ದಾವಣಗೆರೆ: ತಾಂತ್ರಿಕ ದೋಷದಿಂದ RRR ಸಿನಿಮಾ ಪ್ರದರ್ಶನ ರದ್ದು: ಚಿತ್ರಮಂದಿರ ಗಾಜುಗಳು ಪುಡಿ-ಪುಡಿ
'ಬಾಹುಬಲಿ' ನಿರ್ದೇಶಕ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ 'ಆರ್ ಆರ್ ಆರ್' ಸಿನಿಮಾ ರಾಜ್ಯದಾದ್ಯಂತ ಬಿಡುಗಡೆಯಾಗಿದ್ದು, ದಾವಣೆಗೆರೆಯ ಜಗಳೂರಿನಲ್ಲಿ ಸಿನಿಮಾ ಪ್ರದರ್ಶನ ರದ್ದುಗೊಳಿಸಿದ್ದರಿಂದ ಪ್ರೇಕ್ಷಕರು ರೊಚ್ಚಿಗೆದ್ದ ಘಟನೆ ನಡೆದಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆರ್ ಆರ್. ಆರ್ ಸಿನಿಮಾದ ಹವಾ ಸೃಷ್ಟಿಸಿದೆ. ದೊಡ್ಡಮಟ್ಟದಾಗಿ ಹೆಸರು ಮಾಡುತ್ತಿದೆ. ಅಭಿಮಾನಿಗಳು ಎಲ್ಲೆಡೆ ದೊಡ್ಡ ದೊಡ್ಡ ಕಟೌಟ್ ಗಳಿಗೆ ಹಾಲಿನ ಅಭಿಷೇಕ ಸೇರಿದಂತೆ ಥಿಯೇಟರ್ ಗಳ ಮುಂದೆ ಕುಣಿದು ಕುಪ್ಪಳಿಸಿದ್ದಾರೆ.
ಆದರೆ ದಾವಣಗೆರೆ ಜಿಲ್ಲೆ ಜಗಳೂರಿನ ಭಾರತ್ ಚಿತ್ರಮಂದಿರದಲ್ಲಿ ಬೆಳಿಗ್ಗೆಯಿಂದ ಎರಡು ಶೋ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಂಡಿತ್ತು. ಮೂರನೇ ಶೋ ಪ್ರದರ್ಶನದ ವೇಳೆ ತಾಂತ್ರಿಕ ಸಮಸ್ಯೆಯಿಂದ ವಿಡಿಯೋ ಕಟ್ ಕಟ್ ಆಗುವುದಲ್ಲದೇ ಸೌಂಡ್ ಎಫೆಕ್ಟ್ ಬಾರದಿರುವುದಕ್ಕೆ ಅಭಿಮಾನಿಗಳು ಸಿಟ್ಟಿಗೆದ್ದರು.
Recommended Video

ಚಿತ್ರಮಂದಿರಕ್ಕೆ ಹಾನಿ ಮಾಡಿದ ಅಭಿಮಾನಿಗಳು
ಚಿತ್ರಮಂದಿರದವರ ವಿರುದ್ಧ ಕೋಪಗೊಂಡು ಪಿಓಪಿ ಶೀಟ್, ಗಾಜಿನ ವಸ್ತುಗಳನ್ನು ಒಡೆದರು ಹಾಗೂ ಚಿತ್ರಮಂದಿರದ ಸೀಟುಗಳನ್ನು ಮುರಿದು ಹಾಕಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಬಳಿಕ ಚಿತ್ರಮಂದಿರದವರು ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿ ಶೋ ರದ್ದುಮಾಡಿ ಟಿಕೆಟ್ ದರವನ್ನು ವಾಪಸ್ ನೀಡಿ ಕಳುಹಿಸಿದ್ದಾರೆ. ಆದರೆ ತಾಲೂಕಿನ ವಿವಿಧೆಡೆಗಳಿಂದ ಸಿನಿರಸಿಕರು ಬಂದಿದ್ದರು. ಸುಮಾರು 20 ರಿಂದ 30 ಕಿಲೋಮೀಟರ್ ಗ್ರಾಮೀಣ ಭಾಗದಿಂದ ಆಗಮಿಸಿದ ಅಭಿಮಾನಿಗಳು ನಿರಾಸೆಯಿಂದ ಮನೆ ಕಡೆ ಮುಖ ಮಾಡಿದರು. ತಾಂತ್ರಿಕ ದೋಷಕ್ಕೆ ಕೆಂಡಮಂಡಲರಾದ ಸಿನಿಮಾ ಅಭಿಮಾನಿಗಳು ಚಿತ್ರಮಂದಿರದ ವಿರುದ್ಧ ಘೋಷಣೆ ಹಾಕಿದರು.

