ಏ.14ರಂದು ಸಿಂಗಪುರದಿಂದ ಮಂಡ್ಯಕ್ಕೆ ಅಂಬಿ ರಿಟರ್ನ್
ಕಲಿಯುಗ ಕರ್ಣ, ರೆಬೆಲ್ ಸ್ಟಾರ್ ಅಂಬರೀಶ್ ಆಗಮನಕ್ಕೆ ಅಭಿಮಾನಿಗಳು ಕಾತುರದಿಂದ ನಿರೀಕ್ಷಿಸುತ್ತಿದ್ದಾರೆ. ಅವರ ಕಾತುರ, ಕುತೂಹಲಕ್ಕೆ ಏಪ್ರಿಲ್ 14ರಂದು ತೆರೆಬೀಳಲಿದೆ. ಕಾರಣ ಅಂದು ಸಿಂಗಪುರದಿಂದ ಅಂಬರೀಶ್ ಅವರು ಸ್ವದೇಶಕ್ಕೆ ಮರಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಮಂಡ್ಯದ ಗಂಡಿಗೆ ಮಂಡ್ಯದಲ್ಲಿ ಅದ್ದೂರಿ ಸ್ವಾಗತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮಂಡ್ಯ ಜಿಲ್ಲಾ ಕಾಂಗ್ರೆಸ್ ವತಿಯಿಂದ ಈ ಅದ್ದೂರಿ ಸ್ವಾಗತ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ನಡೆಯುತ್ತಿವೆ ಎಂದು ಜಿಲ್ಲಾ ಕಾಂಗ್ರೆಸ್ ಖಜಾಂಚಿ ಅಮರಾವತಿ ಚಂದ್ರಶೇಖರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. [ರಾಯಲ್ ಸಿನಿಮಾ 'ರಾಜವಂಶ'ದಲ್ಲಿ ಅಂಬರೀಶ್?]
ಸಿಂಗಪುರದಲ್ಲಿ ಚಿಕಿತ್ಸೆ ಪಡೆದ ಬಳಿಕ ಅಂಬರೀಶ್ ಅವರು ವಿಶ್ರಾಂತಿಗಾಗಿ ಮಲೇಷ್ಯಾದಲ್ಲಿದ್ದಾರೆ. ಅಲ್ಲಿಂದಲೇ ತಮ್ಮ ಅಭಿಮಾನಿಗಳಿಗೆ ವಿಡಿಯೋ ಸಂದೇಶ ಕಳುಹಿಸಿದ್ದರು. ಇದೀಗ ಅವರು ನೇರವಾಗಿ ಬೆಂಗಳೂರಿಗೆ ಬದಲಾಗಿ ಮಂಡ್ಯಕ್ಕೆ ಬಂದಿಳಿಯಲಿದ್ದಾರೆ.ಸ್ವಾಗತ ಕಾರ್ಯಕ್ರಮದಲ್ಲಿ ಮಂಡ್ಯ ಹಾಲಿ ಸಂಸದೆ ರಮ್ಯಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹಾಗೂ ಮಂಡ್ಯ ಜಿಲ್ಲೆಯ ಶಾಸಕರು ಭಾಗಿಯಾಗಲಿದ್ದಾರೆ ಎಂದು ಚಂದ್ರಶೇಖರ್ ತಿಳಿಸಿದ್ದಾರೆ.
ಶ್ವಾಸಕೋಶದ ಸೋಂಕಿನ ಚಿಕಿತ್ಸೆಗಾಗಿ ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ಅಂಬಿ ದಾಖಾಲಾಗಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿದ್ದಾರೆ. ಇದಕ್ಕೂ ಮೊದಲು ಅವರು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಅಭಿಮಾನಿಗಳು ಹೋಮ ಹವನ ವಿಶೇಷ ಪೂಜೆಗಳನ್ನು ಮಾಡಿ ತಮ್ಮ ನೆಚ್ಚಿನ ನಾಯಕ ಬೇಗ ಗುಣಮುಖರಾಗಲಿ ಎಂದು ಬಯಸಿದ್ದರು. (ಏಜೆನ್ಸೀಸ್)


Click it and Unblock the Notifications












