ಚುನಾವಣಾ ಕಣಕ್ಕೆ ಮಂಡ್ಯದ ಗಂಡು ಅಂಬರೀಶ್

ಈಗ ಅವರ ಮುಂದಿರುವ ಆಯ್ಕೆ ಮಂಡ್ಯ ಅಥವಾ ಶ್ರೀರಂಗಪಟ್ಟಣ. ಈ ಎರಡು ಕ್ಷೇತ್ರಗಳಲ್ಲಿ ಅವರು ಎಲ್ಲಿಂದ ಸ್ಪರ್ಧಿಸಲಿದ್ದಾರೆ ಎಂಬುದನ್ನು ಶೀಘ್ರವೇ ನಿರ್ಧರಿಸುವುದಾಗಿ ತಿಳಿಸಿದ್ದಾರೆ ಅಂಬಿ.
ಕೇಂದ್ರ ಮಾಜಿ ಸಚಿವ ಎಸ್.ಎಂ.ಕೃಷ್ಣ ಹಾಗೂ ಜಿಲ್ಲಾಧ್ಯಕ್ಷ ಎಂ.ಎಸ್.ಆತ್ಮಾನಂದ ಅವರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ ಎಂದಿದ್ದಾರೆ ಅಂಬರೀಶ್. ಒಂದು ವೇಳೆ ಅವರು ಮಂಡ್ಯದಿಂದ ಸ್ಪರ್ಧಿಸುವುದಾದರೆ ಶ್ರೀರಂಗಪಟ್ಟಣ ಅಭ್ಯರ್ಥಿ ನಿರ್ಧರಿಸಲಾಗುತ್ತದೆ.
ಮಂಡ್ಯ ಜಿಲ್ಲೆಯ ಏಳು ವಿಧಾಸಭಾ ಕ್ಷೇತ್ರಗಳಲ್ಲಿ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸುವಂತೆ ಪಕ್ಷದ ಕಾರ್ಯಕರ್ತರಿಂದ ಹಾಗೂ ಅಭಿಮಾನಿಗಳಿಂದ ಒತ್ತಡ ಬರುತ್ತಿದೆ. ತಾವು ಇನ್ನೂ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ನಿರ್ಧರಿಸಿಲ್ಲ ಎಂದು ಈ ಹಿಂದೊಮ್ಮೆ ಅಂಬಿ ಹೇಳಿದ್ದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಖಂಡಿತ ಬಹುಮತ ಪಡೆದು ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದು ಅಂಬರೀಶ್ ಭವಿಷ್ಯ ನುಡುದಿದ್ದಾರೆ. ಆದರೆ ತಾವು ಮುಖ್ಯಮಂತ್ರಿ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಪಕ್ಷ ತಮಗೆ ಯಾವ ಜವಾಬ್ದಾರಿ ವಹಿಸುತ್ತದೋ ಅದನ್ನು ತಾವು ಶಿರಸಾವಹಿಸುತ್ತೇವೆ ಎಂದಿದ್ದಾರೆ.
12ನೇ ಲೋಕಸಭಾ ಚುನಾವಣೆಯಲ್ಲಿ ಅಂಬರೀಶ್ ಅವರು ಜೆಡಿಎಸ್ ವಿರುದ್ಧ ಜಯಭೇರಿ ಬಾರಿಸಿದ್ದರು. ಬಳಿಕ ಕಾಂಗ್ರೆಸ್ ಗೆ ಸೇರ್ಪಡೆಯಾದ ಅವರು ಎರಡು ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದರು. 14 ಲೋಕಸಭೆ ಚುನಾವಣೆಯಲ್ಲಿ ಗೆದ್ದಾಗ ಅವರು ಮಾಹಿತಿ ಮತ್ತು ವಾರ್ತಾ ಖಾತೆಯ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದರು. ಕಾವೇರಿ ಜಲವಿವಾದ ನ್ಯಾಯಾಧಿಕರಣ ತೀರ್ಪಿನಿಂದ ಬೇಸತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. (ಆದರೆ ಅವರ ರಾಜೀನಾಮೆ ಔಪಚಾರಿಕವಾಗಿ ಸ್ವೀಕೃತವಾಗಲಿಲ್ಲ).
ಪ್ರಸ್ತುತ ಅಂಬಿ ಅವರು ಕೆಪಿಸಿಸಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂಬರೀಶ್ ಅವರು ಕಲಾವಿದರಾಗಿ ಜನರ ಮನಸ್ಸು ಗೆದ್ದಿದ್ದಾರೆ. ಆದರೆ ರಾಜಕಾರಣಿಯಾಗಿ ಅಲ್ಲ ಎಂಬ ಮಾತುಗಳೂ ಅವರ ವಿರುದ್ಧ ಕೇಳಿಬರುತ್ತಿವೆ. ಈ ಹಿಂದೊಮ್ಮೆ ಮಂಡ್ಯ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಎಂ ಕೃಷ್ಣಮೂರ್ತಿ ಅವರು, ಸಿನೆಮಾ ರಂಗದಲ್ಲಿ ನಿರ್ದೇಶಕನ ತಾಳಕ್ಕೆ ತಕ್ಕಂತೆ ನಟನೆ ಮಾಡುವಲ್ಲಿ ಅಂಬರೀಶ್ ಯಶಸ್ವಿಯಾಗಿದ್ದಾರೆ. ರಾಜಕೀಯ ನಟನೆಯಿಂದ ಜನರ ಸೇವೆ ಮಾಡಲು ಸಾಧ್ಯವಿಲ್ಲ. ಇದನ್ನು ಅಂಬರೀಶ್ ಅರಿತುಕೊಂಡು ಸಿನೆಮಾ ರಂಗದಲ್ಲಿಯೇ ಮುಂದುವರಿಯುವುದು ಒಳಿತು ಎಂದಿದ್ದರು. (ಒನ್ಇಂಡಿಯಾ ಕನ್ನಡ)


Click it and Unblock the Notifications











