ. ಸಿನಿಮಾಗಳ ಅವಕಾಶವೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು ಎಂಬುದಾಗಿ ಅವರ ಸ್ನೇಹಿತ ದರ್ಶನ್ ಹೇಳಿದ್ದಾರೆ.

ಆರ್ಥಿಕ ಸಂಕಷ್ಟದಿಂದ ಖಿನ್ನತೆ?
ಜಿಮ್ ಟ್ರೇನಿಂಗ್ಅನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದ ಅವರು, ಬೇರೆ ಇತರೆ ಚಟುವಟಿಕೆಗಳಿಗೆ ಸರ್ಕಾರ ಅನುಮತಿ ನೀಡಿದ್ದರೂ ಜಿಮ್ ತೆರೆಯಲು ಅವಕಾಶ ನೀಡದೆ ಇರುವುದರಿಂದ ದಿನೇ ದಿನೇ ಖಿನ್ನತೆಗೆ ಒಳಗಾಗತೊಡಗಿದ್ದರು ಎನ್ನಲಾಗಿದೆ. ಆರ್ಥಿಕ ಸಂಕಷ್ಟ ಅವರಲ್ಲಿ ದುಗುಡ ಮೂಡಿಸತೊಡಗಿತ್ತು. ಸ್ನೇಹಿತರು ಧೈರ್ಯ ತುಂಬಿದ್ದರೂ ಅದು ಅವರಲ್ಲಿ ಮಾನಸಿಕ ಶಕ್ತಿ ನೀಡಲು ಸಾಕಾಗಿರಲಿಲ್ಲ. ಮೂರು ದಿನಗಳ ಹಿಂದಷ್ಟೇ ಸುಶೀಲ್ ನಾಪತ್ತೆಯಾಗಿದ್ದರು. ಮನೆಯವರು, ಸ್ನೇಹಿತರು ಎಲ್ಲಾ ಕಡೆ ಹುಡುಕಿದ್ದರೂ ಪ್ರಯೋಜನವಾಗಲಿಲ್ಲ.

ಪಾಳುಬಿದ್ದ ಮನೆಯಲ್ಲಿ ಆತ್ಮಹತ್ಯೆ
ಮಂಡ್ಯದ ಇಂಡವಾಳು ಗ್ರಾಮದಲ್ಲಿ ಸ್ನೇಹಿತರ ಪಾಳುಬಿದ್ದಿದ್ದ ಮನೆಗೆ ಹೋಗಿದ್ದ ಅವರು ಅಲ್ಲಿಯೇ ನೇಣು ಹಾಕಿಕೊಂಡಿದ್ದಾರೆ. ಮನೆಯ ಸಮೀಪ ಎರಡು ದಿನದಿಂದ ಬೈಕ್ ನಿಂತಿದ್ದನ್ನು ನೋಡಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅವರು ಬಂದು ಪರಿಶೀಲಿಸಿದಾಗ ಸುಶೀಲ್ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.

ಹೆಸರು ಮಾಡಲು ಇನ್ನೂ ಅವಕಾಶವಿತ್ತು
ಸುಶೀಲ್ ಅಂತಃಪುರ, ರಾಧಾ ರಮಣ, ಚಂದನದ ಗೊಂಬೆ ಧಾರಾವಾಹಿಗಳಲ್ಲಿ ನಟಿಸಿದ್ದರು. 'ಕಮರೊಟ್ಟು ಚೆಕ್ ಪೋಸ್ಟ್' ಎಂಬ ಚಿತ್ರದಲ್ಲಿ ಅಭಿನಯಿಸಿದ್ದರು. ಇತ್ತೀಚೆಗೆ ದುನಿಯಾ ವಿಜಯ್ ನಿರ್ದೇಶನದ 'ಸಲಗ' ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪುಟ್ಟ ಪಾತ್ರಕ್ಕೂ ಬಣ್ಣ ಹಚ್ಚಿದ್ದರು. ಸುಶೀಲ್ ಈಗಷ್ಟೇ ಹೆಸರು ಮಾಡುತ್ತಿದ್ದರು. ಅವರಿಗೆ ಬೆಳೆಯಲು ಸಾಕಷ್ಟು ಸಮಯಾವಕಾಶವಿತ್ತು. ಆದರೂ ಸಾಧ್ಯತೆಗಳ ಬಗ್ಗೆ ಚಿಂತಿಸದೆ ಹೀಗೇಕೆ ದುಡುಕಿನ ನಿರ್ಧಾರ ತೆಗೆದುಕೊಂಡರು ಎಂದು ಅನೇಕರು ಪ್ರಶ್ನಿಸಿದ್ದಾರೆ. ಅವುಗಳಿಗೆ ಉತ್ತರ ನೀಡಲು ಸುಶೀಲ್ ಇಲ್ಲ... ಸುಶೀಲ್ ಬೇರೆ ಸಮಸ್ಯೆಗಳನ್ನು ಎದುರಿಸುತ್ತಿದ್ದರೇ? ಅವರ ಆತ್ಮಹತ್ಯೆಗೆ ಖಿನ್ನತೆಯೇ ಕಾರಣವೇ? ಮುಂತಾದವು ಪೊಲೀಸರ ತನಿಖೆಯಿಂದ ಹೊರಬರಬೇಕಿದೆ.

ನಟ ಚಂದನ್ಗೆ ಆತ್ಮೀಯ
ಕಿರುತೆರೆ ನಟ ಚಂದನ್ ಕುಮಾರ್ ಮತ್ತು ಸುಶೀಲ್ ಗೌಡ ಒಂದೇ ಕಾಲೇಜಿನಲ್ಲಿ ಓದಿದವರು. ಎಂಜಿನಿಯರಿಂಗ್ನಲ್ಲಿ ಜೂನಿಯರ್. ಚಂದನ್ ಅವರ ಆತ್ಮೀಯ ಸ್ನೇಹಿತನ ತಮ್ಮ. 15 ವರ್ಷದಿಂದ ಪರಿಚಯ. ಕೆಲವು ವರ್ಷಗಳ ಹಿಂದೆ ಅಪಘಾತದಿಂದ ದವಡೆ ಮತ್ತು ಮೂಳೆ ಮುರಿದುಕೊಂಡಿದ್ದ ಸುಶೀಲ್, ಅದರಿಂದ ಚೇತರಿಸಿಕೊಂಡು ಮತ್ತೆ ಜಿಮ್ಗೆ ಹೋಗಿ ದೇಹವನ್ನು ಹುರಿಗಟ್ಟಿಸಿಕೊಳ್ಳುವಷ್ಟು ಗಟ್ಟಿಯಾಗಿದದ್ರು. ಈ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದರು ಎಂಬ ಸಂಗತಿಯನ್ನು ಚಂದನ್ ಹಂಚಿಕೊಂಡಿದ್ದಾರೆ.


Click it and Unblock the Notifications











