ಜನ್ಮದಿನೋತ್ಸವದಂದು ವಿಷ್ಣುದಾದಾ ಸ್ಮರಣೆ ಮಾಡಿದ ಕನ್ನಡ ಚಿತ್ರರಂಗ
ಇವತ್ತು (ಸೆಪ್ಟೆಂಬರ್ 18) 'ದಿ ಮ್ಯಾನ್ ಆಫ್ ಮಿಲಿಯನ್ ಹಾರ್ಟ್ಸ್' ಡಾ. ವಿಷ್ಣುವರ್ಧನ್ ರವರ ಜನ್ಮದಿನೋತ್ಸವ. 'ಕೋಟಿಗೊಬ್ಬ' ನಮ್ಮನ್ನೆಲ್ಲ ಅಗಲಿ ವರ್ಷಗಳೇ ಉರುಳಿದರೂ, ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಮಾತ್ರ 'ಸಾಹಸ ಸಿಂಹ'ನ ಹುಟ್ಟುಹಬ್ಬದ ಸಂಭ್ರಮ ಜೋರಾಗಿದೆ.
ನೆಚ್ಚಿನ ನಟನ ಜನ್ಮದಿನದಂದು ಸಸಿ ನೆಡುವ ಮೂಲಕ ಅಭಿಮಾನಿಗಳು 'ಯಜಮಾನ'ನ ಹುಟ್ಟುಹಬ್ಬವನ್ನ ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ. ಇನ್ನೂ ಚಿತ್ರರಂಗದ ನಟ-ನಟಿಯರು ಕೂಡ ಡಾ.ವಿಷ್ಣುವರ್ಧನ್ ಸ್ಮರಣೆ ಮಾಡುವಲ್ಲಿ ತಲ್ಲೀನರಾಗಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ಕನ್ನಡ ಚಿತ್ರರಂಗದ ಸ್ಟಾರ್ ನಟರು ಡಾ.ವಿಷ್ಣುವರ್ಧನ್ ರವರ ಜನ್ಮದಿನದ ಪ್ರಯುಕ್ತ ಸ್ಮರಣೆ ಮಾಡಿರುವುದು ಹೀಗೆ...

ಕಡೆ ಉಸಿರಿನವರೆಗೂ ನೆನಪಿಡುವೆ...
''ನೀವೇ ಇಷ್ಟ ಪಟ್ಟು ನನ್ನನ್ನ, ಪರಿಮಳ ಹಾಗೂ ಯತಿಯನ್ನ ಮನೆಗೆ ಕರೆಯಿಸಿ, ಕೈಯಾರೆ ಊಟ ಬಡಿಸಿ ಪ್ರೀತಿಯಿಂದ ತಿನ್ನಿಸಿ, ಅಕ್ಕರೆಯಿಂದ ಮಾತಾಡಿಸಿ ಹರಸಿದ ಕ್ಷಣ ಕಡೆ ಉಸಿರಿನವರೆಗೂ ನೆನಪಿಡುವೆ. ಹುಟ್ಟುಹಬ್ಬದ ಶುಭಾಶಯಗಳು'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ನಿಮ್ಮ ನಗು ನಮ್ಮ ಹೃದಯದಲ್ಲಿ ಇರುತ್ತದೆ
''ನಿಮ್ಮ ಈ ನಗು ಸದಾ ನಮ್ಮ ಹೃದಯದಲ್ಲಿ ಇರುತ್ತದೆ. ನಿಮ್ಮನ್ನ ಮೊದಲ ಬಾರಿ ಭೇಟಿ ಮಾಡಿದಾಗ ಜಗ್ಗೇಶ್ ಇನ್ನೂ ಹೇಳಿಕೊಳ್ಳುವ ಕಲಾವಿದರಾಗಿ ಬೆಳೆದಿರಲಿಲ್ಲ. ಆದರೂ ನಮ್ಮ ನೀವು ಚೆನ್ನಾಗಿ ನೋಡಿಕೊಂಡ್ರಿ. ಇದನ್ನ ನಾ ಎಂದೂ ಮರೆಯಲು ಸಾಧ್ಯವಿಲ್ಲ'' ಎಂದು ಪರಿಮಳಾ ಜಗ್ಗೇಶ್ ಟ್ವೀಟಿಸಿದ್ದಾರೆ.

ಹೆಸರಿನಲ್ಲಿಯೇ ಘರ್ಜನೆ ಇದೆ
''ವಿಷ್ಣುವರ್ಧನ್... ಹೆಸರಿನಲ್ಲಿಯೇ ಘರ್ಜನೆ ಇದೆ'' - ರಮೇಶ್ ಅರವಿಂದ್, ನಟ

ಮಿಸ್ ಮಾಡಿಕೊಳ್ಳುತ್ತಿದ್ದೇನೆ
''ನಿಮ್ಮಿಂದ ಸ್ಫೂರ್ತಿ ಪಡೆದು ಅನೇಕರು ಕಲಾವಿದರಾಗಿದ್ದಾರೆ. ಒಳ್ಳೆಯ ಮನುಷ್ಯರಾಗಿದ್ದಾರೆ. ನಿಮ್ಮನ್ನ ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿಮ್ಮ ಹುಟ್ಟುಹಬ್ಬದಂದು... ನಿಮ್ಮ ಸವಿನೆನಪಿನಲ್ಲಿ....'' - ಗಣೇಶ್, ನಟ

ನಾನೇ ಧನ್ಯ
''ಇಂದು ವಿಷ್ಣು ಸರ್ ರವರ ಜನ್ಮದಿನೋತ್ಸವ. ಅವರೊಂದಿಗೆ ತೆರೆಹಂಚಿಕೊಳ್ಳುವ ಅವಕಾಶ ಪಡೆದುಕೊಂಡ ನಾನೇ ಧನ್ಯ'' - ದರ್ಶನ್, ನಟ

ನನ್ನ ಹೀರೋ
''ಡಾ.ವಿಷ್ಣುವರ್ಧನ್ ರವರೊಂದಿಗೆ ಕಳೆದ ಅಮೂಲ್ಯ ಕ್ಷಣಗಳಿಗೆ ಎಷ್ಟೇ ಧನ್ಯವಾದ ಸಲ್ಲಿಸಿದರೂ ಸಾಲದು. ಅವರು ನನ್ನ ಹೀರೋ. ಸದಾ ಕಾಲ ಅವರೇ ನನಗೆ ಹೀರೋ. ಇಷ್ಟು ಬೇಗ ಅವರು ನಮ್ಮನ್ನ ಬಿಟ್ಟು ಹೋಗಬಾರದಿತ್ತು. ಸೆಪ್ಟೆಂಬರ್ 18 ಸದಾ ನನಗೆ ವಿಶೇಷವಾದ ದಿನ'' ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.


Click it and Unblock the Notifications











