'ಬೆಟ್ಟದ ಹುಲಿ' ಖ್ಯಾತಿಯ ಕೆ ಜಾನಕಿರಾಮ್ ವಿಧಿವಶ
ಕನ್ನಡ ಚಿತ್ರರಂಗದ ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಬದಲಾಗಿದ್ದ ಹಿರಿಯ ಛಾಯಾಗ್ರಾಹಕ ಕೆ.ಜಾನಕಿರಾಮ್ ಅವರು ಹೈದರಾಬಾದಿನಲ್ಲಿ ಬುಧವಾರ (ಡಿಸೆಂಬರ್ 10) ನಿಧನಹೊಂದಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಕಳೆದ ಕೆಲದಿನಗಳಿಂದ ಅವರು ಕೋಮಾ ಸ್ಥಿತಿಗೆ ತಲುಪಿದ್ದರು.
'ಒಲವೇ ಮಂದಾರ' ಖ್ಯಾತಿಯ ಶ್ರೀಕಿ ಮುಖ್ಯಭೂಮಿಕೆಯಲ್ಲಿದ್ದ 'ಸೆಂಟ್ರಲ್ ಜೈಲ್' ಚಿತ್ರ ಜಾನಕಿರಾಮ್ ನಿರ್ಮಾಣದ ಕೊನೆಯ ಕನ್ನಡ ಚಿತ್ರ. ಎಂಬತ್ತರ ದಶಕದಲ್ಲಿ ಜಾನಕಿರಾಮ್ ಅವರು ಜನಪ್ರಿಯ ಛಾಯಾಗ್ರಾಹಕರಾಗಿ ಗುರುತಿಸಿಕೊಂಡವರು.
ಭಕ್ತ ವಿಜಯ, ಶುಕ್ರದೆಸೆ, ಮಹಾತ್ಮ ಕಬೀರ್, ಕಲಿತರು ಹೆಣ್ಣೆ, ಸರ್ವಜ್ಞ ಮೂರ್ತಿ, ಬೆಟ್ಟದ ಹುಲಿ, ನಾಗಪೂಜ, ಬೆರೆತರೆ ಜೀವ, ಲಗ್ನಪತ್ರಿಕೆ, ಮಂಕುದಿಣ್ಣೆ, ಗಾಂಧಿನಗರ, ಭಾಗ್ಯದ ಬಾಗಿಲು, ಎರಡು ಮುಖ, ಸುವರ್ಣ ಭೂಮಿ, ಪುಣ್ಯ ಪುರುಷ, ಠಕ್ಕ ಬಿಟ್ರೆ ಸಿಕ್ಕ, ಸಂಶಯ ಫಲ, ಕಾಸಿದ್ರೆ ಕೈಲಾಸ, ಒಂದೇ ರೂಪ ಎರಡು ಗುಣ ಚಿತ್ರಗಳು ಜಾನಕಿರಾಮ್ ಅವರು ಕ್ಯಾಮೆರಾ ಹಿಡಿದಂತಹವು.

ಜಾನಕಿರಾಮ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. 2012ರಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ನಡೆಸಿಕೊಂಡು ಬರುತ್ತಿರುವ 'ಬೆಳ್ಳಿಹೆಜ್ಜೆ' ಕಾರ್ಯಕ್ರಮದಲ್ಲಿ ಜಾನಕಿರಾಮ್ ಅವರು ಭಾಗಿಯಾದ್ದರು.
ಅಂದಿನ ದಿನಗಳನ್ನು ಮೆಲುಕು ಹಾಕಿದ್ದ ಅವರು, "ನಮ್ಮ ಕಾಲದಲ್ಲಿ ಕ್ಯಾಮೆರಾಮೆನ್ ಗೆ ಕೇವಲ ಒಬ್ಬರೇ ಒಬ್ಬ ಸಹಾಯಕರಿರುತ್ತಿದ್ದರು. ಈಗ ಛಾಯಾಗ್ರಾಹಕರಿಗೆ ಏನಿಲ್ಲ ಎಂದರೂ ಆರು ಮಂದಿ ಸಹಾಯಕರಿರುತ್ತಾರೆ. ಈಗ ಪ್ರತಿಯೊಬ್ಬರೂ ಹಣಕ್ಕೆ ಪ್ರಾಮುಖ್ಯತೆ ಕೊಡುತ್ತಿದ್ದಾರೆ" ಎಂದು ತಮ್ಮ ಆವೇದನೆ ವ್ಯಕ್ತಪಡಿಸಿದ್ದರು.
ವರನಟ ಡಾ.ರಾಜ್ ಕುಮಾರ್ ನಾಯಕ ನಟರಾಗಿದ್ದ ಲಗ್ನಪತ್ರಿಕೆ ಚಿತ್ರವನ್ನು ನಿರ್ದೇಶಿಸಿದ್ದರು ಜಾನಕಿರಾಮ್. ಇದೇ ಕಥೆಯನ್ನು ಇಂದಿನ ಕಾಲಮಾನಕ್ಕೆ ಕೊಂಚ ಬದಲಾಯಿಸಿಕೊಂಡು ಮಾಡರ್ನ್ ಲಗ್ನಪತ್ರಿಕೆ ಚಿತ್ರವನ್ನು ನಿರ್ದೇಶಿಸುವುದಾಗಿ ಹೇಳಿದ್ದರು. ಆದರೆ ಅವರ ಕನಸು ನನಸಾಗಿಯೇ ಉಳಿಯಿತು.
ಜಾನಕಿರಾಮ್ ಅವರು ಮದುವೆಯಾಗದೆ ಏಕಾಂಗಿಯಾಗಿಯೇ ತಮ್ಮ ಜೀವನವನ್ನು ಕಳೆದರು. ತಮ್ಮ ಮದುವೆ ಬಗ್ಗೆ ಅವರು ಒಮ್ಮೆ ಹೀಗೆ ಹೇಳಿದ್ದರು, ತಾನು ಮದುವೆಯಾಗಬೇಕೆಂದಿದ್ದ ಹುಡುಗಿಯ ತಂದೆ ರು.10 ಸಾವಿರ ಠೇವಣಿ ಇಡುವಂತೆ ಹೇಳಿದ್ದರು. ಆದರೆ ತಮ್ಮ ಬಳಿ ಅಷ್ಟು ಹಣವಿರಲಿಲ್ಲ. ಹಾಗಾಗಿ ತಮ್ಮ ಮದುವೆ ಅಲ್ಲಿಗೆ ನಿಂತುಹೋಯಿತು ಎಂದಿದ್ದರು. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