ನಿರ್ಲಕ್ಷದಿಂದ ತಾಂತ್ರಿಕ ಸಮಸ್ಯೆ?
ಇನ್ನು ಈ ಭಾಗದಲ್ಲಿ ಜ್ಯೂನಿಯರ್ ಎನ್ ಟಿ ಆರ್ ಹಾಗೂ ರಾಮ್ ಚರಣ್ ತೇಜ್ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ಬೆಳಿಗ್ಗೆಯಿಂದಲೇ ಕಾದುಕಾದು ಸುಸ್ತಾಗಿದ್ದರು. ಟಿಕೆಟ್ ಸಿಕ್ಕ ಸಂಭ್ರಮದಲ್ಲಿ ಸಿನಿಮಾ ನೋಡುತ್ತಿದ್ದರು. ಎರಡು ಪ್ರದರ್ಶನ ಯಶಸ್ವಿಯಾಗಿ ನಡೆದಿದೆ. ಆದ್ರೆ, ಮೂರನೇ ಮತ್ತು ನಾಲ್ಕನೇ ಪ್ರದರ್ಶನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಆದ್ರೆ, ನಿರ್ಲಕ್ಷ್ಯ ವಹಿಸಲಾಗಿದೆ. ಕೆಲಸ ಬಿಟ್ಟು ನೆಚ್ಚಿನ ನಾಯಕನ ಸಿನಿಮಾ ನೋಡಲು ಬಂದರೆ ಹೀಗಾಗುವುದಾ. ನಮಗಂತೂ ತುಂಬಾ ಬೇಸರವಾಗಿದೆ ಎಂದು ಚಿತ್ರ ವೀಕ್ಷಿಸಲು ಬಂದಿದ್ದವರು ಹೇಳಿದರು.

ಬೇಸರ ವ್ಯಕ್ತಪಡಿಸಿದ ಸಿನಿ ರಸಿಕರು
ಇನ್ನು ಎಸ್. ಎಸ್. ರಾಜಮೌಳಿಯವರು ನಿರ್ದೇಶಿಸಿರುವ ಬಹುನಿರೀಕ್ಷಿತ ಚಿತ್ರ. ಬಾಹುಬಲಿ-2 ನಂತರ ಬಹುದೊಡ್ಡ ಸಿನಿಮಾ ಇದಾಗಿದ್ದು, ಜ್ಯೂನಿಯರ್ ಎನ್ ಟಿಆರ್ ಹಾಗೂ ರಾಮ್ ಚರಣ್ ತೇಜ್ ಒಟ್ಟಿಗೆ ನಟಿಸಿರುವ ಮೊದಲ ಸಿನಿಮಾ. ಈ ಅದ್ಬುತ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಚಿತ್ರ ನೋಡಲು ಆಗದೇ ಇದ್ದದ್ದು ತುಂಬಾನೇ ಬೇಸರವಾಯಿತು ಎಂದು ಸಿನಿರಸಿಕರು ನೋವು ತೋಡಿಕೊಂಡರು.

ತೆಲಂಗಾಣ-ಆಂಧ್ರದಲ್ಲೂ ಗಲಾಟೆ
ದಾವಣೆಗೆರೆ ಮಾತ್ರವಲ್ಲದೆ, ಆಂಧ್ರ-ತೆಲಂಗಾಣದ ಕೆಲವು ಭಾಗಗಳಲ್ಲಿಯೂ ಈ ರೀತಿಯ ಘಟನೆಗಳು ನಡೆದಿವೆ. ಆಂಧ್ರದ ಪಟ್ಟಣವೊಂದರಲ್ಲಿ ರಾತ್ರಿ ಶೋ ಹಾಕಲು ತಡವಾಗಿದ್ದರಿಂದ ಕಾಂಪೌಂಡ್ ಹಾರಿ ಚಿತ್ರಮಂದಿರ ಬಾಗಿಲು ವೀಕ್ಷಕರು ಚಿತ್ರಮಂದಿರ ಪ್ರವೇಶಿಸಿದ್ದಾರೆ. ತೆಲಂಗಾಣದಲ್ಲಿ ಸಹ ಶೋ ತಡ ಮಾಡಿದ್ದಕ್ಕೆ ಚಿತ್ರಮಂದಿರಗಳ ಗಾಜುಗಳನ್ನು ಪುಡಿ ಮಾಡಿರುವ ಘಟನೆ ವರದಿ ಆಗಿದೆ.


Click it and Unblock the Notifications











