ರಿಲ್ಯಾಕ್ಸ್ ಅಂತಾನೆ ಪ್ರೇಕ್ಷಕರಿಗೆ ಟೆನ್ಷನ್ ಕೊಡುತ್ತಿರುವ ಸತ್ಯ
'ರಿಲ್ಯಾಕ್ಸ್ ಸತ್ಯ' ಸದ್ಯ ಸ್ಯಾಂಡಲ್ ವುಡ್ ಅಂಗಳದಲ್ಲಿ ಸದ್ದು ಮಾಡುತ್ತಿರುವ ಸಿನಿಮಾ. ಕನ್ನಡದಲ್ಲಿ ಪ್ರತಿ ವಾರ ಸಾಕಷ್ಟು ಸಿನಿಮಾಗಳ ಟ್ರೇಲರ್ ಗಳು ಬಿಡುಗಡೆ ಆಗುತ್ತಲೇ ಇರುತ್ತವೆ. ಆದರೆ, ಇವುಗಳ ನಡುವೆ ಬಂದ 'ರಿಲ್ಯಾಕ್ಸ್ ಸತ್ಯ' ಟ್ರೇಲರ್ ನೋಡುತ್ತಿದ್ದರೆ ಇದು ಸಾಮಾನ್ಯ ಚಿತ್ರಗಳಿಗಿಂತ ವಿಭಿನ್ನವಾಗಿದೆ ಎನ್ನಿಸುತ್ತಿದೆ.
'ಉರ್ವಿ' ಸಿನಿಮಾ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದ ನಾಯಕ ನಟ ಪ್ರಭು ಮುಂಡ್ಕೂರ್ 'ರಿಲ್ಯಾಕ್ಸ್ ಸತ್ಯ' ಚಿತ್ರದಲ್ಲಿ ಹೀರೋ ಆಗಿ ಅಭಿನಯ ಮಾಡಿದ್ದಾರೆ. ಮಾನ್ವಿತಾ ಹರೀಶ್ ನಾಯಕಿಯಾಗಿ ಅಭಿನಯಿಸಿದ್ದು 'ಉಗ್ರಂ' ಮಂಜು ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಈ ಮೂರು ಪಾತ್ರಗಳ ನಡುವೆ ಸುತ್ತುತ್ತದೆ.
'ಅಕಿರ' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭರವಸೆಯ ನಿರ್ದೇಶಕ ಎನ್ನಿಸಿಕೊಂಡ ನವೀನ್ ರೆಡ್ಡಿ 'ರಿಲ್ಯಾಕ್ಸ್ ಸತ್ಯ' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಪ್ರಕಾಶ್ ರೆಡ್ಡಿ ಚಿತ್ರವನ್ನು ನಿರ್ಮಾಣ ಮಾಡಿದ್ದು ಆನಂದ್ ರಾಜ ವಿಕ್ರಂ ಸಿನಿಮಾಗೆ ಸಂಗೀತ ನೀಡಿದ್ದಾರೆ.

ಸದ್ಯ ಬಿಡುಗಡೆ ಆಗಿರುವ ಟ್ರೇಲರ್ ನೋಡಿದರೆ 'ರಿಲ್ಯಾಕ್ಸ್ ಸತ್ಯ' ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಎನ್ನುವುದು ಗೊತ್ತಾಗುತ್ತೆ. ಅದಷ್ಟೇ ಅಲ್ಲದೆ ನಿರ್ದೇಶಕರು ಸಿನಿಮಾದ ಪೂರ್ತಿ ಕಾಮಿಡಿ ಎಲಿಮೆಂಟ್ಸ್ ಗಳನ್ನು ಕಾಯ್ದು ಕೊಂಡಿದ್ದಾರೆ ಎನ್ನುವ ಸೂಚನೆ ಸಿಗುತ್ತಿದೆ.

'ಅಕಿರ' ಸಿನಿಮಾ ಮೂಲಕ ಕಂಪ್ಲೀಟ್ ಕಮರ್ಷಿಯಲ್ ಚಿತ್ರವನ್ನು ನೀಡಿದ್ದ ನವೀನ್ ರೆಡ್ಡಿ ಈ ಭಾರಿ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಪ್ರೇಕ್ಷಕರ ಮುಂದೆ ತರಲಿದ್ದಾರೆ. ಈಗಾಗಲೇ ಕ್ವಾಲಿಟಿ ಮತ್ತು ಸಂಗೀತದ ಮೂಲಕ ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಿಸುತ್ತಿದೆ ರಿಲ್ಯಾಕ್ಸ್ ಚಿತ್ರದ ಟ್ರೇಲರ್ .


Click it and Unblock the Notifications











